ಕೋಲಾರದಲ್ಲಿ ಮಾತನಾಡಿದ ರಮೇಶ್ ಕುಮಾರ್ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಜತೆಗೆ ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ನೀಡುವ ಬಗ್ಗೆಯೂ ಅಭಿಪ್ರಾಯ ಹೇಳಿದ್ದಾರೆ.
ಕೋಲಾರ(ಮಾ. 21] ಸಂಸದ ಕೆ.ಎಚ್.ಮುನಿಯಪ್ಪ ಅವರ ಟಿಕೇಟ್ ವಿಚಾರದಲ್ಲಿ ನಾನು ಜಡ್ಜ್ ಅಲ್ಲ. ಇಲ್ಲಿ ಯಾರಿಗೂ ಸಹಮತ ಇಲ್ಲ, ಭಿನ್ನಮತನೂ ಇಲ್ಲ. ಎರಡೂ ಕಡೆಯವರು ಸರ್ವಾನುಮತದಿಂದ ನನ್ನ ಸ್ಪೀಕರ್ ಆಗಿ ಆಯ್ಕೆ ಮಾಡಿದ್ದಾರೆ ಎಂದು ಒಗಟಾಗಿ ಮಾತನಾಡುತ್ತಲೇ ಸ್ಪೀಕರ್ ರಮೇಶ್ ಕುಮಾರ್ ಅನೇಕ ವಿಚಾರಗಳನ್ನು ಹೇಳಿದರು.
ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದಲ್ಲಿರುವವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾಗಿ ನನ್ನ ಮನಸ್ಸಿನಲ್ಲಿರುವುದನ್ನ ಹೇಳುವುದಕ್ಕೆ ಆಗುವುದಿಲ್ಲ ಎಂದು ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ವ್ಯಂಗ್ಯದ ಮೂಲಕವೇ ಚಾಟಿ ಬೀಸಿದರು.
ಸ್ಪೀಕರ್ ರಮೇಶ್ ಕುಮಾರ್ ಮೇಲೆ ಈಶ್ವರಪ್ಪರಿಂದ ಇದೆಂಥಾ ಗಾದೆ ಪ್ರಯೋಗ
ಕೆ.ಎಚ್.ಮುನಿಯಪ್ಪ ಅವರಿಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗೆ ಮಲಗುವಿದಕ್ಕೆ ಇಷ್ಟವಿಲ್ಲ. ನಾನು ಗಂಡಸರೊಂದಿಗೆ ಮಲಗುವಿದಿಲ್ಲ. ನಾನು ನನ್ನ ಮನೆಯಲ್ಲಿ ಮಲಗುವೆ. ಸಪ್ತಪದಿಯೊಂದಿಗೆ ಮದುವೆಯಾಗಿರುವ ನನ್ನ ಪತ್ನಿಯೊಂದಿಗೆ ಸಂಭಂದವಿದೆ, ಅನೈತಿಕ ಸಂಭಂದ ಯಾವುದೂ ಇಲ್ಲ ಎಂದರು.
ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳಿಗೆ ಪ್ರಧಾನವಾಗಿ ಲಜ್ಜೆ ಇರಬೇಕು. ಸಾರ್ವಜನಿಕ ಜೀವನದಲ್ಲಿ ಲಜ್ಜಾಹೀನವಾಗಿ ಬದುಕಬಾರದು. ಜನರ ಮಾನ ಲಜ್ಜೆ ಕಳೆಯಬಾರದು ಎನ್ನುತ್ತ ಪರೋಕ್ಷವಾಗಿ ಮುನಿಯಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು. ಉಮೇಶ್ ಜಾಧವ್ ರಾಜೀನಾಮೆ ವಿಚಾರ ಮಾ. 25ಕ್ಕೆ ನಿಗದಿಯಾಗಿದೆ ಎಂದು ತಿಳಿಸಿದರು.