Library ಗ್ರಂಥಾಲಯಗಳು ಶಿಕ್ಷಣ ಸಂಸ್ಥೆಗಳ ಹೃದಯ, ಕುಲಪತಿ ಡಾ.ಕರಿಸಿದ್ದಪ್ಪ

By Suvarna NewsFirst Published Jan 8, 2022, 8:20 PM IST
Highlights

* ಗ್ರಂಥಾಲಯಗಳು ಶಿಕ್ಷಣ ಸಂಸ್ಥೆಗಳ ಹೃದಯ,  ಕುಲಪತಿ ಡಾ.ಕರಿಸಿದ್ದಪ್ಪ
* ಲಿಸಾಕಾನ್-2021 ರಾಷ್ಟ್ರೀಯ ಸಮ್ಮೇಳನದಲ್ಲಿ ಕುಲಪತಿ ಡಾ.ಕರಿಸಿದ್ದಪ್ಪ ಹೇಳಿಕೆ
* ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ.ಕರಿಸಿದ್ದಪ್ಪ

ಬೆಳಗಾವಿ, (ಜ.08): ಗ್ರಂಥಾಲಯಗಳು (Library) ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ (University)ಹೃದಯವಿದ್ದಂತೆ. ಅವುಗಳಿಲ್ಲದೆ ಸಂಸ್ಥೆಗಳ ಕಾರ್ಯನಿರ್ವಹಣೆ ಕೂಡ ಬಹಳ ಕಠಿಣ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

ಬೆಳಗಾವಿಯ(Belagavi) ವಿಟಿಯುನ ಡಾ.ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ಗುರುವಾರ ಆರಂಭಗೊಂಡ ಎಲ್‌ಐಎಸ್ ಅಕಾಡೆಮಿಯ 4ನೇ ರಾಷ್ಟ್ರೀಯ ಸಮ್ಮೇಳನ ಲಿಸಾಕಾನ್-2021 ಕಾರ್ಯಕ್ರಮದಲ್ಲಿ ಅವರುಮಾತನಾಡಿ, ವಿಟಿಯು ಮತ್ತು ಎಲ್‌ಐಎಸ್ ಅಕಾಡೆಮಿ ಸಹಯೋಗದೊಂದಿಗೆ ವಿವಿಯಲ್ಲಿ ಕೌಶಲಾಭಿವೃದ್ಧಿ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸುವ ಕುರಿತು ಆಲೋಚನೆ ಹೊಂದಲಾಗಿದೆ. ಹೀಗಾಗಿ ಈ ಕೋರ್ಸ್‌ನ ಉಪಯೋಗವನ್ನು ಎಲ್ಲ ಗ್ರಂಥಪಾಲಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

Viral Video of The Ellen Show: ಆಸ್ಪತ್ರೆಯಲ್ಲಿ ರೋಗಿಗಳ ಒಂಟಿತನ ದೂರ ಮಾಡಲು ಮಿನಿ ಲೈಬ್ರರಿ ಆರಂಭಿಸಿದ 9ರ ಬಾಲಕ!

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಹೊಸಮನಿ ಮಾತನಾಡಿ, ಆಧುನಿಕ ಗ್ರಂಥಾಲಯಗಳು ಸಂಪೂರ್ಣ ಡಿಟಿಲೈಸೇಷನ್ ಆಗುತ್ತಿವೆ. ಹೀಗಾಗಿ ಡಿಜಿಟಲ್ ಗ್ರಂಥಾಲಯಗಳಿಗೆ ಸದಸ್ಯತ್ವ ಪಡೆದುಕೊಂಡು ಅದರ ಸದ್ಬಳಕೆಗೆ ಎಲ್ಲರೂ ಮುಂದಾಗಬೇಕು ಎಂದು ಕಿವಿಮಾತು ಹೇಳಿರು.

ಡಿಜಿಟಲ್ ಗ್ರಂಥಾಲಯ ಈಗ ಅತಿವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಎಲ್ಲರೂ ಅದರ ಕುರಿತಾದ ಜ್ಞಾನ ಹೊಂದುವುದು ಮಾತ್ರವಲ್ಲ, ಅದರ ಸದ್ಬಳಕೆ ಕೂಡ ಅಷ್ಟೇ ಪ್ರಮಾಣದಲ್ಲಿ ಆಗಬೇಕಿದೆ ಎಂದು ಅವರು ಹೇಳಿದರು. ಇದೆ ವೇಳೆ ಸಾರ್ವಜನಿಕ ಗ್ರಂಥಾಲಯಗಳ ಡಿಜಿ ಟಲೈಸೇಷನ್ ಉನ್ನತೀಕರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಾಗಿ  ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಎಲ್‌ಐಎಸ್‌ನಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ ಹಲವಾರು ಗ್ರಂಥಪಾಲಕರು ಸೇರಿದಂತೆ ಇನ್ನಿತರೆ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2021ರ ಎಲ್‌ಐಎಸ್ ಕ್ಷೇತ್ರದ ಜೀವಮಾನ ಸಾಧನೆ ಗಾಗಿ ನೀಡುವ ಡಾ.ಎಸ್.ಆರ್.ರಂಗನಾಥನ್ ಪ್ರಶಸ್ತಿಯನ್ನು ಬೆಂಗಳೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಪ್ರೊ.ಪಿ.ಸದಾಶಿವ ಮೂರ್ತಿಗೆ ಹಾಗೂ ಜೀವಮಾನ ಸಾಧನೆಗಾಗಿ ಶಿಕ್ಷಣ ತಜ್ಞರಾದ ಡಾ.ಎಚ್. ನರಸಿಂಹಯ್ಯ ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡರ ಅವರಿಗೆ ಪ್ರದಾನ ಮಾಡಲಾಯಿತು. 

ಎಲ್‌ಐಎಸ್ ನಾಯಕತ್ವ ಪ್ರಶಸ್ತಿಯನ್ನು ಕೋಲ್ಕತಾದ ಸಾಲ್ಟ್ ಲೇಕ್ ಸಿಟಿಯ ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಫೌಂಡೇಶನ್ ಪ್ರಧಾನ ನಿರ್ದೇಶಕರಾದ ಪ್ರೊ.ಅಜಯ್ ಪ್ರತಾಪ್ ಸಿಂಗ್ ಅವರಿಗೆ ಹಾಗೂ ಎಲ್‌ಐಎಸ್ ಅಕಾಡೆಮಿ ಫೆಲೋಶಿಪ್ ಪ್ರಶಸ್ತಿಯನ್ನು ಮಹೇಂದ್ರಗಢ್‌ದ ಹರ್ಯಾಣ ವಿವಿಯ ಗ್ರಂಥಪಾಲಕರಾದ ಡಾ.ಸಂತೋಷ ಹುಲಗಬಾಳಿ ಅವರಿಗೆ ಪ್ರದಾನ ಮಾಡಲಾಯಿತು. ಇದೆ ವೇಳೆ ಗಾಂಧಿನಗರದ ಇನ್ಫೋಸಿಟಿಯ ಇನ್ ಫಾರ್ಮೇಶನ್ ಆ್ಯಂಡ್ ಲೈಬ್ರರಿ ನೆಟ್‌ವರ್ಕ್ ಸೆಂಟರ್ ವಿಜ್ಞಾನಿಗಳಾದ ಪಿ.ಕಣ್ಣನ್‌ರನ್ನು ಗೌರವಿಸಲಾಯಿತು.

ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಸಿದ್ದಪ್ಪ, ಪ್ರೊ.ತಿಮ್ಮೇಗೌಡ ಬಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ, ಬೆಂಗಳೂರಿನ ಐಸಿಎಎಸ್‌ಐ-ಸಿಎಸ್‌ಐಆರ್‌ನ ಜಂಟಿ ಮುಖ್ಯಸ್ಥರಾದ ಡಾ.ಶಿವರಾಮ್ ಎಲ್‌ಐಎಸ್ ಅಕಾಡೆಮಿಯ ಆಡಳಿತ ಮಂಡಳಿ, ಸದಸ್ಯರು, ಟ್ರಸ್ಟ್ ಸದಸ್ಯರು, ಕಾಲೇಜುಗಳ ಗ್ರಂಥಪಾಲಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಎಲ್‌ಐಎಸ್ ಅಕಾಡೆಮಿಯ ಅಧ್ಯಕ್ಷ ಪ್ರೊ.ಪಿ.ವಿ.ಕೊಣ್ಣೂರ ಸ್ವಾಗತಿಸಿದರು. ವಿಟಿಯು ಗ್ರಂಥಪಾಲಕ ಡಾ.ಕೆ.ಆರ್.ಮುಲ್ಲಾ ವಂದಿಸಿದರು. ಡಾ.ಸರಸ್ವತಿ ನಿರೂಪಿಸಿದರು.

click me!