ಕಲಬುರಗಿ: ಶರಣಬಸವ ವಿವಿ ಘಟಿಕೋತ್ಸವ, 6 ಸಾಧಕರಿಗೆ ಗೌಡಾ, ಡಿ.ಲಿಟ್‌ ಪ್ರದಾನ

By Kannadaprabha NewsFirst Published Sep 9, 2021, 3:09 PM IST
Highlights

* 42 ಪ್ರತಿಭೆಗಳಿಗೆ ಚಿನ್ನ, 879 ವಿದ್ಯಾರ್ಥಿಗಳಿಗೆ ಪದವಿ
* 2017-18 ಮತ್ತು 2018-19ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ 
* ಘಟಿಕೋತ್ಸವಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಒಪ್ಪಿಗೆ 
 

ಕಲಬುರಗಿ(ಸೆ.09):  ಕಳೆದ ನಾಲ್ಕು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿರುವ ಇಲ್ಲಿನ ಶರಣಬಸವ ವಿವಿ ತನ್ನ ಚೊಚ್ಚಲ ಪದವಿ ಪ್ರದಾನ ಸಮಾರಂಭವನ್ನು ಸೆ.10ರಂದು ಹಮ್ಮಿಕೊಂಡಿದೆ. 

2012ರಲ್ಲಿ ರಾಜ್ಯ ಕಾಯ್ದೆಯ ಅನುಸಾರವಾಗಿ ಸ್ಥಾಪನೆಗೊಂಡ ಶರಣಬಸವ ವು 2017ರ ಶೈಕ್ಷಣಿಕ ವರ್ಷದಿಂದ ಕಾರ್ಯನಿರ್ವಹಿಸಲು ಆರಂಭಿಸಿದ್ದರೂ ಕೂಡಾ ಸಾಂಕ್ರಾಮಿಕ ಹಾಗೂ ವಿವಿಧ ಕಾರಣಗಳಿಂದಾಗಿ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವವನ್ನು ಇಲ್ಲಿಯವರೆಗೆ ನಡೆಸಲಾಗಿರಲಿಲ್ಲ.

ಇದೀಗ ಗಣೇಶ ಚತುರ್ಥಿಯ ಶುಭ ದಿನದಂದು ಶರಣಬಸವ ವಿಶ್ವವಿದ್ಯಾಲಯದ ಮೊದಲ ಮತ್ತು ಎರಡನೇಯ ಘಟಿಕೋತ್ಸವ ನಡೆಯಲಿದೆ. ಇದರಲ್ಲಿ 2017-18 ಮತ್ತು 2018-19ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಸಲಾಗುತ್ತಿದೆ ಎಂದು ವಿವಿ ಕುಲಾಧಿಪತಿಗಳೂ ಆಗಿರುವ ಶರಣಬಸವೇಶ್ವರ ದಾಸೋಹ ಪೀಠದ 8 ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಒಪ್ಪಿಗೆ ನೀಡಿದ್ದಾರೆ. ಘಟಿಕೋತ್ಸವವು ಅಪ್ಪ ಪಬ್ಲಿಕ ಶಾಲೆ ಆವರಣದಲ್ಲಿನ ಬಸವರಾಜಪ್ಪ ಅಪ್ಪ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯ: ಚೈತ್ರಾಗೆ 20 ಚಿನ್ನದ ಪದಕ

ದಾವಣಗೆರೆ ವಿವಿ ಕುಲಪತಿ ಡಾ.ಶರಣಪ್ಪ ಹಲ್ಸೆ, ಗುವಿವಿ ಕುಲಪತಿ ಡಾ.ದಯಾನಂದ ಅಗಸರ ಘಟಿಕೋತ್ಸವ ಭಾಷಣಗಳನ್ನು ಮಾಡುವರು. ಕಲಬುರಗಿ ಸಂಸದ ಡಾ.ಉಮೇಶ ಜಾಧವ ಮತ್ತು ಕಲಬುರಗಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅತಿಥಿಗಳು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಉಪಸ್ಥಿತರಿರುವರು.

6 ಸಾಧಕರಿಗೆ ಗೌಡಾ: 

ಘಟಿಕೋತ್ಸವದಲ್ಲಿ 6 ಸಾಧಕರಿಗೆ ನೀಡಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಶಿವರಾಜ ಪಾಟೀಲ, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಂಸದ, ಸಾಮಾಜಿಕ ಕಾರ್ಯಕರ್ತ ಬಸವರಾಜ ಪಾಟೀಲ ಸೇಡಂ, ಕೈಗಾರಿಕೋದ್ಯಮಿ, ಎಂಎಲ್‌ಸಿ ಬಿ.ಜಿ. ಪಾಟೀಲ, ಚೌದಾಪುರಿ ಹಿರೇಮಠ ಸ್ವಾಮೀಜಿ ರಾಜಶೇಖರ ಶಿವಾಚಾರ್ಯರು, ಉದ್ಯಮಿ ಲಿಂಗರಾಜ ಎಸ್ ಪಾಟೀಲ್ ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಡಾ.ಶಿವರಾಜ ಶಾಸ್ತ್ರೀ ಹೇರೂರ, ಡಾ ನೀಲಾಂಬಿಕಾ ಶೇರಿಕಾರ ಪೊಲೀಸ್ ಪಾಟೀಲ್, ಡಾ.ಎಸ್. ಎಂ. ಹಿರೇಮಠ ಅವರಿಗೆ ಡಿ.ಲಿಟ್ ನೀಡಿ ಗೌರವಿಸುತ್ತಿದೆ. 
ವಿವಿಯಿಂದ ಆಡಳಿತದಲ್ಲಿರೋ ರಾಜಕಾರಣಿಗಳಿಗೆ ಗೌಡಾ ನೀಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಲಪತಿ ಡಾ. ನಿರಂಜನ ನಿಷ್ಠಿ ವಿವಿ ಸ್ಥಳೀಯ ಪ್ರತಿಭೆಗಳಿಗೆ, ಅವರು ಸಮಾಜಕ್ಕೆ ನೀಡಿದ ಕೊಡುಗೆ ಕಡೆಗಣಿಸೋದಿಲ್ಲ. ಬರುವ ವರ್ಷಗಳಲ್ಲಿ ಇಂತಹ ವಿಚಾರಗಳನ್ನೇ ಗಮನದಲ್ಲಿಟ್ಟು ಕೊಂಡು ಮುಂದಡಿ ಇಡಲಾಗುತ್ತದೆ ಎಂದು ಭರವಸೆ ನೀಡಿದರು.

ಚಿನ್ನದ ಪದಕ: 

2017-18ನೇ ಬ್ಯಾಚ್‌ನ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 20 ಚಿನ್ನದ ಪದಕಗಳನ್ನು 352 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಗುವುದು. 2018-19ನೇ ಬ್ಯಾಚ್‌ನ 22 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು, 527 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎರಡನೇ ಘಟಿಕೋತ್ಸವದಲ್ಲಿ ಪದವಿಗಳನ್ನು ನೀಡಲಾಗುತ್ತಿದೆ. ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ. ಕುಲಪತಿ ಡಾ.ನಿರಂಜನ.ವಿ.ನಿಷ್ಠಿ, ವಿವಿ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಸಹ-ಕುಲಪತಿ ಡಾ.ವಿ.ಡಿ.ಮೈತ್ರಿ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ, ಡೀನ್‌ರಾದ ಡಾ.ಲಕ್ಷ್ಮೀ ಪಾಟೀಲ ಮಾಕಾ ಮತ್ತು ಡಾ.ಬಸವರಾಜ ಮಠಪತಿ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ ಇದ್ದರು.
 

click me!