ದೇವೇಗೌಡರ ಮನೆಯಲ್ಲೂ ಮೋದಿಗೆ ಓಟು| ಬಿಜೆಪಿ ನಾಯಕನ ಸ್ಫೋಟಕ ಹೇಳಿಕೆ
ಶಿವಮೊಗ್ಗ[ಏ.17]: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮನೆಯಲ್ಲೂ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವವರಿದ್ದಾರೆ. ಮೋದಿ ಪ್ರಧಾನಿಯಾಗಿ ವಿಪಕ್ಷದವರ ಮನೆಯಲ್ಲೂ ಮತ ಪಡೆಯುವ ಉತ್ತಮ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಮಂಗಳವಾರ ತಾಲೂಕಿನ ಗಾಜನೂರಿನ ಸರ್ಕಾರಿ ಪ್ರೌಢಶಾಲೆಯ ಮುಂಭಾಗ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲವರು ತೋರಿಕೆಗೆ ಮೋದಿಯನ್ನು ವಿರೋಧಿಸುತ್ತಾರೆ. ಆದರೆ ನಿಜಕ್ಕೂ ವಿರೋಧಿಗಳ ಮನಸ್ಸಿನಲ್ಲಿಯೂ ಮೋದಿ ಬಗ್ಗೆ ಗೌರವವಿದೆ. ಏಕೆಂದರೆ ಮೋದಿ ಆಡಳಿತದ ದಿಟ್ಟತನ ಅಷ್ಟುಪಾರದರ್ಶಕವಾಗಿದೆ ಎಂದರು.
ದೇವೇಗೌಡರ ಇಡಿ ಕುಟುಂಬವೇ ರಾಜಕಾರಣಕ್ಕೆ ಪದಾರ್ಪಣೆ ಮಾಡಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನನ್ನ ಆರೋಗ್ಯ ಸರಿಯಿಲ್ಲ ನಾನು ಎಷ್ಟುದಿನ ಬದುಕುತ್ತೇನೆ ಗೊತ್ತಿಲ್ಲ. ಹಾಗಾಗಿ ಮತಕೊಡಿ ಎಂದು ಹೇಳುತ್ತಾರೆ. 55 ವರ್ಷದ ವಯಸ್ಸಿನ ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಮಾತನಾಡಿದರೆ ಇನ್ನು 69 ವರ್ಷದ ಮೋದಿ ಇನ್ನೇನು ಹೇಳಬೇಕು? ಚುನಾವಣೆಗೆ ಇನ್ನೆರಡು ದಿನ ಇರುವಾಗ ಮುಖ್ಯಮಂತ್ರಿಗಳು ಅನಾರೋಗ್ಯದ ಕಥೆ ಹೇಳಿ ಹಾಸಿಗೆ ಹಿಡಿಯಬಹುದು. ಆದರೆ ಏ.18ರ ನಂತರ ಆರೋಗ್ಯವಾಗಿ ಓಡಾಡಿಕೊಂಡು ಇರುತ್ತಾರೆ ಎಂದು ಹೇಳಿದರು.
ಸತ್ತ ಹುಳುಗಳ ಲೆಕ್ಕ ಹಾಕಲಾಗದು:
ಪಾಕಿಸ್ತಾನದ ಬಾಲಕೋಟ್ನಲ್ಲಿದ್ದ ಭಯೋತ್ಪಾದಕ ತರಬೇತಿ ಕೇಂದ್ರದ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದಾಗ ಅದಕ್ಕೆ ವಿಪಕ್ಷಗಳು ಸಾಕ್ಷಿ ಕೊಡಿ ಎನ್ನುತ್ತಾರೆ. ಅಡಕೆ ಮರಕ್ಕೆ, ಫಸಲಿಗೆ ಹತ್ತಿದ ಹುಳ ನಾಶವಾಗಲಿ ಎಂದು ಔಷಧಿ ಸಿಂಪಡಿಸುತ್ತಾರೆ. ಹುಳು ಸತ್ತಮೇಲೆ ಅದನ್ನು ಲೆಕ್ಕ ಹಾಕುತ್ತಾ ಕೂರಲು ಸಾಧ್ಯವೆ? ಎಂದರು.