* ಶುಲ್ಕ ಕಟ್ಟದ ಫೋಷಕರ ವಿರುದ್ಧ ಠಾಣೆ ಮೆಟ್ಟಿಲೇರಲು ತೀರ್ಮಾನಿಸಿದ ಕೆಎಎಂಎಸ್
* ಕೆಎಎಂಎಸ್ ಸಭೆಯಲ್ಲಿ ನಿರ್ಧಾರ
* ಈ ಬಗ್ಗೆ ಮಾಹಿತಿ ನೀಡಿದ ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್
ಬೆಂಗಳೂರು, (ಡಿ.02): ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣಪತ್ರ(TC) ತಡೆಹಿಡಿಯದಂತೆ ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಇದಕ್ಕೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ (KAMS) ಆಕ್ರೋಶಗೊಂಡಿದ್ದು, ಶಾಲಾ ಶುಲ್ಕವನ್ನು ಪಾವತಿಸದ ವಿದ್ಯಾರ್ಥಿ ಪೋಷಕರ ವಿರುದ್ಧ ಪೋಲಿಸರಿಗೆ ದೂರು ನೀಡಲು ತೀರ್ಮಾನಿಸಿದೆ. ಇತ್ತೀಚೆಗೆ ನಡೆದ ಕೆಎಎಂಎಸ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
Education| ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ
ಇನ್ನು ಈ ಬಗ್ಗೆ ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಶಾಲೆ ಶುಲ್ಕ ಪಾವತಿಸಿರಬೇಕು. ಒಂದು ವೇಳೆ ಶುಲ್ಕ ಪಾವತಿಸದಲ್ಲಿ ವಂಚನೆ ಆರೋಪದ ಮೇರೆ ಪೋಷಕರ ವಿರುದ್ಧ ದೂರು ನೀಡುತ್ತೇವೆ. ಶಾಲೆಗಳೊಂದಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಶನ್ನ ರಾಜ್ಯ ಕಾರ್ಯದರ್ಶಿ ಪಿ ಇ ಚಿದಾನಂದ್ ಮಾಧ್ಯಮದೊಂದಿಗೆ ಮಾತನಾಡಿ, ಪೋಷಕರ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸುವ KAMS ನ ಇತ್ತೀಚಿನ ಕ್ರಮ ಸ್ವಾಗತಾರ್ಹವಾಗಿದೆ. ಅಂತಹ ವಿಷಯಗಳು ನ್ಯಾಯಾಲಯವನ್ನು ತಲುಪಿದ ನಂತರ, ಶುಲ್ಕ ಸ್ಲ್ಯಾಬ್ಗಳನ್ನು ಹೇಗೆ ಅಂತಿಮಗೊಳಿಸಲಾಗಿದೆ ಎಂಬುದರ ಕುರಿತು ಅಫಿಡವಿಟ್ಗಳನ್ನು ಸಲ್ಲಿಸಲು ಶಾಲಾ ಆಡಳಿತ ಮಂಡಳಿಗಳನ್ನು ಒತ್ತಾಯಿಸಲಾಗುತ್ತದೆ. ಹಲವು ವರ್ಷಗಳಿಂದ ಹಲವಾರು ನಿಯಮಗಳನ್ನು ಉಲ್ಲಂಘಿಸಲಾಗಿದ್ದರೂ, ಸಾಂಕ್ರಾಮಿಕ ರೋಗದಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾದ ಪೋಷಕರ ವಿರುದ್ಧ ದೂರು ನೀಡಲು ಈ ಆಡಳಿತ ಮಂಡಳಿಗಳಿಗೆ ಯಾವುದೇ ನೈತಿಕ ನಿಲುವು ಉಳಿದಿಲ್ಲ ಎಂಬುದು ವಿಪರ್ಯಾಸವಾಗಿದೆ ಎಂದರು.
ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ನಲ್ಲಿ ಖಾಸಗಿ ಶಾಲೆಗಳಿಗೆ 2019-2020 ಶೈಕ್ಷಣಿಕ ವರ್ಷಕ್ಕೆ ವಿಧಿಸಿದ ಬೋಧನಾ ಶುಲ್ಕದ ಶೇಕಡಾ 85 ರಷ್ಟು ಸಂಗ್ರಹಿಸಲು ಅನುಮತಿ ನೀಡಿತ್ತು, ಶೈಕ್ಷಣಿಕ ಅವಧಿಗಳು ಆನ್ಲೈನ್ನಲ್ಲಿ ನಡೆಯುತ್ತಿರುವುದರಿಂದ ಉಳಿದಿರುವ ಸೌಲಭ್ಯಗಳ ಖಾತೆಯಲ್ಲಿ ಶೇಕಡಾ 15 ರಷ್ಟು ರಿಯಾಯಿತಿಯನ್ನು ನೀಡುವಂತೆ ನಿರ್ದೇಶಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಪೋಷಕರು ಸಲ್ಲಿಸಿದ ಅರ್ಜಿಯನ್ನು ಆಧರಿಸಿ ಖಾಸಗಿ ಶಾಲೆಗಳಿಂದ ಹೊರಬರಲು ಬಯಸುವ ಮಕ್ಕಳಿಗೆ ವರ್ಗಾವಣೆ ಪ್ರಮಾಣಪತ್ರವನ್ನು ನೀಡುವಂತೆ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಸೂಚಿಸಿತ್ತು. ಆದ್ರೆ, ಕೊರೋನಾ ಸಂಕಷ್ಟ ಸಮಯದಲ್ಲಿ ಶುಲ್ಕವನ್ನು ಕಟ್ಟುವಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಟಿಸಿಗಳನ್ನು ನೀಡಲು ನಿರಾಕರಿಸಿವೆ ಎಂದು ಪೋಷಕ ಸಂಘಗಳು ಆರೋಪಿಸಿದ್ದವು.
ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ
ಹೈಕೋರ್ಟ್(Highcourt) ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶೇ. 15ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ, ಶೇ. 85ರಷ್ಟು ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ(Fees) ಪಡೆದಿದ್ದರೆ ವಾಪಸ್ ನೀಡಬೇಕು, ಇನ್ನುಳಿದ ಯಾವುದೇ ಶುಲ್ಕ ಪಡೆಯಬಾರದೆಂದು ರಾಜ್ಯ ಸರ್ಕಾರ(Government Of Karnataka) ಆದೇಶ ಹೊರಡಿಸಿದೆ.
ಒಂದೊಮ್ಮೆ ಪೂರ್ಣ ಶುಲ್ಕ ಪಡೆದಿದ್ದರೆ ಪೋಷಕರಿಗೆ(Parents) ಹಿಂದಿರುಗಿಸಬೇಕು. ಇಲ್ಲದಿದ್ದರೆ, 2021-22 ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಬೋಧನಾ ಶುಲ್ಕ (Tuition Feeಹೊರತುಪಡಿಸಿ ಬೇರಾವುದೇ ಶುಲ್ಕ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಶುಲ್ಕ(School Development Fee), ಐಚ್ಛಿಕ ಶುಲ್ಕ, ಟ್ರಸ್ಟ್ ಹಾಗೂ ಸೊಸೈಟಿಗಳಿಗೆ ಯಾವುದೇ ವಂತಿಗೆ ಸ್ವೀಕರಿಸದಂತೆ ಸರ್ಕಾರ ನಿರ್ಬಂಧ ವಿಧಿಸಿದೆ. ಒಂದೊಮ್ಮೆ, ಶೇ.15 ಕ್ಕಿಂತಲೂ ಹೆಚ್ಚು ಶುಲ್ಕ ಕಡಿತಗೊಳಿಸಲು ಆಡಳಿತ ಮಂಡಳಿಗಳು ಇಚ್ಛಿಸಿದರೆ ನೀಡಬಹುದು ಎಂದು ತಿಳಿಸಲಾಗಿದೆ.
ಶಾಲೆಯ ವಾರ್ಷಿಕ ಶುಲ್ಕದಲ್ಲಿ ಶೇ.15 ರಷ್ಟನ್ನು ಕಡಿತ ಮಾಡಿ ಎಂದು ಸುಪ್ರೀಂ ಕೋರ್ಟ್(Supreme Court) ನೀಡಿದ್ದ ಆದೇಶ ಉಲ್ಲೇಖಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರ ಬೋಧನಾ ಶುಲ್ಕದಲ್ಲಿ ಶೇ.85 ಮಾತ್ರ ಪಡೆಯಬೇಕು ಎಂದು ಹೇಳಿ ಪೋಷಕರು ಮತ್ತು ಶಾಲೆಗಳ ನಡುವೆ ಘರ್ಷಣೆ ಉಂಟು ಮಾಡುತ್ತಿದೆ. ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ(Judicial Abuse) ಅರ್ಜಿ ದಾಖಲಿಸಲಾಗುವುದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.