ಕಾಂಗ್ರೆಸ್ ನ ಎಲ್ಲಾ ಸಚಿವರಿಗೆ ಮುಖಭಂಗ : ಡಿಕೆಶಿಗೆ ಮಾತ್ರವೇ ಸಕ್ಸಸ್

By Web DeskFirst Published May 24, 2019, 10:24 AM IST
Highlights

ಕಾಂಗ್ರೆಸ್ ನ ಎಲ್ಲಾ ಸಚಿವರಿಗೂ ಕೂಡ ಮುಖಭಂಗವಾಗಿದೆ. ಕಾರಣ ಇಲ್ಲಿದೆ. ! ಟ್ರಬಲ್ ಶೂಟರ್ ಡಿಕೆಶಿಗೆ ಮಾತ್ರವೇ ಸಕ್ಸಸ್

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯಲ್ಲಿ ವಿವಿಧ ಜಿಲ್ಲೆಗಳ ಉಸ್ತುವಾರಿ ಹೊತ್ತಿದ್ದ ಬಹುತೇಕ ಎಲ್ಲ ಕಾಂಗ್ರೆಸ್ ಸಚಿವರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸೋತಿದ್ದು, ಬಿಜೆಪಿ ಎದುರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ನಡುವೆ ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು
ಬಿಟ್ಟರೆ ಮತ್ತೆಲ್ಲ ಸಚಿವರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಪ್ರತಿಪಕ್ಷ ಸ್ಥಾನವನ್ನೂ ಸಹ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್‌ಗೆ ಸಂಸತ್ತಿನಲ್ಲಿ ನಾಯಕನಾಗಿ ಇದ್ದಂತೆ ಕೇವಲ 44 ಸಂಸದರೊಂದಿಗೆ ಸಮರ್ಥವಾಗಿ ಮುನ್ನಡೆಸಿದ್ದಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ.

ಸ್ವತಃ ಅವರ ಪುತ್ರ ಪ್ರಿಯಾಂಕ ಖರ್ಗೆಯೇ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ತಮ್ಮ ತಂದೆಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ. ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ ಸೋತಿದ್ದು, ಅಲ್ಲಿನ ಉಸ್ತುವಾರಿ ಸಚಿವ ಎಚ್.ಎನ್.ಶಿವಶಂಕರ ರೆಡ್ಡಿ ಮೈತ್ರಿ ಪಕ್ಷಗಳ ಮುಖಂಡರನ್ನು ಒಗ್ಗೂಡಿಸಿ ಹೋರಾಟ ನಡೆಸುವಲ್ಲಿ ವಿಫಲರಾಗಿದ್ದೇ ಸೋಲಿಗೆ ಕಾರಣವೆನ್ನಲಾಗಿದೆ. ಈ ಹಿಂದೆ ಬಳ್ಳಾರಿ ಉಪಚುನಾವಣೆಯಲ್ಲಿ ಉಗ್ರಪ್ಪ ಅವರನ್ನು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿಕೊಂಡು ಬಂದು ಬೀಗಿದ್ದ ಡಿ.ಕೆ.ಶಿವಕುಮಾರ್ ಈ ಚುನಾವಣೆ ಯಲ್ಲಿ ಉಗ್ರಪ್ಪ ಅವರನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರೋಧಿ ಅಲೆ ಇದ್ದರು ಜಿಲ್ಲಾ ಉಸ್ತುವಾರಿ ವಹಿಸಿದ್ದ ಕಾಂಗ್ರೆಸ್ ಸಚಿವೆ ಜಯಮಾಲಾ ಮೈತ್ರಿ ಅಭ್ಯರ್ಥಿ ಪ್ರಮೋದ್ಮಧ್ವರಾಜ್ ಅವರನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ. ದಕ್ಷಿಣ ಕನ್ನಡದ ಉಸ್ತುವಾರಿ ಸಚಿವ ಯು.ಟಿ.ಖಾದರ್, ಹಾವೇರಿ ಉಸ್ತುವಾರಿ ಸಚಿವ ಜಮೀರ್ ಅಹಮದ್, ಚಿಕ್ಕಬಳ್ಳಾಪುರದ ಉಸ್ತುವಾರಿ ಎನ್.ಎಚ್.ಶಿವಶಂಕರ ರೆಡ್ಡಿ,
ಶಿವಾನಂದ ಪಾಟೀಲ್, ತುಮಕೂರು ಉಸ್ತುವಾರಿ ಡಾ.ಜಿ.ಪರಮೇಶ್ವರ್, ವಿಜಯಪುರ ಉಸ್ತುವಾರಿ ಹೊತ್ತಿದ್ದ ಗೃಹಸಚಿವ ಎಂ.ಬಿ.ಪಾಟೀಲ್ ಮೈತ್ರಿ ಅಭ್ಯರ್ಥಿ ಸುನೀತಾ ಚೌವ್ಹಾಣ್ ಗೆಲ್ಲಿಸುವಲ್ಲಿ ಸೋತಿದ್ದಾರೆ. 

click me!