ರಾಜ್ಯದ 4 ಲಕ್ಷ ವಿದ್ಯಾರ್ಥಿಗಳಿಗೆ ಶಾಕ್‌: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದ ಸರ್ಕಾರ

By Sathish Kumar KHFirst Published Nov 20, 2023, 1:15 PM IST
Highlights

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ 4 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.

ಉಡುಪಿ (ನ.20): ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಶೇ.60 ರಷ್ಟು ಕಡಿತ ಮಾಡಿತ್ತು. ನಂತರ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ 13 ಲಕ್ಷ ವಿದ್ಯಾರ್ಥಿಗಳ ಪೈಕಿ 4 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿದೆ.

ರಾಜ್ಯದಲ್ಲಿ ಕೋವಿಡ್‌ ಅವಧಿಯಲ್ಲಿ ಎಲ್ಲ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಂಡಿದ್ದ ಬಿಜೆಪಿ ಸರ್ಕಾರ ಎಲ್ಲರಿಗೂ ಸಹಾಯ ಹಸ್ತವನ್ನು ಚಾಚಿತ್ತು. ಜೊತೆಗೆ, ಎಲ್ಲ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ ಹಿಂದೆ ಇದ್ದ ವಿದ್ಯಾರ್ಥಿ ವೇತನಕ್ಕಿಂತ ಶೇ.50ರಷ್ಟು ಸಹಾಯಧನ ಹೆಚ್ಚಳ ಮಾಡಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ಇಲಾಖೆಯಲ್ಲಿ ಹಣವಿಲ್ಲವೆಂದು ನೆಪವೊಡ್ಡಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನದ ಶೇ.60 ಮೊತ್ತವನ್ನು ಕಡಿತಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಈಗ ಕಾರ್ಮಿಕರಿಗೆ ಮತ್ತೊಂದು ಶಾಕ್‌ ನೀಡಿರುವ ಸರ್ಕಾರ, ವಿದ್ಯಾರ್ಥಿ ವೇತನಕ್ಕೆ ಸಲ್ಲಿಕೆ ಮಾಡಿದ್ದ 4 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ರದ್ದುಗೊಳಿಸಲಾಗಿದೆ.

ಗ್ಯಾರಂಟಿ ಯೋಜನೆಗಳಿಗಾಗಿ ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಹಾಕಿದ ಸರ್ಕಾರ!

ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು, ನಾವು ವಿದ್ಯಾರ್ಥಿ ವೇತನ ನಾವು ಕಡಿತ ಮಾಡಿಲ್ಲ. ಆದರೆ, 2021 ರಲ್ಲಿ 2,000 ಇದ್ದ ವಿದ್ಯಾರ್ಥಿ ವೇತನವನ್ನು 8,000 ರೂಪಾಯಿಗೆ ಹೆಚ್ಚಳ ಮಾಡಿದ್ದರು. ಏರಿಸಿದರು. ಇನ್ನು 10,000 ವಿದ್ಯಾರ್ಥಿ ವೇತನ ನೀಡುವವರಿಗೆ 30,000 ರೂಪಾಯಿ ಕೊಟ್ಟರು. 30,000 ರೂ. ಕೊಡುವವರಿಗೆ ಒಂದು 1 ಲಕ್ಷ ರೂಪಾಯಿ ಕೊಟ್ಟರು. ಇದು ಅವೈಜ್ಞಾನಿಕ ಕ್ರಮವಾಗಿತ್ತು. ಹೀಗಾಗಿ, ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದ್ದ ವಿದ್ಯಾರ್ಥಿ ವೇತನವನ್ನು ತಗ್ಗಿಸಲಾಗಿದೆ ಎಂದು ಹೇಳಿದರು.

ಕಳೆದ 3 ವರ್ಷಗಳಲ್ಲಿ ಏಕಾಏಕಿ 39 ಲಕ್ಷ ಕಾರ್ಮಿಕರ ಕಾರ್ಡ್ ನೀಡುವಂತೆ ಬೇಡಿಕೆ ಬಂದಿದೆ. ಹಾವೇರಿ ಜಿಲ್ಲೆಯಲ್ಲಿ 3 ಲಕ್ಷ ಕಾರ್ಡುಗಳಿವೆ. ಆದರೆ, ಇದರಲ್ಲಿ ಅನೇಕ ನಕಲಿ ಕಾರ್ಡುಗಳಿವೆ. ಮತ್ತೊಂದೆಡೆ, ಈ ವರ್ಷ ಕಾರ್ಮಿಕರ ಮಕ್ಕಳಿಂದ ವಿದ್ಯಾರ್ಥಿ ವೇತನಕ್ಕಾಗಿ ಬರೋಬ್ಬರಿ 13 ಲಕ್ಷ ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 9 ಲಕ್ಷ ಮಕ್ಕಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡಿದ್ದೇವೆ. ವೈಜ್ಞಾನಿಕ ರೀತಿಯಲ್ಲಿ ಈ ಸಮಸ್ಯೆ ನಿರ್ವಹಿಸುತ್ತೇವೆ ಎಂದು ಹೇಳಿದರು.

9.6 ಲಕ್ಷ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್‌ಶಿಪ್‌: ಸಿಎಂ ಸಿದ್ದರಾಮಯ್ಯ

ಅ.30ರಂದು ವಿದ್ಯಾರ್ಥಿವೇತನ ಕಡಿತಗೊಳಿಸಿದ್ದ ಸರ್ಕಾರ: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿನವನ್ನು ಕಡಿತಗೊಳಿಸಿ ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿರುವ ಸರ್ಕಾರ, ವಾರ್ಷಿಕವಾಗಿ ಕನಿಷ್ಟ 5000 ದಿಂದ 60,000 ಸಹಾಯಧನ ನೀಡಲಾಗುತ್ತಿತ್ತು. ಆದರೆ, ಈ ಸಹಾಯಧನದ ಮೊತ್ತದಲ್ಲಿ ಕಾಂಗ್ರೆಸ್‌ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಕಡಿತ ಮಾಡಿದೆ. ಕಳೆದ ಸಾಲಿನಲ್ಲಿ ನೀಡುತ್ತಿದ್ದ ಸಹಾಯಧನದ ಹಣದಲ್ಲಿ ಪ್ರತಿ ವಿಭಾಗವಾರು ವಿವಿಧ ಹಂತಕ್ಕೆ ತಕ್ಕಂತೆ 1,100 ರೂ.ಗಳಿಂದ 11,000ರೂ.ಗಳನ್ನು ಕಡಿತಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ವಿಭಾಗಗಳು:         ಹಿಂದಿನ ಮೊತ್ತ    ಈಗಿನ ಮೊತ್ತ
1-4 ತರಗತಿ       5,000        1,100
5-8 ತರಗತಿ ‌        8,000        1,250
9-10 ತರಗತಿ     12,000         3,000
ಪಿಯುಸಿ             15,000         4,600
ಪದವಿ                 25,000      6,000
ಬಿಇ, ಬಿಟೆಕ್       50,000         10,000
ಪಿಜಿ                      30,000         10,000
ಐಟಿಐ/ಡಿಪ್ಲೊಮೊ     20,000         4,600
ನರ್ಸಿಂಗ್/ಪ್ಯಾರಾಮೆಡಿಕಲ್    40,000         10,000
ಬಿ.ಇಡಿ               35,000         6,000
ಡಿ.ಇಡಿ                25,000       4,600
ವೈದ್ಯಕೀಯ       60,000      11,000
ಎಲ್ಎಲ್‌ಬಿ/ಎಲ್‌ಎಲ್‌ಎಂ    30,000         10,000
ಪಿಎಚ್‌ಡಿ/ಎಂ.ಫಿಲ್     25,000         11,000

click me!