ಮಂಗಳೂರು ವಿವಿ ಘಟಿಕೋತ್ಸವ: 80 ವರ್ಷದ ಪ್ರಭಾಕರ ಕುಪ್ಪಹಳ್ಳಿಗೆ ಪಿಎಚ್‌ಡಿ!

By Kannadaprabha NewsFirst Published Mar 16, 2023, 12:39 PM IST
Highlights

ಜ್ಞಾನದಾಹಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇದು. ಮಂಡ್ಯ ಜಿಲ್ಲೆಯ ಪ್ರಭಾಕರ ಕುಪ್ಪಹಳ್ಳಿ ಎಂಬವರು ತಮ್ಮ 80ರ ಹರೆಯದಲ್ಲಿ ಮೆಟೀರಿಯಲ್‌ ಸೈನ್ಸ್‌ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದು ಘಟಿಕೋತ್ಸವದಲ್ಲಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.

ಮಂಗಳೂರು (ಮಾ.16) : ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗೆ ಒತ್ತು ನೀಡುವ ಸಲುವಾಗಿ ಕನ್ನಡದಲ್ಲಿ ಪಠ್ಯ ಪುಸ್ತಕಗಳನ್ನು ಶೀಘ್ರ ಹೊರತರಲು ನಿರ್ಧರಿಸಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಹೇಳಿದ್ದಾರೆ.

ಕೊಣಾಜೆ ಮಂಗಳಗಂಗೋತ್ರಿಯ ಮಂಗಳಾ ಅಡಿಟೋರಿಯಂನಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಿಯು ಪರೀಕ್ಷಾ ಕೊಠಡಿಯೊಳಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸ್ಕ್ವಾಡ್‌: ಎಡವಟ್ಟು ಮಾಡಿಕೊಂಡ ಅಧಿಕಾರಿಗೆ ನೋಟಿಸ್‌

ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯನ್ನು ಅಳವಡಿಸುವ ಕುರಿತು ಚರ್ಚಿಸಲು ಇತ್ತೀಚೆಗೆ ನನ್ನ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ, ರಾಜ್ಯ ಸರ್ಕಾರಿ ಅಧಿಕಾರಿಗಳು, ವಿಶ್ವವಿದ್ಯಾಲಯದ ಉಪಕುಲಪತಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರ ಕೈಗೊಂಡ ದೇಶದ ಮೊದಲ ರಾಜ್ಯ ಕರ್ನಾಟಕ ಎಂದರು.

ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ಮೊದಲು ಜಾರಿಗೆ ತಂದದ್ದು ಕರ್ನಾಟಕದಲ್ಲಿ ಎಂದು ಶ್ಲಾಘಿಸಿದ ರಾಜ್ಯಪಾಲ, ಪ್ರಪಂಚದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಶಿಕ್ಷಣದಲ್ಲಿ ತಮ್ಮ ಮಾತೃಭಾಷೆಯನ್ನು ಬಳಸುತ್ತಿವೆ. ತಾಂತ್ರಿಕವಾಗಿ ಮುಂದುವರಿದಿರುವ ಜಪಾನ್‌, ಫ್ರಾ®್ಸ…, ಜರ್ಮನಿ, ಚೀನಾ ದೇಶಗಳು ತಮ್ಮ ಸಂವಹನ ಮತ್ತು ಶಿಕ್ಷಣಕ್ಕಾಗಿ ಮಾತೃಭಾಷೆಯನ್ನು ಬಳಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ನಮ್ಮ ದೇಶದ ಅಭಿವೃದ್ಧಿಗಾಗಿ ಪ್ರಾದೇಶಿಕ ಭಾಷೆಗಳ ಅಧ್ಯಯನಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪ್ರಸ್ತುತ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ದೇಶವನ್ನು ಇನ್ನಷ್ಟುಔನ್ನತ್ಯಕ್ಕೇರಿಸುವ ನಿಟ್ಟಿನಲ್ಲಿ ಶ್ರಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ನಿರ್ದೇಶಕ ಪೊ›.ಎಸ್‌.ಸಿ. ಶರ್ಮಾ, ಶಿಕ್ಷಣ ಮತ್ತು ಜ್ಞಾನ ವ್ಯವಸ್ಥೆಯ ಕೇಂದ್ರಗಳಾಗಿರುವ ಭಾರತದ ವಿಶ್ವವಿದ್ಯಾನಿಲಯಗಳು ಪಶ್ಚಿಮದ ಔಪಚಾರಿಕ ಶಿಕ್ಷಣದ ಜತೆಗೆ ನಮ್ಮ ಪ್ರಾಚೀನ ಜ್ಞಾನವನ್ನು ಬೆಳೆಸಬೇಕಾಗಿದೆ. ನಾವು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮವಾದದ್ದನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಉತ್ತಮವಾದದ್ದನ್ನು ಉಳಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ, ನಮ್ಮ ದೇಶದ ಅಧ್ಯಯನಗಳು ಮತ್ತು ಸಂಶೋಧನೆಗಳನ್ನು ವಿಶ್ವದೊಂದಿಗೆ ಸಂಪರ್ಕಿಸುವ ಕಾರ್ಯವೂ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲ ಶಿಸ್ತುಗಳ ಹೊರತಾಗಿಯೂ ವಿಶ್ವವಿದ್ಯಾನಿಲಯದಲ್ಲಿನ ಶಿಕ್ಷಣವು ನಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಮುಕ್ತಗೊಳಿಸಬೇಕಾಗಿದೆ. ವಿದ್ಯಾರ್ಥಿಗಳು ಅರಿವಿನ ತಡೆಗಳಿಂದ ಮುಕ್ತರಾಗುವ ಶಿಕ್ಷಣ ಬೇಕು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪೊ›.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ವಿವಿಯ ಸಾಧನೆ, ಗುರಿಗಳನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ ಪೊ›. ಕಿಶೋರ್‌ ಕುಮಾರ್‌ ಸಿ.ಕೆ., ಕುಲಸಚಿವ (ಪರೀಕ್ಷಾಂಗ) ಪೊ›. ರಾಜು ಕೃಷ್ಣ ಚಲನ್ನವರ್‌, ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರು, ವಿದ್ಯಾವಿಷಯಕ ಪರಿಷತ್‌ ಸದಸ್ಯರು, ವಿವಿಧ ನಿಖಾಯಗಳ ಡೀನ್‌ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ಇದ್ದರು.

ಪದವಿ ಪ್ರದಾನ: ಈ ಬಾರಿ 7 ಮಂದಿ ವಿದೇಶಿಗರೂ ಸೇರಿದಂತೆ 115 ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. 55 ಮಂದಿಗೆ ಚಿನ್ನದ ಪದಕ, 57 ನಗದು ಬಹುಮಾನ ವಿತರಿಸಲಾಯಿತು. 199 ಮಂದಿ ರಾರ‍ಯಂಕ್‌ ವಿಜೇತರಲ್ಲಿ ಪ್ರಥಮ ರಾರ‍ಯಂಕ್‌ ಪಡೆದ 71 ಮಂದಿಗೆ ರಾಜ್ಯಪಾಲರು ಪ್ರಮಾಣ ಪತ್ರ ನೀಡಿದರು.

ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್‌

ಮಂಗಳೂರು ವಿವಿಯ 41ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಲಾಯಿತು. ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರಿನ ಕಣಚೂರ್‌ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಜಿ ಯು.ಕೆ. ಮೋನು, ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಉದ್ಯಮಿ ಜಿ. ರಾಮಕೃಷ್ಣ ಆಚಾರ್‌ ಹಾಗೂ ಶಿಕ್ಷಣ ಮತ್ತು ಸಮಾಜಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರ ಪುರಸ್ಕೃತ ಪೊ›.ಎಂ.ಬಿ. ಪುರಾಣಿಕ್‌ ಅವರು ರಾಜ್ಯಪಾಲರಿಂದ ಗೌರವ ಡಾಕ್ಟರೇಟ್‌ ಪದವಿ ಪಡೆದರು.

ಆಕಾಂಕ್ಷಗೆ ಐದು ಚಿನ್ನದ ಪದಕ

ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ, ಕೃಷಿಕ ಕುಟುಂಬದಿಂದ ಬಂದ ಆಕಾಂಕ್ಷಾ ಎನ್‌. ಅವರು ಬಿಕಾಂನಲ್ಲಿ ಐದು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಅವರು ಸುಬ್ರಹ್ಮಣ್ಯ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದು, ಕಾಲೇಜಿಗೆ ಟಾಪರ್‌ ಆಗಿದ್ದರು. ಪ್ರಸ್ತುತ ಸಿಎ ಮಾಡುತ್ತಿದ್ದಾರೆ. ಹಿರೇಬಂಡಾಡಿಯ ತನುಜ… ಕುಮಾರ್‌ ಶೆಟ್ಟಿ- ಗೀತಾ ಟಿ. ಶೆಟ್ಟಿದಂಪತಿಯ ಎರಡನೇ ಪುತ್ರಿ.

80ರ ಹರೆಯಲ್ಲಿ ಪಿಎಚ್‌ಡಿ!

ಜ್ಞಾನದಾಹಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇದು. ಮಂಡ್ಯ ಜಿಲ್ಲೆಯ ಪ್ರಭಾಕರ ಕುಪ್ಪಹಳ್ಳಿ ಎಂಬವರು ತಮ್ಮ 80ರ ಹರೆಯದಲ್ಲಿ ಮೆಟೀರಿಯಲ್‌ ಸೈನ್ಸ್‌ ವಿಭಾಗದಲ್ಲಿ ಪಿಎಚ್‌ಡಿ ಪದವಿ ಪಡೆದು ಘಟಿಕೋತ್ಸವದಲ್ಲಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು. 2017ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅವರು ಸಂಶೋಧನಾ ಅಧ್ಯಯನ ಆರಂಭಿಸಿದ್ದರು. ಬೆಂಗಳೂರಿನ ದಯಾನಂದ ಸಾಗರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಸಂದರ್ಶಕ ಅಧ್ಯಾಪಕರಾಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಿಎಚ್‌ಡಿ ಪೂರ್ಣಗೊಳಿಸಬೇಕು ಎಂಬುದು ನನ್ನ ಬಹುಕಾಲದ ಕನಸಾಗಿತ್ತು, ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅದು ಸಂಭವಿಸಲಿಲ್ಲ. ಇದೀಗ ಆ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದೇನೆ ಎಂದು ಪದವಿ ಪ್ರದಾನ ಬಳಿಕ ಅವರು ಸಂತಸ ವ್ಯಕ್ತಪಡಿಸಿದರು.

5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಣೆ, ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ‌ ಸೂಚನೆ

80ರ ಹರೆಯದಲ್ಲಿ ಪಿಎಚ್‌ಡಿ ಪಡೆದ ಪ್ರಭಾಕರ ಕುಪ್ಪಹಳ್ಳಿ.

click me!