Guest Lecturer ಸಂಕ್ರಾಂತಿ ಕೊಡುಗೆ ಶುದ್ಧ ಸುಳ್ಳು, ಸರ್ಕಾರದ ತೀರ್ಮಾನಕ್ಕೆ ಅತಿಥಿ ಉಪನ್ಯಾಸಕರ ಆಕ್ರೋಶ

By Suvarna NewsFirst Published Jan 15, 2022, 6:09 PM IST
Highlights

* ಮುಗಿಯದ ಅತಿಥಿ ಉಪನ್ಯಾಸಕರ ಗೊಂದಲ
* ಸರ್ಕಾರದ ಘೋಷಣೆಗೆ ಅತಿಥಿ ಉಪನ್ಯಾಸಕರು ಆಕ್ರೋಶ
* ಅತಿಥಿ ಉಪನ್ಯಾಸಕರ ವೇತನ ದುಪ್ಪಟ್ಟು ಹೆಚ್ಚಿಸಿ ಸಂಕ್ರಾಂತಿ ಸಿಹಿ ಎಂದಿದ್ದ ಸರ್ಕಾರ

ಬೆಂಗಳೂರು, (ಜ.15): ಅತಿಥಿ ಉಪನ್ಯಾಕರಿಗೆ(Guest Lecturers) ಸಂಕ್ರಾಂತಿ ಹಬ್ಬಕ್ಕೆ (Sankranti Festival) ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿರುವ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Dr CN Ashwath Narayan) ಅವರ ಹೇಳಿಕೆ ಶುದ್ಧ ಸುಳ್ಳು, ಇದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ಹೊರಹಾಕಿದ್ದಾರೆ.

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಹಾಯ ಧನವನ್ನ ಅತಿಥಿ ಉಪನ್ಯಾಸಕರಿಗೆ ನೀಡ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು. ಟೆಕ್ನಿಕಲಿ ಯೋಚನೆ ಮಾಡಿದರೆ ಒಬ್ಬರಿಗೆ 3 ಸಾವಿರ ಮಾತ್ರ ಹೆಚ್ಚು ಮಾಡಿದ್ದಾರೆ. ಆದರೆ, 30, 32 ಸಾವಿರ ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದ್ದಾರೆ.

Karnataka Guest Lecturer Salary Hike: ಸಂಕ್ರಾಂತಿ ಕೊಡುಗೆ, ಅತಿಥಿ ಉಪನ್ಯಾಸಕರ ವೇತನ ದುಪ್ಪಟ್ಟು ಹೆಚ್ಚಿಸಿದ ಸರಕಾರ

ಇನ್ನು ಸರ್ಕಾರದ ತೀರ್ಮಾನದಲ್ಲಿ ಉದ್ಯೋಗ ಭದ್ರತೆ ಇಲ್ಲ. ಇದೊಂದು ಒಡೆದು ಆಳುವ ನೀತಿ. ಯಾರೂ ಕೂಡ ಧೃತಿಗೆಡೋದು ಬೇಡ. ನಮ್ಮ ಹೋರಾಟ ಮುಂದುವರೆಯುತ್ತದೆ. 14 ಸಾವಿರ ಮಂದಿಗೂ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಪ್ರತಿಭಟನಾ ನಿರತ ಅಥಿತಿ ಉಪನ್ಯಾಸಕರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನ ಮಾತ್ರ ಹೆಚ್ಚಿಗೆ ಮಾಡಿರೋದು ಬೇಸರದ ಸಂಗತಿ. ಆದರೆ ಅತಿಥಿ ಉಪನ್ಯಾಸಕರಿಗೆ ಬೇಕಿರೋದು ಸಂಬಳ ಅಲ್ಲ. ಸೇವಾ ಭದ್ರತೆ ಬೇಕು. ಖಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರು ಬಂದಾಗ ನಮ್ಮ ವೃತ್ತಿಯನ್ನೇ ತೊರೆಯಬೇಕಿದೆ, ಈ ಕ್ರಮ ಸರಿ ಇಲ್ಲ. ಈ ಹಿಂದಿನಿಂದಲೂ ಸೇವಾ ಅಭದ್ರತೆ ಕಾಡ್ತಿತ್ತು. ಸೇವಾ ಭದ್ರತೆಗಾಗಿ ನಾವು ಹೋರಾಟ ಕೈಗೊಂಡಿದ್ದೇವೆ. ನಮ್ಮ ಮೂಲ ಬೇಡಿಕೆಯನ್ನೇ ಈಡೇರಿಸದೇ ಸರ್ಕಾರ ಕೈ ಚೆಲ್ಲಿದ್ದಾರೆ. ಇದು ನಿರಾಶಾದಾಯಕವಾದ ಕ್ರಮ. ನಮ್ಮ ಮೂಲ ಬೇಡಿಕೆ ಈಡೇರೋವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಸರ್ಕಾರದ ಘೋಷಣೆ
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (karnataka government first grade college) ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ (Guest Lecturer) ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಕೊನೆಗೂ ಒಪ್ಪಿದೆ. ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರಕಾರ ಸಂಕ್ರಾಂತಿಗೆ ಸಿಹಿಸುದ್ದಿ ಕೊಟ್ಟಿದ್ದು, ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಿದೆ. ಜೊತೆಗೆ, ಸೆಮಿಸ್ಟರ್‌ವಾರು ನೇಮಕಾತಿಯನ್ನು ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿ ಕೊಳ್ಳುವುದಾಗಿ ಘೋಷಿಸಿತ್ತು.

ಅತಿಥಿ ಉಪನ್ಯಾಸಕರ ವೇತನ (salary) 11,000 ರೂ ನಿಂದ 28,000 ರೂ. ಗೆ ಏರಿಕೆ ಮಾಡಲಾಗಿದೆ. ಐದು ವರ್ಷ ಕ್ಕಿಂತ ಹೆಚ್ಚು ವರ್ಷ ಕೆಲಸ ಮಾಡಿರುವವರಿಗೆ , ಯುಜಿಸಿ ಕ್ವಾಲಿಫಿಕೇಷನ್ ಇರುವವರಿಗೆ  13,000 ರೂ ನಿಂದ 32,000 ರೂ. ಗೆ ಏರಿಕೆ ಮಾಡಲಾಗಿದೆ. ಇದು ಸಂಕ್ರಾಂತಿ ಹಬ್ಬದ ಕೊಡುಗೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ್ (Ashwath Narayan) ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದರು.

ಅತಿಥಿ ಉಪನ್ಯಾಸಕರ ಬೇಡಿಕೆ ಇದ್ದು, ಇವರ ಬೇಡಿಕೆಗೆ ಅನುಗುಣವಾಗಿ, ಸಿಎಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಈ ಸಮಿತಿ ಸರ್ಕಾರದ ಮುಂದೆ ವರದಿ ನೀಡಿತ್ತು. ಇದನ್ನು ಮುಖ್ಯಮಂತ್ರಿಗಳು ಗಮನಿಸಿದ್ದು,  ವರದಿಯನ್ನು ಅನುಷ್ಠಾನಕ್ಕೆ ತರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಶ್ವಥ್ ನಾರಾಯಣ್  ಹೇಳಿದ್ದಾರೆ. 

2002ರಲ್ಲಿ ಅತಿಥಿ ಉಪನ್ಯಾಸಕರ ಯೋಜನೆ ಪ್ರಾರಂಭವಾಯ್ತು. UGC ಕ್ವಾಲಿಫಿಕೇಷನ್ ಇರೋರು, 5 ವರ್ಷ ಸೇವೆ ಸಲ್ಲಿಸಿದವರಿಗೆ 32 ಸಾವಿರ. UGC ಕ್ವಾಲಿಫಿಕೇಷನ್ ಇಲ್ಲದವರಿಗೆ 30ಸಾವಿರ ನೀಡಲಾಗುವುದು. UGC ಇಲ್ಲದೆ ಐದು‌ ವರ್ಷ ಸೇವೆ ಸಲ್ಲಿಸಿದವರಿಗೆ 28 ಸಾವಿರ ನೀಡಲಾಗುವುದು ಎಂದಿದ್ದಾರೆ. ಜತೆಗೆ, ಇವರು ನಿಗದಿತ ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳಲು 3 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆಲ್ಲ ಇನ್ನು ಮುಂದೆ ಪ್ರತೀ ತಿಂಗಳು 10ರೊಳಗೆ ವೇತನ ಪಾವತಿಸಲಾಗುವುದು ಎಂದು ಹೇಳಿದ್ದಾರೆ.

click me!