ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಶಿಕ್ಷಣ!

By Suvarna NewsFirst Published Oct 22, 2021, 4:43 PM IST
Highlights

ಕರ್ನಾಟಕ(Karnataka)ದ ಮುಖ್ಯಮಂತ್ರಿಗಳು ಇತ್ತೀಚೆಗಷ್ಟೇ ಬಡವರ ಮನೆ ಬಾಗಿಲಿಗೇ ರೇಷನ್ ಪಡಿತರ ವಿತರಣೆಯ ಬಗ್ಗೆ ಘೋಷಿಸಿದ್ದರು. ತಮಿಳುನಾಡಿನಲ್ಲೂ (Tamil Nadu) ಮನೆ ಬಾಗಲಿಗೆ ಶಿಕ್ಷಣ(Education at Doorstep)ವನ್ನು ಕೊಂಡೊಯ್ಯುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಕೋವಿಡ್‌ನಿಂದಾಗಿ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಾಗಾಗಿ, ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ.

ದೇಶದಲ್ಲಿ ಈಗ ಕೋವಿಡ್(Covid -19) ವೈರಸ್  ಆರ್ಭಟ ಕಡಿಮೆಯಾಗುತ್ತಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳ ಮುಖದಲ್ಲಿ ಮತ್ತೆ ಸಂತಸ ಹೊಮ್ಮುತ್ತಿದೆ. ಬರೋಬ್ಬರಿ 20 ತಿಂಗಳ ‌ಬಳಿಕ ಮಕ್ಕಳಿಗಾಗಿ ಶಾಲೆಗಳ ಬಾಗಿಲುಗಳು ತೆರೆಯುತ್ತಿವೆ. ಆದ್ರೆ ಇಷ್ಟು ದಿನ ಶಾಲೆಗಳನ್ನು ‌ಮುಚ್ಚಿದ್ದಕ್ಕೆ ಮಕ್ಕಳಿಗೆ ಆಗಿರುವ ನಷ್ಟ  ಅಷ್ಟಿಷ್ಟಲ್ಲ. ಕೆಲವರಿಗೆ ಆನ್‌ಲೈನ್ ಪಾಠವಿದ್ರೂ ಏನೂ ಅರ್ಥವಾಗದ ಪರಿಸ್ಥಿತಿ. ಇನ್ನು ಕೆಲ ಮಕ್ಕಳು ಅನಿವಾರ್ಯ ಕಾರಣಗಳಿಂದಾಗಿ ಕಲಿಕೆಗೆ ವಿದಾಯ ಹೇಳಿದ್ದಾರೆ. ಇದು ಕೇವಲ ಒಂದು ರಾಜ್ಯದ ಪರಿಸ್ಥಿತಿಯಲ್ಲ. ಬಹುತೇಕ ರಾಜ್ಯಗಳ ಸ್ಥಿತಿಯೂ ಹೀಗೆ ಇದೆ. ಇದನ್ನು ಸರಿದೂಗಿಸಲು ತಮಿಳುನಾಡು ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ತಮಿಳುನಾಡು ಸರ್ಕಾರವು 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮನೆ ಬಾಗಿಲಿಗೆ ಶಿಕ್ಷಣ (Education at Doorstep) ಯೋಜನೆ ಆರಂಭಿಸಲು ಮುಂದಾಗಿದೆ. ಕೋವಿಡ್‌ನಿಂದಾಗಿ (COVID-19) ಲಾಕ್‌ಡೌನ್‌ ಸಮಯದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ವಿದ್ಯಾರ್ಥಿಗಳಿಗೆ ಉಂಟಾಗಿರುವ ಕಲಿಕೆಯ ಅಂತರವನ್ನು ಬಗೆಹರಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 2020ರಿಂದ ಎರಡು ಲಾಕ್‌ಡೌನ್ ಜಾರಿಗೊಳಿಸಿದ ನಂತರ ಮಕ್ಕಳು ಶಿಕ್ಷಣದಿಂದ ಬಹಳ ವಂಚಿತರಾಗಿದ್ದಾರೆ. ಹೀಗೆ ತರಗತಿಗಳನ್ನು ಮಿಸ್ ಮಾಡಿಕೊಂಡ ಮಕ್ಕಳಿಗೆ ಶೈಕ್ಷಣಿಕ ಕೌಶಲ್ಯವನ್ನು ನೀಡಲು ಈ ಯೋಜನೆಯನ್ನು ಆರು ತಿಂಗಳವರೆಗೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

 ಪ್ರಾಯೋಗಿಕವಾಗಿ ಆರಂಭಿಕ ಹಂತದಲ್ಲಿ ಈ ಇಲ್ಲಂ ತೆಡಿ ಕಲ್ವಿ (Education at Doorstep) ಯೋಜನೆಯನ್ನು ತಮಿಳುನಾಡಿನ 12 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಕಡಲೂರು (Cuddalore), ದಿಂಡಿಗಲ್ (Dindigul), ಈರೋಡ್ (Erode), ಕಾಂಚೀಪುರಂ (Kanchipuram), ಕನ್ಯಾಕುಮಾರಿ (Kanyakumari), ಕೃಷ್ಣಗಿರಿ (Krishnagiri), ಮಧುರೈ (Madurai), ನಾಗಪಟ್ಟಣಂ (Nagappattinam), ನೀಲಗಿರಿ (Neelagiri), ತಂಜಾವೂರು (Tanjavur), ತಿರುಚಿ (Trichy) ಮತ್ತು ವಿಲ್ಲುಪುರಂ (Villupuram) ಜಿಲ್ಲೆಗಳಲ್ಲಿ ಮೊದಲಿಗೆ ಈ ಯೋಜನೆಯನ್ನು ಅಳವಡಿಸಲಾಗುವುದು.

ಅ.25ರಿಂದ 1-5ನೇ ಕ್ಲಾಸ್‌ ಶುರು: ಹೀಗಿವೆ ಷರತ್ತುಗಳು!

ಈಗಾಗಲೇ ಸರ್ಕಾರ, illamthedikalvi.tnschools.gov.in ವೆಬ್ ಪೋರ್ಟಲ್ ಆರಂಭಿಸಿದೆ. ಶಿಕ್ಷಕರು, ಸ್ವಯಂಸೇವಕರು, ಎನ್‌ಜಿಒಗಳು ಮತ್ತು ಶಿಕ್ಷಣ ತಜ್ಞರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ.  ಯೋಜನೆ ಜಾರಿಗೆ ಈ  ವರ್ಷದಿಂದ ಅಂದಾಜು  200 ಕೋಟಿ ರೂಪಾಯಿ ವೆಚ್ಚ ನಿರೀಕ್ಷಿಸಲಾಗಿದೆ. ಇಲ್ಲಂ ತೆಡಿ ಕಲ್ವಿ (Education at Doorstep) ಯೋಜನೆ ಅಡಿಯಲ್ಲಿ, ಸ್ವಯಂಸೇವಕರು ಪ್ರತಿ ಸಂಜೆ ಒಂದು ಗಂಟೆಯವರೆಗೆ ವಿದ್ಯಾರ್ಥಿಗಳು ಇರುವಲ್ಲಿಗೆ ಹೋಗಿ ಕಲಿಕೆಯಲ್ಲಿ ಅವರನ್ನು ತೊಡಗಿಸಬೇಕು.
 

"ರಾಜ್ಯದಾದ್ಯಂತದ ಸ್ವಯಂಸೇವಕರಿಗೆ ನೋಂದಣಿ ಮುಕ್ತವಾಗಿದೆ. ಈ ಯೋಜನೆಯು ಮೊದಲು 12 ಜಿಲ್ಲೆಗಳಲ್ಲಿ ಆರಂಭವಾಗುತ್ತದೆ. ನಾವು ಪ್ರಾಯೋಗಿಕ ಯೋಜನೆಯಿಂದ ಬಹಳಷ್ಟು ಕಲಿಯಲು ಮತ್ತು ಪ್ರತಿಕ್ರಿಯೆಯನ್ನು ಕಾರ್ಯಗತಗೊಳಿಸಲು ನಿರೀಕ್ಷಿಸುತ್ತೇವೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಈ ತರಗತಿಗಳಿಗೆ ಹಾಜರಾಗಬಹುದು, ಇದು ಚಟುವಟಿಕೆ ಆಧಾರಿತ ಮತ್ತು ಆನಂದಿಸಲು ಮತ್ತು ಕಲಿಯಲು ಅವಕಾಶವನ್ನು ನೀಡುತ್ತದೆ. ಈ ತರಗತಿಗಳನ್ನು ಶಾಲಾ ಪಠ್ಯಕ್ರ (School Syllabus) ಮಕ್ಕೆ ಅನುಸಾರವಾಗಿ ರಚಿಸಲಾಗುವುದು" ಅಂತಾರೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ (Anbil Mahesh Poyyamozhi). 

ರಾಜ್ಯ ಮಟ್ಟದ ಸಮಿತಿಯು ಈ ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತದೆ. ಜಿಲ್ಲಾ ಮಟ್ಟದ ಮತ್ತು ಬ್ಲಾಕ್ ಮಟ್ಟದ ಸಮಿತಿಗಳನ್ನು ಸಹ ರಚಿಸಲಾಗುವುದು ಮತ್ತು ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಲಾಗುವುದು. ಶಾಲಾ ಆಡಳಿತ ಸಮಿತಿಗಳು (School Administrative Committees) ಸ್ವಯಂಸೇವಕರನ್ನು ಪರಿಶೀಲಿಸುತ್ತದೆ. ಜೊತೆಗೆ ಅವರ ಹೆಸರನ್ನು ಜಿಲ್ಲಾ ಮಟ್ಟದ ಸಮಿತಿಗಳಿಗೆ ಅನುಮೋದನೆಗಾಗಿ ಕಳುಹಿಸುತ್ತದೆ. ಅಂದಹಾಗೇ ತಮಿಳುನಾಡಿನಲ್ಲಿ 1 ರಿಂದ 8 ನೇ ತರಗತಿಗಳು ನವೆಂಬರ್ 1 ರಿಂದ ಪುನರಾರಂಭಗೊಳ್ಳಲಿದ್ದು, ಶಾಲಾ ಶಿಕ್ಷಣ ಇಲಾಖೆಯು  ಶಾಲೆಗಳಲ್ಲಿ ವೈಯಕ್ತಿಕ ಕಲಿಕೆಗೆ ಸಮಾನಾಂತರವಾಗಿ ಈ ಯೋಜನೆಯನ್ನು ನಡೆಸಲು‌ ತೀರ್ಮಾನಿಸಿದೆ.

ನ.2ರಿಂದ 1-5 ಫುಲ್‌ ಕ್ಲಾಸ್‌: ಹೊಸ ಮಾರ್ಗಸೂಚಿ ಪ್ರಕಟ

click me!