Raichur: ಬಸ್‌ ಸೌಕರ್ಯಕ್ಕೆ ಆಗ್ರಹಿಸಿ ಡಿಪೋಗೆ ಮುತ್ತಿಗೆ

By Kannadaprabha NewsFirst Published Jul 24, 2022, 2:05 PM IST
Highlights

ಮಾನವಿ ತಾಲೂಕಿನ ವಿವಿಧ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲದೆ ನಾಗರಿಕರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಬಸ್ ಸೌಕರ್ಯಕ್ಕೆ ಆಗ್ರಹಿಸಿ ಡಿಪೋಗೆ ಮುತ್ತಿಗೆ ಹಾಕಿದ್ದಾರೆ.

ಮಾನ್ವಿ (ಜು.24): ತಾಲೂಕಿನ ನಂದಿಹಾಳ ಮತ್ತು ರಾಜಲದಿನ್ನಿ, ನಸಲಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ವಿವಿಧ. ಗ್ರಾಮದ ನೂರಾರು ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಮಾನ್ವಿ ಬಸ್‌ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ನಂದಿಹಾಳ, ರಾಜಲದಿನ್ನಿ, ನಸಲಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಮಾನ್ವಿ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಆದರೆ ದಿನನಿತ್ಯ ಬಸ್ ಸೌಕರ್ಯವಿಲ್ಲದೆ ಗ್ರಾಮಗಳಿಂದ ನಗರಕ್ಕೆ ಬರುವುದು ಮತ್ತು ಹೋಗುವುದಕ್ಕೆ ವಿದ್ಯಾರ್ಥಿಗಳು ತುಂಬಾ ಪರದಾಡುತ್ತಿದ್ದಾರೆ. ಆಟೋ, ಲಾರಿ, ಖಾಸಗಿ ವಾಹನಗಳ ಮೂಲಕ ಓಡಾಡಬೇಕಿದೆ. ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಹೀಗೆ ಪ್ರಯಾಣಿಸುವುದು ಎಷ್ಟು ಸುರಕ್ಷಿತವೋ? ಈಗಾಗಲೇ ಆಟೋಗಳಲ್ಲಿ ಪ್ರಯಾಣಿಸಿ ಆಕ್ಸಿಡೆಂಟ್‌ನಲ್ಲಿ ವಿದ್ಯಾರ್ಥಿಗಳು ಮೃತಪಟ್ಟ ಘಟನೆಗಳು ನಡೆದಿವೆ. 

Haveri: ಜೀವದ ಹಂಗು ತೊರೆದು ಬಸ್ ಪ್ರಯಾಣ: ಸಾರಿಗೆ ಇಲಾಖೆ‌ ವಿರುದ್ದ ವಿದ್ಯಾರ್ಥಿಗಳ ಆಕ್ರೋಶ

ಹೀಗಾಗಿ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಚಿಂತೆಗೀಡಾಗಿದ್ದಾರೆ. ಸರಿಯಾದ ಬಸ್ ಸೌಲಭ್ಯವಿಲ್ಲದಿರುವುದರಿಂದ ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಬೇರೆ ಮಾರ್ಗದ ಬಸ್‌ಗಳು ನಿಲುಗಡೆಯಾಗದೆ ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಬರಲಾಗದೆ, ಸಂಜೆ ಮನೆಗೂ ತಲುಪಲಾಗದೆ  ಪರದಾಡುತ್ತಿದ್ದಾರೆ. ಬಸ್ ಸೌಕರ್ಯ ಇಲ್ಲದಿರುವುದರಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಸ್ಸುಗಳು ನಿಲುಗಡೆ ಆಗದಿರುವ ಬಗ್ಗೆ ಸಾಕಷ್ಟುಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು. 

ಯಾದಗಿರಿ: 70 ವರ್ಷಗಳ ನಂತ್ರ ಕೊನೆಗೂ ಬಂತು ಬಸ್!

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಡಿಎಸ್‌ ರಾಜ್ಯ ಯುವ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ ಅವರು ಕೆಕೆಆರ್‌ಟಿಸಿ ಜಿಲ್ಲಾ ಘಟಕ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್‌ ಸೌಲಭ್ಯ ಒದಗಿಸಬೇಕೆಂದು ಪಟ್ಟು ಹಿಡಿದರು. ಸೋಮವಾರದಿಂದ ನಂದಿಹಾಳ ಭಾಗದಿಂದ ವಿಶೇಷ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿ ವ್ಯವಸ್ಥಾಪಕ ಎನ್‌.ವೆಂಕಟೇಶ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತ ಸೀಕಲ್‌, ಮಲ್ಲೇಶ ವಕೀಲ ಮಾಚನೂರು, ಮಾನ್ವಿ ಘಟಕದ ತಪಸಣಾ ಅಧಿಕಾರಿ ಹನುಮಂತ್ರಾಯ ಸೇರಿದಂತೆ ನಂದಿಹಾಳ, ರಾಜಲದಿನ್ನಿ, ನಸಲಾಪುರ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಇದ್ದರು.

click me!