NEP ಅನುಷ್ಠಾನದಲ್ಲಿ ಕುವೆಂಪು ವಿಶ್ವವಿದ್ಯಾಲಯ ಮೇಲುಗೈ: ಪ್ರೊ. ವೀರಭದ್ರಪ್ಪ

By Kannadaprabha NewsFirst Published Sep 17, 2022, 12:07 PM IST
Highlights

ಕುವೆಂಪು ವಿವಿಯಲ್ಲಿ ಚಿಂತನ-ಮಂಥನ ಕಾರ್ಯಕ್ರಮ, ಅಧ್ಯಯನ ಗುಣಮಟ್ಟವೃದ್ಧಿಸಲು ಎಲ್ಲ ವಿಭಾಗಳಲ್ಲಿ ಸ್ಮಾರ್ಟ್‌ ಕ್ಲಾಸ್‌

ಶಿವಮೊಗ್ಗ(ಸೆ.17):  ದೇಶದಲ್ಲಿಯೇ ಮೊದಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯವು ಅಳವಡಿಸಿಕೊಂಡಾಗ ವಿವಿಯು ಅದನ್ನು ಮುಂಚೂಣಿಯಲ್ಲಿ ನಿಂತು ಅನುಷ್ಠಾನಗೊಳಿಸಿದ್ದು ಹೆಮ್ಮೆಯ ವಿಷಯ. ಎಲ್ಲ ಸಿಬ್ಬಂದಿ ಅವರದೇ ಆದ ಅಧ್ಯಯನ, ಸಂಶೋಧನಾ ಸಾಮರ್ಥ್ಯ, ವಿಶೇಷ ಪ್ರತಿಭೆ, ಸೃಜನಾತ್ಮಕತೆಯಿಂದ ಕಾರ್ಯನಿರ್ವಹಿಸಿದ್ದರಿಂದ ವಿವಿಯು ರಾಜ್ಯ, ರಾಷ್ಟ್ರಮಟ್ಟದ ಕೆಎಸ್‌ಯುಆರ್‌ಎಫ್‌, ಎನ್‌ಐಆರ್‌ಎಫ್‌ ರ‍್ಯಾಂಕ್‌ಗಳಲ್ಲಿ 100ರ ಒಳಗಿನ ಉತ್ತಮ ಸ್ಥಾನ ಪಡೆಯುತ್ತಿದೆ ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯವು ವಿವಿಯ ಬಸವ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿ.ವಿ.ಯ ಶೈಕ್ಷಣಿಕ ಪ್ರಗತಿಯ ಕುರಿತ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಯಲ್ಲಿನ ಅಧ್ಯಯನ ಗುಣಮಟ್ಟವೃದ್ಧಿಸಲು ಎಲ್ಲ ವಿಭಾಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಶೋಧನೆಗಾಗಿ ಹೊಸ ಉಪಕರಣಗಳು ಮತ್ತು ಕಂಪ್ಯೂಟರ್‌ಗಳನ್ನು ತರಿಸಲಾಗಿದೆ. ರಾಜ್ಯದ ಮೊದಲ ತಂಬಾಕುಮುಕ್ತ ವಿ.ವಿ.ಯಾಗಿ ಬೆಳೆದಿದೆ. ಅಧ್ಯಾಪಕೇತರ ನೌಕರರ ಬಹುದಿನಗಳ ಬೇಡಿಕೆಯಾದ ಬಡ್ತಿ ನೀಡಲಾಗಿರುವುದು ಹಾಗೂ ಎರಡೆರಡು ಘಟಿಕೋತ್ಸವಗಳನ್ನು ಯಶಸ್ವಿಯಾಗಿ ಒಟ್ಟಿಗೆ ನಡೆಸಲಾಗಿದೆ ಎಂದು ತಿಳಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಅಶ್ವಥ್ ನಾರಾಯಣ

ವಿ.ವಿ.ಯ ಸಿಂಡಿಕೇಟ್‌ ಸದಸ್ಯ ರಮೇಶ್‌ ಬಾಬು ಮಾತನಾಡಿ, ಕುಲಪತಿಗಳಂತಹ ಉನ್ನತ ಹುದ್ದೆಗಳು ಚಿನ್ನದ ಮುಳ್ಳಿನಂತಹ ಶ್ರೀಮಂತ. ಆದರೆ ಅತಿಸೂಕ್ಷ್ಮ ಹಾಗೂ ಮಹಾನ್‌ ಜವಾಬ್ದಾರಿಗಳಿರುವಂತಹ ಸ್ಥಾನಗಳಾಗಿರುತ್ತವೆ. ಕುಲಪತಿಗಳು ತಮಗೆ ಎದುರಾದ ಸವಾಲುಗಳನ್ನು ಈಗಾಗಲೇ ನಿವಾರಿಸಿಕೊಂಡು ಕಾರ್ಯನಿರ್ವಹಿಸುವ ಚಾಕಚಕ್ಯತೆಯನ್ನು ತೋರಿದ್ದಾರೆ. ಇದನ್ನು ಮುಂದುವರಿಸಿ ವಿ.ವಿ.ಯ ಬೆಳವಣಿಗೆಯನ್ನು ಮತ್ತಷ್ಟು ಎತ್ತರಿಸಲಿ. ಹಾಗೂ ನಾವೆಲ್ಲರೂ ಅವರಿಗೆ ಸಹಕರಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿ.ವಿ.ಯ ಪರೀಕ್ಷಾಂಗ ಕುಲಸಚಿವ ಪೊ›.ನವೀನ್‌ಕುಮಾರ್‌, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಡಾ.ಪ್ರಶಾಂತ್‌ ನಾಯ್ಕ್‌ ಜಿ., ವಿ.ವಿ.ಯ ಸಿಂಡಿಕೇಟ್‌ ಸದಸ್ಯರಾದ ಬಳ್ಳಕೆರೆ ಸಂತೋಷ್‌, ರಾಮಲಿಂಗಪ್ಪ, ವಿ.ವಿ.ಯ ಡಾ.ಯೋಗೀಶ್‌, ಡಾ.ರಾಮಚಂದ್ರ, ಶ್ರೀನಿವಾಸ್‌ ಉಪಸ್ಥಿತರಿದ್ದು ಮಾತನಾಡಿದರು.

ಕರ್ನಾಟಕ ಸರ್ಕಾರವು ಹೊಸ ಏಳು ವಿ.ವಿ.ಗಳನ್ನು ಆರಂಭಿಸಲು ಮುಂದಾಗಿದೆ. ವಿ.ವಿ.ಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅನುದಾನ ಮೊತ್ತಗಳಲ್ಲಿ ಇಳಿಕೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳು ಯಾವುದೇ ಕುಂದುಕೊರತೆಯಿಲ್ಲದಂತೆ ನಡೆಸುವ ಸವಾಲುಗಳು ನಮ್ಮ ಮೇಲಿದೆ. ಬರುವ ದಿನಗಳಲ್ಲಿ ನ್ಯಾಕ್‌ ಕಮಿಟಿ ವಿ.ವಿ.ಗೆ ಬರಲ್ಲಿದ್ದು, ಅದಕ್ಕೆ ತಯಾರಿ ನಡೆಸಿ ವಿ.ವಿ.ಯ ರ‍್ಯಾಂಕ್‌ ಅನ್ನು ಉನ್ನತ ಸ್ಥಾನಗಳಲ್ಲಿ ಮುಂದುವರಿಸುವ ಪ್ರಯತ್ನ ಅಗತ್ಯ ಅಂತ ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧ ತಿಳಿಸಿದ್ದಾರೆ.  
 

click me!