ಯಾದಗಿರಿ: ಅಂದು ಭಿಕ್ಷುಕಿ ಇಂದು SSLC ಫಲಿತಾಂಶದಲ್ಲಿ ಸಾಧಕಿ...!

By Girish GoudarFirst Published May 25, 2022, 12:45 PM IST
Highlights

*  ಹೆತ್ತವರಿಲ್ಲದ ನೋವಿನಲ್ಲಿಯು ಸೋನು ಸಾಧನೆ
*  ಸಾಫ್ಟ್‌ವೇರ್ ಇಂಜಿನಿಯರ್ ಕನಸು ಕಂಡ ಸಾಧಕಿ ಸೋನು
*  ಸೋನು ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ
 

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಮೇ.25): ಆ ವಿದ್ಯಾರ್ಥಿನಿ ಹೆತ್ತವರಿಲ್ಲದ ನೋವಿನಲ್ಲಿಯು ಅನಾಥಳಾದರು ಓದಿನಲ್ಲಿ ಸಾಧನೆ ಮಾಡಿ ಈಗ ಕೀರ್ತಿ ತರುವ ಕಾರ್ಯ ಮಾಡಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ನರಸಮ್ಮ ಹಾಗೂ ನರಸಿಂಹ ದಂಪತಿಗಳ ಪುತ್ರಿ ಎನ್.ಸೋನು  ಬೆಂಗಳೂರಿನಲ್ಲಿ ಎಸ್ಎಸ್ಎಲ್‌ಸಿ ಓದಿ ಉತ್ತಮ ಸಾಧನೆ ಮಾಡಿದ್ದಾಳೆ.

ಹೆತ್ತವರಿಲ್ಲದ ನೋವಿನಲ್ಲಿಯೂ ಸೋನು ಸಾಧನೆ

ಸೋನು ತಾಯಿ ನರಸಮ್ಮ ನಿಧನರಾದ ನಂತರ ಸೋನು ತಮ್ಮ ತಂದೆ ನರಸಿಂಹ ಅವರ ಜೊತೆ ಬೆಂಗಳೂರಿಗೆ ವಲಸೆ ಹೋಗುತ್ತಾಳೆ. ತಂದೆ ಕೂಲಿ ಕೆಲಸ ಮಾಡಲು ಹೋದರೆ ಸೋನು ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಭೀಕ್ಷೆ ಬೇಡುತ್ತಿದ್ದಳು. ಇದನ್ನು ಅರಿತ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ರೂಪಾ ಮಹಾಜನ್ ಅವರು ಬಾಲಕಿಯನ್ನು ರಕ್ಷಣೆ ಮಾಡಿ ಕರೆದುಕೊಂಡು ಬರುತ್ತಾರೆ. 2013 ರಲ್ಲಿ ಬಾಲಕಿಯನ್ನು ರಕ್ಷಣೆ ಮಾಡಿ ಸ್ಪರ್ಶಾ ಟ್ರಸ್ಟ್ ಗೆ ಕರೆದುಕೊಂಡು ಬರುತ್ತಾರೆ. ಈ ವೇಳೆ ಸೋನು ತಂದೆ ನರಸಿಂಹ ನಂತರ ಅನಾರೋಗ್ಯ ತಪ್ಪಿದ ನಂತರ ತಾನು ಕೂಡ ಗುಂಡಾಂಜನೇಯ ದೇವಸ್ಥಾನದಲ್ಲಿ ಭೀಕ್ಷೆ ಬೇಡುತ್ತಾನೆ. ಆದರೆ, ಸೋನು ತನ್ನ ತಂದೆ ಭಿಕ್ಷಾಟನೆ ಇಲ್ಲವೇ ಕೂಲಿ ಕೆಲಸಕ್ಕೆ ದುಡುತ್ತಾರೆಂಬ ಭಯದಲ್ಲಿ ಇದ್ದಳು.ಆದರೆ, ಶಿಕ್ಷಣದಲ್ಲಿ ಉನ್ನತ ಗುರಿ ಮುಟ್ಟುವ ಕನಸು ಕಟ್ಟಿಕೊಂಡಿದ್ದಳು. ಸ್ಪರ್ಶಾ ಟ್ರಸ್ಟ್ ಅನಾಥಳಾಗಿದ್ದ ನೋವು ದೂರ ಮಾಡಿದ್ದು ಸೋನು ಸಾಧನೆಗೆ ಸಾಕ್ಷಿಯಾಗಿದೆ.

ಹಿಜಾಬ್ ವಿವಾದ ಎದ್ದಿದ್ದ ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಅಮೋಘ ಸಾಧನೆ

ಸೋನುಗೆ ನೆರವಾದ ಸ್ಪರ್ಶಾ ಟ್ರಸ್ಟ್

ಸ್ಪರ್ಶಾ ಟ್ರಸ್ಟ್ ಸೋನುಳನ್ನು ಕರೆದುಕೊಂಡು ಹೋಗಿ ಬೆಂಗಳೂರಿನ ಸಂಜೀವಿನಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿಗೆ ಸೇರಿಸಿದ್ದು, 7 ನೇ ತರಗತಿಯವರೆಗೆ ಅಧ್ಯಯನ ಮಾಡಿಸಿದ್ದಾರೆ‌. ನಂತರ ಸೋನು ಓದಿನಲ್ಲಿ ಆಸಕ್ತಿ ವಹಿಸಿರುವದನ್ನು ಅರಿತ ನಂತರ ಸೋನುಳನ್ನು ಹೆಸರಘಟ್ಟದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಕೊಡಿಸಿದ್ದು, ಈ ಶಾಲೆಯಲ್ಲಿಯೇ 8 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಾಳೆ‌.

SSLC Results: ಕನ್ನಡಪ್ರಭ ಪತ್ರಿಕೆ ಹಂಚುವ ಹುಡುಗ ಟಾಪರ್‌..!

ಎಸ್ಎಸ್ಎಲ್‌ಸಿಯಲ್ಲಿ 625 ಕ್ಕೆ 602 ಅಂಕ ಪಡೆದ ಸೋನು..!

ಸೋನು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 625 ಕ್ಕೆ 602 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಸ್ಪರ್ಶಾ ಟ್ರಸ್ಟ್‌ ನ ಸಿಬ್ಬಂದಿಗಳಾದ ರೂಪಾ ಮಹಾಜನ್, ಹುಲಿಶ್ ಅವರು ವಿದ್ಯಾರ್ಥಿನಿ ಇಂಗ್ಲಿಷ್ ತರಬೇತಿ ಸೇರಿದಂತೆ ಮೊದಲಾದ ವಿಷಯ ಕುರಿತು ತರಬೇತಿ ನೀಡಿದ್ದಾರೆ. ನಾನು ಬೆಂಗಳೂರಿನ ಗುಂಡಾಂಜನೇಯ ದೇವಸ್ಥಾನದಲ್ಲಿ ಭೀಕ್ಷೆ ಬೇಡುತ್ತಿದ್ದೆ ಅಂದು ಜೀವನ ನಡೆಸುವದು ಕಷ್ಟವಾಗಿತ್ತು. ಈ ವೇಳೆ ಸ್ಪರ್ಶಾ ಟ್ರಸ್ಟ್ ಸಿಬ್ಬಂದಿ ವರ್ಗದವರು ನನ್ನನ್ನು ನೋಡಿ ಸ್ಪರ್ಶಾ ಟ್ರಸ್ಟ್ ಕಚೇರಿಗೆ ಕರೆದುಕೊಂಡು ಹೋಗಿ ನಂತರ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆ-ತಾಯಿ ಯಾರು ಇಲ್ಲ. ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಗುರಿಯನ್ನು ಹೊಂದಿದ್ದಾಳೆ.

ಸೋನು ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ವಿದ್ಯಾರ್ಥಿನಿ ಸೋನು ಮಾಡಿದ ಸಾಧನೆ ಜಿಲ್ಲೆಗೆ ಕೀರ್ತಿ ತರುವ ಕೆಲಸವಾಗಿದ್ದು, ಗ್ರಾಮಸ್ಥರು ಬಾಲಕಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪರ್ಶಾ ಟ್ರಸ್ಟ್ ನ ಸಂಸ್ಥಾಪಕ ಗೋಪಿನಾಥ ಅವರು ಮಾತನಾಡಿ, ಬಾಲಕಿ ಸೋನು ಅವರನ್ನು ಟ್ರಸ್ಟ್ ಸಿಬ್ಬಂದಿ ಗುಂಡಾಂಜನೇಯ ದೇವಸ್ಥಾನದಲ್ಲಿ ರಕ್ಷಣೆ ಮಾಡಿ ನಂತರ ಆಕೆಗೆ ಸೂಕ್ತ ತರಬೇತಿ ನೀಡಿ ಉತ್ತಮ ಕೊಡಿಸಲಾಗಿದೆ. ವಿದ್ಯಾರ್ಥಿನಿ ಸಾಧನೆ ಖುಷಿ ತಂದಿದೆ. ಆಕೆ ಓದುವರೆಗೂ ವ್ಯಾಸಂಗ ಮಾಡಿಸಲಾಗುತ್ತನೆ ಎಂದರು. ಹೆತ್ತವರಿಲ್ಲದ ನೋವಿನಲ್ಲಿಯೂ ಸೋನು ಸಾಧನೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದ್ದಾಳೆ.
 

click me!