ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ. ಹೀಗಿರುವಾಗ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಹೇಗಿದೆ? ಪ್ರಮುಖ ಅಭ್ಯರ್ಥಿಗಳು ಯಾರು? ಇಲ್ಲಿದೆ ವಿವರ
ಉಡುಪಿ[ಮಾ.25]: ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಣದಲ್ಲಿರುವ ಪ್ರಮುಖರು.
ಸದ್ಯಕ್ಕೆ ರೇಸಿನಲ್ಲಿ ಶೋಭಾ ಮುಂದಿದ್ದರೂ ಅವರ ಪಕ್ಷದಲ್ಲಿಯೇ ಗೋಬ್ಯಾಕ್ ಶೋಭಾ, ಶೋಭಾ ಅಲ್ಲ ನೋಟಾ ಎಂಬ ಅಭಿಯಾನಗಳು ನಡೆಯುತ್ತಿವೆ. ಶೋಭಾ ಅವರೊಂದಿಗೆ ಟಿಕೆಟ್ಗೆ ಸ್ಪರ್ಧೆಯೊಡ್ಡಿದ್ದ ಜಯಪ್ರಕಾಶ್ ಹೆಗ್ಡೆ ನಡೆ ಕೂಡ ನಿಗೂಢವಾಗಿದೆ.
ಮೈತ್ರಿ ಒಪ್ಪಂದದಂತೆ ಜೆಡಿಎಸ್ಗೆ ಒಲಿದಿರುವ ಈ ಕ್ಷೇತ್ರದಲ್ಲಿ ಪ್ರಮೋದ್ ಅವರು ಕಾಂಗ್ರೆಸ್ ತೊರೆದು ‘ತೆನೆ’ ಹೊತ್ತುಕೊಂಡಿದ್ದಾರೆ. ಇದರಿಂದ ಇಲ್ಲಿ ಇಲಿಯಂತಿದ್ದ ಜೆಡಿಎಸ್ಗೆ ಹುಲಿ ಬಲ ಬಂದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಕಾರ್ಯಕರ್ತರ ಮುಜುಗರ, ಅಸಮಾಧಾನ ಬಹಿರಂಗವಾಗುತ್ತಿದೆ.
ಕಾಂಗ್ರೆಸ್ನಿಂದ ಟಿಕೆಟ್ ಆಕಾಕ್ಷಿಯಾಗಿದ್ದ ಅಮೃತ್ ಶೆಣೈ ಬಂಡಾಯ ಬಾವುಟ ಹಾರಿಸಿದ್ದು, ಪಕ್ಷೇತರನಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಮೃತ್ ಶೆಣೈ ಅವರ ಸ್ಪರ್ಧೆ ಇನ್ನೂ ನಿರ್ಧಾರವಾಗಬೇಕಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...