ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಶಾಕ್ ನೀಡಿದ ಚುನಾವಣಾ ಆಯೋಗ| ಸುಮಲತಾ-ನಿಖಿಲ್ ಚಲನಚಿತ್ರ ಪ್ರಸಾರಕ್ಕೆ ಬ್ರೇಕ್| ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಸುಮಲತಾ-ನಿಖಿಲ್ ಚಲನಚಿತ್ರ ಪ್ರಸಾರ ಮಾಡುವಂತಿಲ್ಲ| ಏ.18ರವರೆಗೂ ಇಬ್ಬರೂ ಅಭ್ಯರ್ಥಿಗಳ ಚಲನಚಿತ್ರ ಪ್ರಸಾರದ ಮೇಲೆ ನಿಷೇಧ|
ಬೆಂಗಳೂರು(ಮಾ.21): ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಚಲಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಏ.18ರಂದು ಮಂಡ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೂ ಸುಮಲತಾ ಮತ್ತು ನಿಖಿಲ್ ಅಭಿನಯಿಸಿರುವ ಯಾವುದೇ ಚಿತ್ರವನ್ನು ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಪ್ರಸಾರ ಮಾಡಲು ನಿಷೇಧ ಹೇರಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಮಂಡ್ಯ ಕ್ಷೇತ್ರದ ಚುನಾವಣಾಧಿಕಾರಿ ಎನ್.ಮಂಜುಶ್ರೀ, ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಬ್ಬರೂ ಅಭ್ಯರ್ಥಿಗಳ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.