Kalaburagi SSLC Exam ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!

By Suvarna NewsFirst Published Mar 30, 2022, 6:47 PM IST
Highlights

 ಯುವಕರು SSLC ಪರೀಕ್ಷಾ ವಿದ್ಯಾರ್ಥಿಗಳಿಗೆ ಚೀಟಿ ಕೊಡಲು  ತಮ್ಮ ಜೀವದ ಹಂಗು ತೊರೆದು ಸರ್ಕಸ್ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. 

ವರದಿ:  ಶರಣಯ್ಯ ಹಿರೇಮಠ,  ಏಷ್ಯಾನೆಟ್ ಸುವರ್ಣನ್ಯೂಸ್

ಕಲಬುರಗಿ (ಮಾ.30): ಅಲ್ಲಿ ಹತ್ತಾರು ಯುವಕರು, ನಾಲ್ಕು ಅಂತಸ್ತಿನ ಕಟ್ಟಡದ ಗೋಡೆಯನ್ನು  ಬರಿಗೈಯಿಂದಲೇ ಹತ್ತುತ್ತಿದ್ದಾರೆ. ತುಸು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಇವರು ಈ ರೀತಿ ಸರ್ಕಸ್ ಮಾಡಲು ಕಾರಣ ಏನು ಗೊತ್ತಾ ?  ಒಳಗಡೆ ಕೋಣೆಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ (SSLC Exam) ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಚೀಟಿ ಕೊಡುವುದೇ ಇವರ ಪರಮಗುರಿ. 

ಚೀಟಿ ಭರಾಟೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ (Student) ಚೀಟಿ ಕೊಡುವುದಕ್ಕಾಗಿ, ಹಲವು ಯುವಕರು ತಮ್ಮ ಜೀವದ ಹಂಗು ತೊರೆದು ಸರ್ಕಸ್ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಆಳಂದ ಪಟ್ಟಣದಲ್ಲಿರುವ ಸಮತಾ ಶಿಕ್ಷಣ ಸಂಸ್ಥೆಯ (samata educational institute) ವಿವೇಕ ವರ್ಧನಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಇಂದು ಚೀಟಿ ಕೊಡುವ ಸರ್ಕಸ್ ಜೋರಾಗಿ ಕಂಡು ಬಂದಿತು. 

ನಾಲ್ಕು ಅಂತಸ್ತಿನ ಎತ್ತರದ ಈ ಕಟ್ಟಡವನ್ನು ಹತ್ತಾರು ಯುವಕರು ಬರಿಗೈಯಿಂದಲೇ ಹತ್ತಿ, ಕಿಟಕಿ ಬಳಿ ಹಲವು ನಿಮಿಷಗಳ ಕಾಲ ನಿಂತು ಒಳಗಡೆ ಇರುವ ತನ್ನ ಆಪ್ತ ವಿದ್ಯಾರ್ಥಿಯನ್ನು ಕರೆದು ಆತನಿಗೆ ಚೀಟಿ ಕೊಟ್ಟು ಅವಸರವಸರವಾಗಿ ಕೆಳಗಿಳಿಯುತ್ತಿರುವ ದೃಶ್ಯಗಳು ಭಯಾನಕವಾಗಿದ್ದವು. 

VIJAYAPURA: 81ರ ಇಳಿವಯಸ್ಸಲು ಸ್ನಾತ್ತಕೋತ್ತರ ಪರೀಕ್ಷೆ ಬರೆದ ಅಜ್ಜ!

ಒಬ್ಬರಲ್ಲ ಇಬ್ಬರಲ್ಲ ಹತ್ತಾರು ಯುವಕರು ಈ ರೀತಿ ರಾಜಾರೋಷವಾಗಿ ಪರೀಕ್ಷಾ ಕೇಂದ್ರದ ಕಟ್ಟಡವನ್ನ ಹತ್ತಿ ಚೀಟಿ ಕೊಡುತ್ತಿರುವುದು ಇಲ್ಲಿ ಕಾಮನ್ ಎನ್ನುವಂತಾಗಿದೆ.  ಚೀಟಿ ಕೊಡಲು ಕೆಲವರು ಗೋಡೆ ಹತ್ತುವುದು , ಮತ್ತೆ ಕೆಲವರು  ಇಳಿಯುವುದು ಇಲ್ಲಿ ಸರ್ವೇಸಾಮಾನ್ಯ ಎಂಬಂತಾಗಿತ್ತು. 

ನಿಷೇದಾಜ್ಞೆಗೆ ಬೆಲೆಯೇ ಇಲ್ಲ: ಪರೀಕ್ಷಾ ಕೇಂದ್ರಗಳ 100ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಆದರೆ ಆಳಂದ ನಲ್ಲಿ ನಿಷೇಧಾಜ್ಞೆಗೆ ಬೆಲೆಯೇ ಇಲ್ಲದಂತಾಗಿದೆ. ಪರೀಕ್ಷೆ ಪ್ರಾರಂಭವಾದ ಅರ್ಧಗಂಟೆಯ ನಂತರ ಶುರುವಾದ ಈ ಚೀಟಿ ಕೊಡುವ ಸರ್ಕಸ್, ಪರೀಕ್ಷೆ ಮುಗಿಯುವರೆಗೂ ನಡೆದೇ ಇತ್ತು.  

ಪರೀಕ್ಷಾ ಕೇಂದ್ರದ (Exam Centre) ಹೊರಭಾಗದಲ್ಲಿ ನಿಷೇಧಾಜ್ಞೆ ಅನುಷ್ಠಾನಕ್ಕೆ ತರಬೇಕಾದ ಪೊಲೀಸರು ಸಹ ಇಲ್ಲಿ ಕಾಣೆಯಾಗಿದ್ದು ಗಮನಾರ್ಹವಾಗಿತ್ತು.‌ ಕೋಣೆಯ ಮೇಲ್ವಿಚಾರಕರಾಗಲಿ, ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸದಿರುವುದು ದುರ್ದೈವ.

RBI RECRUITMENT 2022 : ಮ್ಯಾನೇಜರ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ

ಎಚ್ಚರ ತಪ್ಪಿದರೆ ಅಪಾಯ: ಚೀಟಿ  ಕೊಡಲು ಗೋಡೆ ಹತ್ತುವ ಯುವಕರು, ತುಸು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಗೋಡೆ ಹತ್ತುವಾಗ ಅಥವಾ ಇಳಿಯುವಾಗ ಸ್ವಲ್ಪವೇ ಕೈ ಜಾರಿದರೂ ನೆಲಕ್ಕೆ ಬೀಳುವ ಸಾಧ್ಯತೆ ಇದೆ. ಆದರೂ ಇವರು ಪ್ರಾಣದ ಹಂಗು ತೊರೆದು ಚೀಟಿ ಕೊಡಲು ಪ್ರಯತ್ನಿಸುತ್ತಿದ್ದುದು, ಭಯ ಹುಟ್ಟಿಸುವಂತಿತ್ತು. 

ಬಿಗಿ ಕ್ರಮ ಕೈಗೊಳ್ಳಿ: ಮುಂದೆ ನಡೆಯುವ ಪರೀಕ್ಷೆಗಾದರೂ ಪೊಲೀಸರು ಈ ಪರೀಕ್ಷಾ ಕೇಂದ್ರದ ಸುತ್ತ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು. ಪರೀಕ್ಷೆಯಲ್ಲಿ ನಕಲು ನಡೆಯದಂತೆ ಬಿಗಿ ಕ್ರಮ ಅನುಷ್ಠಾನಕ್ಕೆ ತರಬೇಕು ಎನ್ನುವುದು ನಿಷ್ಠಾವಂತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಆಗ್ರಹವಾಗಿದೆ.

click me!