
ಕೋಲಾರ[ಮಾ.25]: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿರುವ ಮಾಜಿ ಸಚಿವ ಕೆ. ಎಚ್.ಮುನಿಯಪ್ಪ ಎಂಟನೇ ಬಾರಿಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಬಿಬಿಎಂಪಿ ಸದಸ್ಯ ಮುನಿಸ್ವಾಮಿ ಎಂಬವರು ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಸತತ 7 ಬಾರಿ ಗೆದ್ದಿರುವ ಮುನಿಯಪ್ಪ ಅವರಿಗೆ ಈ ಬಾರಿ ಮಿತ್ರ ಪಕ್ಷ ಜೆಡಿಎಸ್ ಮಾತ್ರವಲ್ಲದೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದೆ. ಮುನಿಯಪ್ಪ ಅವರ ವಿರುದ್ಧ ಸಮರ ಸಾರಿರುವ ಭಿನ್ನಮತೀಯ ಗುಂಪುಗಳು ಅವರನ್ನು ಸೋಲಿಸಿಯೇ ತೀರುವುದಾಗಿ ಸವಾಲು ಹಾಕಿವೆ.
ಇನ್ನು ಕಾಂಗ್ರೆಸ್ ಭದ್ರ ಕೋಟೆ ಎನಿಸಿಕೊಂಡಿರುವ ಕೋಲಾರದಲ್ಲಿ ಎರಡು ಬಾರಿ ಬಿಜೆಪಿ ಅಲ್ಪ ಅಂತರದ ಸೋಲು ಅನುಭವಿಸಿತ್ತು. ಈ ಬಾರಿ ಮುನಿಯಪ್ಪ ಅವರ ವಿರುದ್ಧ ನಿಂತಿರುವ ಭಿನ್ನಮತೀಯರ ಗುಂಪು ಬಿಜೆಪಿಗೆ ಬೆಂಬಲ ನೀಡುವ ಸೂಚನೆಗಳು ಕಂಡು ಬರುತ್ತಿರುವುದರಿಂದ ಸಹಜವಾಗಿಯೇ ಫಲಿತಾಂಶದ ಬಗ್ಗೆ ಕುತೂಹಲ ಮನೆ ಮಾಡಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...