ಉನ್ನತ ಶಿಕ್ಷಣ ಇಲಾಖೆ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್‌, ಡಿ.25ರಂದು ಲೋಕಾರ್ಪಣೆ

By Gowthami KFirst Published Dec 12, 2022, 6:22 PM IST
Highlights

ಉನ್ನತ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆಗಳನ್ನು ಸುಲಭವಾಗಿ ಪರಿಹರಿಸಲು ಸಮಗ್ರ ಪೋರ್ಟಲ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು 'ಸುಶಾಸನ ದಿನ'ವಾದ ಡಿ.25ರಂದು ಉದ್ಘಾಟಿಸಲಾಗುವುದು ಎಂದು  ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು (ಡಿ.12): ಉನ್ನತ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆಗಳನ್ನು ಸುಲಭವಾಗಿ ಪರಿಹರಿಸಲು ಸಮಗ್ರ ಪೋರ್ಟಲ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು 'ಸುಶಾಸನ ದಿನ'ವಾದ ಡಿ.25ರಂದು ಉದ್ಘಾಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸರಕಾರಿ ಪಾಲಿಟೆಕ್ನಿಕ್‌ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಬೋಧಕರನ್ನು ಉದ್ದೇಶಿಸಿ ವರ್ಚುವಲ್ ಮೂಲಕ ಅವರು ಸೋಮವಾರ ಮಾತನಾಡಿದರು. 

ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಆದಷ್ಟೂ ಮಟ್ಟಿಗೆ ನ್ಯಾಯಾಲಯದ ಹೊರಗೆಯೇ ನಿವಾರಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಪೋರ್ಟಲ್‌ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಸರಳವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಕುಂದುಕೊರತೆಗಳನ್ನು ಆಲಿಸಿ, ಪಿಂಚಣಿ, ಬಡ್ತಿ, ನಿಯೋಜನೆ, ವರ್ಗಾವಣೆ ಮುಂತಾದ ವಿಚಾರಗಳನ್ನು ಸುಲಭವಾಗಿ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದರು.

ಉನ್ನತ ಶಿಕ್ಷಣದ ಹಂತದಲ್ಲಿ ಎನ್‌ಇಪಿಯಲ್ಲಿ ಅವಕಾಶವಿರುವ 'ಓಪನ್‌ ಎಲೆಕ್ಟೀವ್ಸ್‌' ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಇದರಿಂದ ಸ್ಪಷ್ಟವಾಗಿ ಗುರುತಿಸಬಹುದು. ಹಾಗೆಯೇ, ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ವಿವರಗಳನ್ನು ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಜತೆಗೆ, ಪದವೀಧರರಾಗಿ ಹೊರಹೋಗಿರುವ ವಿದ್ಯಾರ್ಥಿಗಳನ್ನೂ ಇದರಲ್ಲಿ ನೋಂದಾಯಿಸಬೇಕು. ಇದರಿಂದ ಆ ಮಕ್ಕಳಿಗೆ ಯಾವ ಕೌಶಲಗಳನ್ನು ಕಲಿಸಬಹುದು ಎನ್ನುವುದು ಉದ್ಯಮ ವಲಯದವರಿಗೂ ಗೊತ್ತಾಗುತ್ತದೆ. ಆದ್ದರಿಂದ ಎನ್‌ಇಪಿ ಬಗ್ಗೆ ಕಾಲೇಜು ಹಂತದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು.

ಕರ್ನಾಟಕದಲ್ಲಿ ಮೂರು ರಾಜ್ಯಗಳಿಗೆ ಆಗುವಷ್ಟು ಉದ್ಯೋಗಾವಕಾಶಗಳಿವೆ. ಇನ್ನೊಂದೆಡೆಯಲ್ಲಿ ರಾಜ್ಯದಲ್ಲಿ ನಿರುದ್ಯೋಗವು ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ನಮ್ಮ ಮುಂದಿರುವ ಉಜ್ಜ್ವಲ ಅವಕಾಶಗಳು ಸ್ಥಳೀಯ ಯುವಜನರಿಗೇ ಸಿಗುವುದನ್ನು ಕಲಿಕೆಯ ಹಂತದಲ್ಲೇ ಖಾತ್ರಿ ಪಡಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತ ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಮತ್ತು ಕಲಿಕೆಯಲ್ಲಿ ಜಾಗತಿಕ ಗುಣಮಟ್ಟಗಳನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಜಾಗತಿಕ ಸ್ಪರ್ಧೆಯ ಈ ಯುಗದಲ್ಲಿ ರಿಯಾಯಿತಿಗಾಗಲಿ, ರಾಜಿಗಾಗಲಿ ಅವಕಾಶವಿಲ್ಲ. ಆದ್ದರಿಂದ ಸ್ಮಾರ್ಟ್ ಕ್ಲಾಸ್‌ರೂಂ ಇರುವೆಡೆಗಳಲ್ಲಿ ಅದರ ಮೂಲಕವೇ ಬೋಧನೆ ನಡೆಯಬೇಕು. ಕೆಎಲ್‌ಎಂಎಸ್‌ ವ್ಯವಸ್ಥೆಯಲ್ಲಿರುವ ಪಠ್ಯಗಳನ್ನು ನೂರಕ್ಕೆ ನೂರರಷ್ಟು ಉಪಯೋಗಿಸಿಕೊಳ್ಳಬೇಕು. ಜತೆಗೆ ಇದರ ಅಡಿಯಲ್ಲಿ ಪ್ರತೀ ವಿದ್ಯಾರ್ಥಿಯೂ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ನಿರ್ದೇಶಿಸಿದರು.

ಭಾರತ ಜಗತ್ತಿಗೇ ಮಾರ್ಗದರ್ಶನ ಮಾಡಬಲ್ಲದು: ಸಚಿವ ಬಿ.ಸಿ.ನಾಗೇಶ್‌

ಇಲಾಖೆಯಲ್ಲಿ ಸುಶಾಸನದ ಅತ್ಯುತ್ತಮ ಅಂಶಗಳೆಲ್ಲವೂ ಜಾರಿಗೆ ಬರಬೇಕು. ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳನ್ನು ಸಾಕಷ್ಟು ಸುಧಾರಿಸಲಾಗಿದೆ. ಈಗಂತೂ ಆಯಾ ಕಾಲೇಜುಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾ ಕಾಲೇಜುಗಳಿಗೇ ನೀಡಲಾಗುತ್ತಿದೆ. ಈ ಮೂಲಕ ಆರ್ಥಿಕ ಸ್ವಾತಂತ್ರ, ಪಾರದರ್ಶಕತೆ ಮತ್ತು ಹೆಚ್ಚಿನ ಉತ್ತರದಾಯಿತ್ವಗಳನ್ನು ರೂಢಿಗೆ ತರಲಾಗಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.

ವಿದ್ಯೆ ಜಾಸ್ತಿಯಾದಂತೆ ವೃದ್ಧಾಶ್ರಮಗಳೂ ಹೆಚ್ಚುತ್ತಿವೆ: ಬಿಸಿ ನಾಗೇಶ್ ವಿಷಾದ

ವರ್ಚುಯಲ್‌ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

click me!