Education| ಇನ್ನೂ ತರಗತಿ ಆರಂಭಿಸದೆ ಶಾಲೆಗಳ ಕಳ್ಳಾಟ..!

By Kannadaprabha NewsFirst Published Nov 8, 2021, 6:53 AM IST
Highlights

*  ಇನ್ನೂ ಶುರುವಾಗಿಲ್ಲ ವಿವಿಧ ಪ್ರತಿಷ್ಠಿತ ಶಾಲೆಗಳು
*  ಆನ್‌ಲೈನ್‌ ಶಿಕ್ಷಣದಿಂದ ಹೊರಬರದ ಮಕ್ಕಳು
*  ಭೌತಿಕ ಚಟುವಟಿಕೆ ಇಲ್ಲದೆ ಮಡುಗಟ್ಟಿದ ಮಕ್ಕಳ ಮನಸ್ಸು
 

ಲಿಂಗರಾಜು ಕೋರಾ

ಬೆಂಗಳೂರು(ನ.08):  ರಾಜ್ಯ ಸರ್ಕಾರ(Government of Karnataka) ಎಲ್ಲ ಹಂತದ ಶಾಲಾ, ಕಾಲೇಜುಗಳ ಭೌತಿಕ ತರಗತಿ(Offline Class) ಆರಂಭಕ್ಕೆ ಅನುಮತಿ ನೀಡಿದ್ದರೂ ಸಹ, ನಗರದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಖರ್ಚು ವೆಚ್ಚ ಉಳಿಸಿಕೊಳ್ಳಲು ಭೌತಿಕ ತರಗತಿ ಆರಂಭಿಸದೇ ಕಳ್ಳಾಟ ಮಾಡುತ್ತಿವೆಯೇ ಎಂಬ ಅನುಮಾನ ಮೂಡುತ್ತಿದೆ.

ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್‌(Online Class) ಮೂಲಕ ತರಗತಿ ನಡೆಸಿದ್ದರೂ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಿರುವ ಈ ಶಿಕ್ಷಣ ಸಂಸ್ಥೆಗಳು, ಶಾಲೆಗಳ ನಿರ್ವಹಣೆ ವೆಚ್ಚವನ್ನು ಸಾಕಷ್ಟು ಉಳಿತಾಯ ಮಾಡಿವೆ. ಹೀಗಾಗಿ ಮುಂದಿನ ಮೂರ್ನಾಲ್ಕು ತಿಂಗಳ ಕಾಲ ಆನ್‌ಲೈನ್‌ನಲ್ಲಿ ತರಗತಿ ನಡೆಸಿ ಇನ್ನಷ್ಟು ಹಣ ಉಳಿಸಲು ಇಲ್ಲದ ನೆಪ ಹೇಳಿ ಭೌತಿಕ ತರಗತಿ ನಡೆಸಲು ಹಿಂದೇಟು ಹಾಕುತ್ತಿವೆ ಎಂಬ ಆರೋಪ(Allegation) ಕೇಳಿಬಂದಿದೆ.

ಬಹುತೇಕ ಮಕ್ಕಳು ಶಾಲಾ-ಕಾಲೇಜುಗಳಿಗೆ(School) ಹೋಗುತ್ತಿದ್ದರೆ, ನಗರದ ಕೆಲವು ಪ್ರತಿಷ್ಠಿತ ಖಾಸಗಿ ಅನುದಾನ ರಹಿತ ಖಾಸಗಿ ಶಾಲೆಗಳ ಮಕ್ಕಳು(Children) ಮಾತ್ರ ಆನ್‌ಲೈನ್‌ನಲ್ಲೇ ಶಿಕ್ಷಣ(Education) ಪಡೆಯಬೇಕಾದ ಸ್ಥಿತಿ ಬಂದಿದೆ. ಕಳೆದ ಒಂದೂವರೆ ವರ್ಷದಿಂದ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿ ಒಂದು ರೀತಿಯಲ್ಲಿ ರೋಸಿ ಹೋಗಿರುವ ಮಕ್ಕಳು ಶಾಲೆಗೆ ಹೋಗಲು ತಯಾರಿದ್ದಾರೆ. ಪೋಷಕರು(Parents) ಸಹ ಮಕ್ಕಳು ಮನೆಯಲ್ಲೇ ಇದ್ದು ಯಾವುದೇ ರೀತಿಯ ಶಾಲಾ ಚಟುವಟಿಕೆ ಇಲ್ಲದೇ ಮಕ್ಕಳ ಮನಸ್ಸು ಜಡ್ಡುಗಟ್ಟಿಹೋಗುವುದರಿಂದ ಹೊರ ಬರಲು ಭೌತಿಕ ತರಗತಿ ಆರಂಭಿಸುವಂತೆ ಶಾಲೆಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದರೂ ಸಹ ಆಡಳಿತ ಮಂಡಳಿಗಳು ಕಿವಿಗೊಡುತ್ತಿಲ್ಲ. ಶಾಲೆಗಳ ಈ ನಡವಳಿಕೆ ಬಗ್ಗೆ ಪೋಷಕರು ಒಂದೆಡೆ ಬೇಸರ ವ್ಯಕ್ತಪಡಿಸಿದರೆ, ಶಿಕ್ಷಣ ತಜ್ಞರು ಇದು ಮಾನಸಿಕವಾಗಿ ಮಕ್ಕಳ ಆರೋಗ್ಯದ(Health) ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.

Karnataka| ರಾಜ್ಯದಲ್ಲಿ 18 ತಿಂಗಳ ಬಳಿಕ ಅಂಗನವಾಡಿ ಆರಂಭ

ಆರ್ಥಿಕ ಹೊರೆ ಬೀಳುತ್ತೆ:

ಸರ್ಕಾರ ಭೌತಿಕ ತರಗತಿ ಹಾಜರಾತಿ(Attendance) ಕಡ್ಡಾಯಗೊಳಿಸದ ಕಾರಣ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ(Students) ಶಾಲೆಗಳು ಶಾಲೆಗೆ ಬಂದವರಿಗೆ ಭೌತಿಕ ತರಗತಿ, ಬಾರದವರಿಗೆ ಆನ್‌ಲೈನ್‌ ತರಗತಿ ನಡೆಸುವುದು ಕಷ್ಟ. ಇದಕ್ಕೆ ಹೆಚ್ಚುವರಿ ಶಿಕ್ಷಕರು(Teachers) ಬೇಕಾಗುತ್ತದೆ, ಶಾಲಾ ಬಸ್‌ ಸೌಲಭ್ಯ ಆರಂಭಿಸಬೇಕಾಗುತ್ತದೆ. ಎಲ್ಲ ಮಕ್ಕಳೂ ಶಾಲೆಗೆ ಬರದ ಹೊರತು ಎರಡೂ ರೀತಿಯ ತರಗತಿ ನಡೆಸುವುದು, ಸಾರಿಗೆ ಸೌಲಭ್ಯ ಕಲ್ಪಿಸುವುದರಿಂದ ಆರ್ಥಿಕ ಹೊರೆಯಾಗಲಿದೆ ಎನ್ನುತ್ತಾರೆ ನಗರದ ಪ್ರತಿಷ್ಠಿತ ಶಾಲೆಯೊಂದರ ಮುಖ್ಯಸ್ಥರು.

ಪೋಷಕರ ಅಭಿಪ್ರಾಯವನ್ನೂ ಪಡೆದೇ ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಶಾಲೆಯ ಎಲ್ಲಾ ಮಕ್ಕಳ ಪೋಷಕರಿಗೂ ವಾಟ್ಸ್‌ಅಪ್‌(WhatsApp) ಮೂಲಕ ಶಾಲೆ ಆರಂಭದ ಬಗ್ಗೆ ಪ್ರಶ್ನೆ ಕೇಳಿದಾಗ ಅನೇಕ ಪೋಷಕರು ಆನ್‌ಲೈನ್‌ ತರಗತಿಯನ್ನೇ ಮುಂದುವರೆಸಬೇಕೆಂದು ತಿಳಿಸಿದ್ದಾರೆ. ಹಾಗಾಗಿ ನಮ್ಮ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ಆನ್‌ಲೈನ್‌ ತರಗತಿಯನ್ನೇ ಮುಂದುವರೆಸಿದ್ದೇವೆ ಎಂದು ಪ್ರತಿಪಾದಿಸುತ್ತಾರೆ.

ಕಾಯಂ, ಗುತ್ತಿಗೆ, ಪಾರ್ಟ್‌ ಟೈಂ ಶಿಕ್ಷಕರಿಗೆ ಸರ್ಕಾರದಿಂದ ಐಡಿ: ಸಚಿವ ನಾಗೇಶ್

ಮಕ್ಕಳ ವಿಚಾರದಲ್ಲಿ ಯಾವಾಗಲೂ ಸಾಮಾಜಿಕ ನ್ಯಾಯ ಬಹಳ ಮುಖ್ಯ. ಸರ್ಕಾರದ ಪ್ರಸ್ತುತ ಆದೇಶದಿಂದ ಒಂದು ಪ್ರದೇಶದ ಅಥವಾ ಒಂದು ರಸ್ತೆಯ ಹತ್ತು ಮಕ್ಕಳಲ್ಲಿ ಐದು ಜನ ಶಾಲೆಗೆ ಹೋಗುವುದು ಉಳಿದವರು ಮನೆಯಲ್ಲಿ ಕೂತು ಆನ್‌ಲೈನ್‌ ಶಿಕ್ಷಣ ನೋಡುವಂತಾಗಿದೆ. ಇದು ಮಕ್ಕಳ ಮೇಲೆ ಮಾನಸಿಕವಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಕೂಡಲೇ ಸರ್ಕಾರ ಎಲ್ಲ ಶಾಲೆಗಳನ್ನೂ ಆರಂಭಿಸಿ ಭೌತಿಕ ತರಗತಿಗಳನ್ನು ಆರಂಭಿಸಲು ಸೂಚಿಸಬೇಕು ಎಂದು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ನಿರ್ದೇಶಕ ನಾಗಸಿಂಹ ಜಿ.ರಾವ್‌ ತಿಳಿಸಿದ್ದಾರೆ.   

ನಗರದಲ್ಲಿ ಇನ್ನೂ ಕೂಡ ಆರಂಭವಾಗದ ಶಾಲೆಗಳು ಇವೆ. ಆದರೆ ಅವುಗಳ ಸಂಖ್ಯೆ ಬಹಳ ಕಡಿಮೆ. ಬಹುತೇಕ ಶ್ರೀಮಂತ ವರ್ಗದ ಮಕ್ಕಳೇ ಓದುತ್ತಿರುವ ಶಾಲೆಗಳು. ಪೋಷಕರೂ ಇನ್ನೂ ಮನೆಯಿಂದಲೇ ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳೂ ತಮ್ಮ ಜೊತೆಯಲ್ಲೇ ಮನೆಯಲ್ಲಿ ಸುರಕ್ಷಿತವಾಗಿರಲಿ ಎಂದು ಆನ್‌ಲೈನ್‌ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡಿರಬಹುದು. ಜತೆಗೆ ಆನ್‌ಲೈನ್‌, ಆಫ್‌ಲೈನ್‌ ಎರಡೂ ತರಗತಿ ನಡೆಸುವುದರಿಂದ ಆರ್ಥಿಕ ನಷ್ಟವಾಗುವುದರಿಂದಲೂ ಕೆಲ ಶಾಲೆಗಳು ಇನ್ನೂ ಭೌತಿಕ ತರಗತಿ ಆರಂಭಿಸಿಲ್ಲ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದ್ದಾರೆ.  
 

click me!