Karnataka Textbook Revision: ಶಾಲಾ ಪಠ್ಯದಿಂದ ಬನ್ನಂಜೆ ಆಚಾರ್ಯರ ಕೃತಿಗೆ ಕೋಕ್, ಶಿಷ್ಯನ ಬೇಸರ

By Gowthami KFirst Published Jun 8, 2023, 8:31 PM IST
Highlights

ನೂತನ ಕಾಂಗ್ರೆಸ್ ಸರ್ಕಾರ ರದ್ದು ಪಡಿಸಲು ಯೋಜಿಸಿರುವ ಪಠ್ಯಗಳಲ್ಲಿ ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಕೃತಿಯೂ ಸೇರಿದ್ದು, ಅಭಿಮಾನಿಗಳ ಬೇಸರ

ಉಡುಪಿ (ಜೂ.8): ನೂತನ ಕಾಂಗ್ರೆಸ್ ಸರ್ಕಾರ ರದ್ದು ಪಡಿಸಲು ಯೋಜಿಸಿರುವ ಪಠ್ಯಗಳಲ್ಲಿ ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಕೃತಿಯೂ ಸೇರಿದೆ. ರೋಹಿತ್ ಚಕ್ರತೀರ್ಥ  (Rohith Chakrathirtha) ಪಠ್ಯಪುಸ್ತಕ ಪರಿಷ್ಕರಣೆ ಮಾಡಿದಾಗ ಬನ್ನಂಜೆ ಅವರ ಕೃತಿ ಪಾಠವಾಗಿತ್ತು. ಈಗ ಅದು ರದ್ದಾಗುವ ಪಟ್ಟಿಯಲ್ಲಿದೆ. ಇದು ಬನ್ನಂಜೆ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಕುರಿತು ಬನ್ನಂಜೆ ಅವರ ಶಿಷ್ಯ, ಅಭಿಮಾನಿ ಉಡುಪಿಯ ವಾಸುದೇವ ಭಟ್ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಬನ್ನಂಜೆಯವರ ಪಠ್ಯ ತೆಗೆದಿರುವುದರಿಂದ ಸಮಾಜಕ್ಕೆ ನಷ್ಟವಾಗಲಿದೆ, ನೀತಿ ಆಧಾರದಲ್ಲಿ ಸಮಾಜ ಕಟ್ಟಬೇಕು ಅನ್ನೋದು ಕನಸು ಇದರಿಂದ ಈಡೇರಲು ಸಾಧ್ಯವಿಲ್ಲ. ಬನ್ನಂಜೆ ಅವರಂತ ವಿದ್ವಾಂಸರಿಗೆ ಇದರಿಂದ ಯಾವುದೇ ನಷ್ಟವಾಗುವುದಿಲ್ಲ‌  ಎಂದಿದ್ದಾರೆ.

ಇಂತಹ ಅನೇಕ ವಿರೋಧಾಭಾಸಗಳನ್ನು ಹಿಂದೆಯೂ ನೋಡಿದ್ದೇವೆ. ರಾಮಾಯಣ ಬರೆದ ವಾಲ್ಮೀಕಿಗೆ ಸಿಕ್ಕ ಮಾನ್ಯತೆ ವೇದವ್ಯಾಸರಿಗೆ ಸಿಗಲಿಲ್ಲ. ಮಹಾಭಾರತ, 18 ಪುರಾಣ, ಭಗವದ್ಗೀತೆ ,ಬ್ರಹ್ಮಸೂತ್ರ ಉಪನಿಷತ್ತು ಬರೆದರೂ ವೇದವ್ಯಾಸರಿಗೆ ಸೂಕ್ತ ಮಾನ್ಯತೆ ಸಿಗಲಿಲ್ಲ. ಕನಕದಾಸರಿಗೆ ಸಿಕ್ಕ ಗೌರವ ಅವರು ಕೂಡ ತಮ್ಮ ಗುರುಗಳು ಎಂದು ಹಾಡಿ ಹೊಗಳಿದ, 5 ಲಕ್ಷ ಕೀರ್ತನೆ ಬರೆದ ಪುರಂದರದಾಸರಿಗೆ ಸಿಗಲಿಲ್ಲ ಎಂದರು.

ನೀತಿಯ ನೆಲೆಯಲ್ಲಿ ಸಮಾಜ ಕಟ್ಟ ಹೊರಟ ಸರಕಾರಕ್ಕೆ ಇದರಿಂದ ತೊಂದರೆ ಆಗುತ್ತೆ. ಒಬ್ಬ ವ್ಯಕ್ತಿಯನ್ನು ಒಂದು ಸಿದ್ಧಾಂತಕ್ಕೆ ಸೀಮಿತಗೊಳಿಸುವುದು ಅಗತ್ಯತೆ ಉಂಟಾ? ಈ ಬಗ್ಗೆ ಸರಕಾರ ಯೋಚನೆ ಮಾಡಬೇಕು. ಕರ್ನಾಟಕ ಕಂಡ ಶ್ರೇಷ್ಠ ವಿದ್ವಾಂಸ ಗೋವಿಂದಾಚಾರ್ಯ (Bannanje Govindacharya)  ಅವರು ಯಾವುದೇ ಸಿದ್ಧಾಂತಕ್ಕೆ ಒಳಪಡದೆ ಅದ್ಭುತ ಕೃತಿ ರಚನೆ ಮಾಡಿದ್ದಾರೆ. ವಿದ್ವತ್ ಪರಂಪರೆಯನ್ನು ಮುಂದುವರಿಸಿದವರು ಗೋವಿಂದಾಚಾರ್ಯರು ಎಂದು ವಾಸುದೇವ ಭಟ್ ಗಮನ ಸೆಳೆದಿದ್ದಾರೆ.

ಚಕ್ರತೀರ್ಥ ಸಿದ್ಧಪಡಿಸಿದ್ದ ಪಠ್ಯಕ್ಕೆ ಕೊಕ್, ಬರಗೂರು ಸಮಿತಿ ಪಠ್ಯ ಮರು ಮುದ್ರಣಕ್ಕೆ ಒತ್ತಡ

ಅವರ ಕೃತಿಯನ್ನು ರದ್ದುಪಡಿಸಿರುವುದರಿಂದ ಬನ್ನಂಜೆ ಅವರಿಗೆ ನಷ್ಟವಾಗಲಿಲ್ಲ.ಅವರ ವಿದ್ವತ್ತಿಗೂ ನಷ್ಟ ಆಗುವುದಿಲ್ಲ‌. ನಾನು ಸರ್ಕಾರವನ್ನು ವಿರೋಧ ಮಾಡುವುದಿಲ್ಲ.ನಾಗರಿಕನಾಗಿ ನಾನು ವಿವೇಚನೆಯಿಂದ ಯೋಚಿಸುತ್ತೇನೆ. ಸಂಖ್ಯೆಯ ಆಟದಲ್ಲಿ ಕಾಂಗ್ರೆಸ್ ಇವತ್ತು ಗೆದ್ದಿದೆ. ನಾಡಿನ ಜನ ನಿಮಗೆ ತೀರ್ಮಾನ ಕೈಗೊಳ್ಳುವ ಅವಕಾಶ ಕೊಟ್ಟಿದ್ದಾರೆ. ಅದನ್ನು ನಾವು ವಿರೋಧಿಸಲು ಸಾಧ್ಯವಿಲ್ಲ. ಆದರೆ ಬನ್ನಂಜೆ ಅಂತ ಶ್ರೇಷ್ಠ ವಿದ್ವಾಂಸರನ್ನು ಒಂದು ಸೀಮಿತ ಪರಿಧಿಯೊಳಗೆ ಇಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಈ ಸಂಕುಚಿತ ದೃಷ್ಟಿ ಸರೀನಾ ನೀವೇ ಯೋಚಿಸಬೇಕು. ಗೋವಿಂದಾಚಾರ್ಯರು ಮಡಿವಂತಿಕೆ ಒಳಪಟ್ಟ ವಿದ್ವಾಂಸ ಅಲ್ಲ. ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆಯನ್ನ ವರ್ತಮಾನದ ಕಣ್ಣಿನಲ್ಲಿ ಕಟ್ಟಿಕೊಟ್ಟವರು. ವರ್ತಮಾನದ ಮನಸ್ಸುಗಳಿಗೆ ಆಧ್ಯಾತ್ಮ ಜಗತ್ತು ಪರಿಚಯಿಸಿದವರು. ಬನ್ನಂಜೆಯವರು ಜಗತ್ತು ಮೆಚ್ಚಿದ ವಿದ್ವಾಂಸರು ಲಕ್ಷಾಂತರ ಜನ ಅವರ ಪ್ರವಚನಗಳ ಅಭಿಮಾನಿಗಳಿದ್ದಾರೆ. ನೂರು ಜನ ವಿದ್ವಾಂಸರು ಮಾಡುವ ಕೆಲಸವನ್ನು ಇವರು ತಪಸ್ವಿಯಂತೆ ಮಾಡಿದ್ದಾರೆ. ಅವರ ಕೃತಿಗಳತ್ತ ಕಣ್ಣು ಹಾಯಿಸಲು ನಮಗೆ ಯೋಗ್ಯತೆ ಸಾಲುವುದಿಲ್ಲ ಎಂದರು.

ಶಿಕ್ಷಣ ಮಂತ್ರಿಗಳೇ ಇಲ್ನೋಡಿ.! 116 ವರ್ಷದ ಅ.ಹಿ.ಪ್ರಾ. ಶಾಲೆಗೆ ಶಿಕ್ಷಕರೇ ಇಲ್ಲ

ಪದ್ಮಶ್ರೀ ಕೊಟ್ರು ಆದ್ರೆ ಪಠ್ಯ ಬೇಡವಂತೆ:
ಬನ್ನಂಜೆ ಅವರಿಗೆ ಪದ್ಮಶ್ರೀ ಕೊಟ್ಟದ್ದು ಕಾಂಗ್ರೆಸ್ ಸರಕಾರ. ಪದ್ಮಶ್ರೀ ಕೊಟ್ಟ ಕಾಂಗ್ರೆಸ್ ಗೆ ಅವರ ಪಠ್ಯ ಯಾಕೆ ಯೋಗ್ಯವಲ್ಲ ಅನಿಸಿತು? ಆಗಿನ ಕಾಂಗ್ರೆಸ್ ಸರಕಾರಕ್ಕೆ ಮಾನ್ಯ ಅನಿಸಿದ್ದು ಈಗ ಯಾಕೆ ಹೀಗಾಯ್ತು? ನಾವು ಸರ್ಕಾರದ ನಿರ್ಧಾರವನ್ನು ಖಂಡಿಸುವುದಿಲ್ಲ. ಆದರೆ ಬನ್ನಂಜೆ ಅಂತಹ ವ್ಯಕ್ತಿತ್ವವನ್ನು ಮಿತಿಗೆ, ಸಿದ್ದಾಂತಕ್ಕೆ ಒಳಪಡಿಸಬೇಕಾದರೆ 10 ಬಾರಿ ಯೋಚನೆ ಮಾಡಿ.ಈ ಪಠ್ಯ ರದ್ದುಪಡಿಸುವುದರಿಂದ ಮುಂದಿನ ಪೀಳಿಗೆಗೆ ನಷ್ಟವಾಗಲಿದೆ. ಮುಂದಿನ ಪೀಳಿಗೆಗೆ ಬನ್ನಂಜೆ ಅವರ ಜ್ಞಾನ ಸಿಗದೇ ಹೋಗುತ್ತೆ ಅನ್ನೋದೇ ಬೇಸರ ಎಂದು ನೋವು ವ್ಯಕ್ತಪಡಿಸಿದ್ದಾರೆ.

click me!