ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಕ್ರಮ ಕೈಗೊ​ಳ್ಳಿ; NSUI ಮನವಿ

By Kannadaprabha NewsFirst Published Aug 2, 2022, 11:12 AM IST
Highlights

ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿದ್ದು, ಮರುಮೌಲ್ಯಮಾಪನ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಅವ​ರಿಗೆ ಜಿಲ್ಲಾ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ಶಿವಮೊಗ್ಗ (ಆ.2) : ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿದ್ದು, ಮರುಮೌಲ್ಯಮಾಪನ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಅವ​ರಿಗೆ ಜಿಲ್ಲಾ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ 2022-23ನೇ ಸಾಲಿನ ಪ್ರಥಮ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಸಹ್ಯಾದ್ರಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಕನಿಷ್ಠ ಅರ್ಹತಾ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ನೀಡಲಾಗಿದೆ. ಕೂಡಲೇ ಮರುಮೌಲ್ಯಮಾಪನ ಮಾಡಬೇಕೆಂದು ಒತ್ತಾಯಿಸಿದರು.

ಶಿವಮೊಗ್ಗ: ಡ್ರಗ್ಸ್‌ ನಶೆಯಲ್ಲಿ ತೇಲಾಡಿದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು!

Latest Videos

ಸಹ್ಯಾದ್ರಿ ಕಾಲೇಜಿ(Sahyadri Collage)ನ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗದಲ್ಲಿ 24 ವಿದ್ಯಾರ್ಥಿಗಳು ಭದ್ರಾವತಿ ಹಾಗೂ ಕಡೂರು ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಅನ್ಯಾಯವಾಗಿದೆ. ಶೇ.59ಕ್ಕಿಂತ ಕಡಿಮೆ ಅಂಕಗಳನ್ನು ನೀಡಲಾಗಿದೆ. ಇವರಲ್ಲಿ ಸುಮಾರು ವಿದ್ಯಾರ್ಥಿಗಳಿಗೆ ಶೇ.55ಕ್ಕಿಂತ ಕಡಿಮೆ ಅಂಕ ನೀಡಲಾಗಿದೆ. ಇದರಿಂದ ಎನ್‌ಇಟಿ ಮತ್ತು ಸ್ಲೆಟ್‌ ಬರೆಯಲು ಶೇ.55ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವುದು ಕಡ್ಡಾಯ ಆಗಿರುತ್ತದೆ. ಆದರೆ, ಇಂತಹ ಪರೀಕ್ಷೆಗಳನ್ನು ಬರೆಯಲು ಬೇಕಾದ ಕನಿಷ್ಠ ಶೇ.55ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಇವುಗಳಿಂದ ವಂಚಿತರಾಗುತ್ತಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ, ಬಡ, ಹಿಂದುಳಿದ ಹಾಗೂ ಪರಿಶಿಷ್ಟಜಾತಿ- ವರ್ಗಗಳಿಗೆ ಸೇರಿದವರಾಗಿದ್ದಾರೆ. ಕನಿಷ್ಠ ಅರ್ಹತೆ ಅಂಕ ಗಳಿಗಿಂತ ಕಡಿಮೆ ಅಂಕಗಳು ಬಂದಿರುವುದರಿಂದ ಭವಿಷ್ಯದಲ್ಲಿ ಉದ್ಯೋಗಗಳ ಅವಕಾಶಗಳಿಂದ ವಂಚಿತರಾಗಲಿದ್ದಾರೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.

ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೂ ಶೇ.59ಕ್ಕಿಂತ ಕಡಿಮೆ ಮತ್ತು ಕನಿಷ್ಠ ಅರ್ಹತೆಗೆ ಬೇಕಾದ ಶೇ.55ಕ್ಕಿಂತ ಕಡಿಮೆ ಅಂಕಗಳು ಬಂದಿರುವುದರಿಂದ ಮೌಲ್ಯಮಾಪನದಲ್ಲಿ ಲೋಪ ಆಗಿದೆ ಎನ್ನುವಂತಾಗಿದೆ. ಆದ್ದರಿಂದ ಕುಲಪತಿ ಅವರು ಕೂಡಲೇ ಈ ವಿಭಾಗದ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕಿ ಸ್ಕೂಟಿಯೊಳಗೆ ಸರ್ಪ! ಹಾವಿನ ಜೊತೆಗೆ 10 ಕಿ ಮೀ ಪಯಣ!

ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ಕೇಂದ್ರದಲ್ಲಿ ಪಿಎಚ್‌.ಡಿ ಸಂಶೋಧನೆ ಕೈಗೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಕೋರ್ಸ್‌ ವರ್ಕ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿ ತಾರತಮ್ಯ ಎಸಗಿದ್ದಾರೆ. ಅವರ ಕೋರ್ಸ್‌ ವರ್ಕ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನೂ ಮೌಲ್ಯಮಾಪನ ಮಾಡಿಸುವ ಮೂಲಕ ಈ ವಿದ್ಯಾರ್ಥಿಗಳಿಗೂ ನ್ಯಾಯ ಒದಗಿಸಿಕೊಡಬೇಕೆಂದು ಎಂದು ಇದೇ ಸಂದರ್ಭ ಒತ್ತಾಯಿಸಿದರು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ಯುವ ಮುಖಂಡ ಮುರುಗೇಶ್‌, ಭದ್ರಾವತಿ ತಾಲೂಕು ಅಧ್ಯಕ್ಷ ಭಾಷಾ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಹರ್ಷಿತ್‌, ನಗರಾಧ್ಯಕ್ಷ ಚರಣ್‌, ರವಿ, ಕೀರ್ತಿ ಗೋಣಿಬೀಡು, ಗಂಗಾಧರ ಧವನ್‌, ಹೇಮಂತ್‌ ಮತ್ತಿತರರು ಇದ್ದರು. ಶಿವಮೊಗ್ಗದ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರಿಗೆ ಸಹ್ಯಾದ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮರುಮೌಲ್ಯಮಾಪನ ಮಾಡಲು ಒತ್ತಾಯಿಸಿ ಸೋಮವಾರ ಜಿಲ್ಲಾ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

click me!