ಕನ್ನಡಿಗ ಗೋಪಾಲ್ ಶೆಟ್ಟಿವಿರುದ್ಧ ರಂಗೀಲಾ ನಟಿ ಸೆಣಸು| ಪತ್ರಕರ್ತೆ ಸುಪ್ರಿಯಾ ಶ್ರೀನಾತೆಗೆ ಉ.ಪ್ರ.ದ ಮಹಾರಾಜ್ಗಂಜ್ನಿಂದ ಕಣಕ್ಕೆ| ಮೀರಾಕುಮಾರ್ ಮತ್ತೆ ಸಸಾರಾಂನಲ್ಲಿ ಅಖಾಡಕ್ಕೆ
ನವದೆಹಲಿ[ಮಾ.30]: ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡರ್ ಅವರಿಗೆ ಪಕ್ಷ ಮುಂಬೈ ಉತ್ತರ ಲೋಕಸಭಾದಿಂದ ಟಿಕೆಟ್ ನೀಡಲಾಗಿದೆ. ಶುಕ್ರವಾರ ಬಿಡುಗಡೆಯಾದ ಕಾಂಗ್ರೆಸ್ 12ನೇ ಪಟ್ಟಿಯಲ್ಲಿ ಊರ್ಮಿಳಾ ಹೆಸರನ್ನು ಘೋಷಿಸಲಾಯಿತು.
ಈ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ, ಕನ್ನಡಿಗ ಗೋಪಾಲ್ ಶೆಟ್ಟಿವಿರುದ್ಧ ಊರ್ಮಿಳಾ ಸೆಣೆಸಲಿದ್ದು, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಖಾಡ ರಂಗೇರಲಿದೆ.
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಊರ್ಮಿಳಾ, ದ್ವೇಷದ ರಾಜಕೀಯ ವಾತಾವರಣ ತೊಡೆದು ಹಾಕಲು ರಾಜಕಾರಣಕ್ಕೆ ಬಂದಿರುವುದಾಗಿ ತಿಳಿಸಿದ್ದರು.
ಮೀರಾಗೆ ಸಸಾರಾಂ:
ಇದೇ ವೇಳೆ, ಮಾಜಿ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು ತಮ್ಮ ಸಾಂಪ್ರದಾಯಿಕ ಬಿಹಾರದ ಸಸಾರಾಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇ.ಟಿ. ನೌ ಸಂಪಾದಕಿಗೂ ಟಿಕೆಟ್!
ಇನ್ನು ಹಿರಿಯ ಪತ್ರಕರ್ತೆ, ‘ಇ.ಟಿ. ನೌ’ ವಾಣಿಜ್ಯ ಸುದ್ದಿವಾಹಿನಿಯ ಸಂಪಾದಕಿ ಸುಪ್ರಿಯಾ ಶ್ರೀನಾತೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರಿಗೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಲಭಿಸಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...