ನೀಟ್ ಫಲಿತಾಂಶಕ್ಕೆ ಕಾಯದೆ ಇಂಜಿನಿಯರಿಂಗ್‌ಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲು ಕರ್ನಾಟಕ ನಿರ್ಧಾರ!

Published : May 22, 2026, 04:31 PM IST
Karnataka CET Counselling

ಸಾರಾಂಶ

ನೀಟ್ ಪರೀಕ್ಷೆಯ ವಿವಾದಗಳಿಂದ ವೈದ್ಯಕೀಯ ಕೌನ್ಸೆಲಿಂಗ್ ವಿಳಂಬವಾಗುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ನೀಟ್ ಫಲಿತಾಂಶಕ್ಕಾಗಿ ಕಾಯದೆ ಇಂಜಿನಿಯರಿಂಗ್ ಮತ್ತು ಇತರ ಕೋರ್ಸ್‌ಗಳಿಗೆ ಸಿಇಟಿ ಕೌನ್ಸೆಲಿಂಗ್ ಅನ್ನು ಪ್ರತ್ಯೇಕವಾಗಿ ಆರಂಭಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಖಾಸಗಿ ಕಾಲೇಜುಗಳು ಶುಲ್ಕ ಮರುಪಾವತಿಗೆ ಒಪ್ಪಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತಲಿನ ನಿರಂತರ ವಿವಾದಗಳು ಮತ್ತು ಮರುಪರೀಕ್ಷೆಯ ಕಾರಣದಿಂದಾಗಿ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆ ತಡವಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಶೈಕ್ಷಣಿಕ ವರ್ಷದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಾರಿ ನಾವು ನೀಟ್ ಫಲಿತಾಂಶಕ್ಕಾಗಿ ಕಾಯುವುದಿಲ್ಲ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶ ಬಂದ ತಕ್ಷಣವೇ ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಇಂಜಿನಿಯರಿಂಗ್ ಮತ್ತು ವೈದ್ಯಕೀಯ (ಮೆಡಿಕಲ್) ಸೀಟುಗಳ ಕೌನ್ಸೆಲಿಂಗ್ ಅನ್ನು ಒಟ್ಟಿಗೆ ಅಥವಾ ಸಮಾನಾಂತರವಾಗಿ ನಡೆಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತಮಗೆ ಲಭ್ಯವಿರುವ ಅತ್ಯುತ್ತಮ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತಿತ್ತು. ಆದರೆ ಈ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆಯಲ್ಲಿ ಉಂಟಾಗಿರುವ ಗೊಂದಲಗಳು ಇಡೀ ಶೈಕ್ಷಣಿಕ ಕ್ಯಾಲೆಂಡರ್ ಅನ್ನೇ ಹಳಿತಪ್ಪಿಸಿವೆ. ಹೀಗಾಗಿ ರಾಜ್ಯ ಸರ್ಕಾರ ಈ ಪರ್ಯಾಯ ಕ್ರಮಕ್ಕೆ ಮುಂದಾಗಿದೆ.

ಜೂನ್‌ನಲ್ಲೇ ಸಿಇಟಿ ಕೌನ್ಸೆಲಿಂಗ್ ಆರಂಭ: ಸಚಿವರ ವಿವರಣೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಸಿ. ಸುಧಾಕರ್, ನೀಟ್ ಗೊಂದಲಗಳಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಬೇಡ. ನಾವು ಜೂನ್ ತಿಂಗಳಿನಲ್ಲೇ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ. ಇಂಜಿನಿಯರಿಂಗ್ ಸೇರಿದಂತೆ ಇನ್ನುಳಿದ ಕೋರ್ಸ್‌ಗಳಿಗೆ ಮೊದಲು ಕೌನ್ಸೆಲಿಂಗ್ ಮುಗಿಸಲಾಗುವುದು ಎಂದರು.

ಒಂದು ವೇಳೆ ಇಂಜಿನಿಯರಿಂಗ್ ಕೌನ್ಸೆಲಿಂಗ್ ಮೊದಲೇ ಮುಗಿದರೆ ಉಂಟಾಗಬಹುದಾದ ತಾಂತ್ರಿಕ ಸಮಸ್ಯೆಯ ಬಗ್ಗೆಯೂ ಅವರು ವಿವರಣೆ ನೀಡಿದರು. ಮೊದಲು ಇಂಜಿನಿಯರಿಂಗ್ ಸೀಟು ಹಂಚಿಕೆಯಾದ ನಂತರ, ನೀಟ್ ಫಲಿತಾಂಶ ಬಂದು ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಂಡಾಗ ಸುಮಾರು 200 ಕ್ಕೂ ಹೆಚ್ಚು ಇಂಜಿನಿಯರಿಂಗ್ ಸೀಟುಗಳು ಖಾಲಿಯಾಗುವ ಸಾಧ್ಯತೆಯಿದೆ. ಈ ರೀತಿ ಖಾಲಿ ಉಳಿಯುವ ಸೀಟುಗಳನ್ನು ಸಿಇಟಿಯ ಎರಡನೇ ಸುತ್ತಿನ (Second Round) ಕೌನ್ಸೆಲಿಂಗ್‌ನಲ್ಲಿ ಸೇರಿಸಲಾಗುವುದು. ಆ ಸುತ್ತಿನಲ್ಲಿ ಅರ್ಹ ವಿದ್ಯಾರ್ಥಿಗಳೆಲ್ಲರಿಗೂ ಭಾಗವಹಿಸಿ, ಆ ಸೀಟುಗಳನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗುತ್ತದೆ."

ಖಾಸಗಿ ಕಾಲೇಜುಗಳ ಒಪ್ಪಿಗೆ; ಶುಲ್ಕ ಮರುಪಾವತಿಯ ಭರವಸೆ

ಈ ಹೊಸ ಕೌನ್ಸೆಲಿಂಗ್ ಮಾದರಿಯ ಬಗ್ಗೆ ಸರ್ಕಾರ ಈಗಾಗಲೇ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದೆ. ಖಾಸಗಿ ಕಾಲೇಜುಗಳ ಒಕ್ಕೂಟ ಈ ಯೋಜನೆಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದೆ. ಕೌನ್ಸೆಲಿಂಗ್ ಮುಂಚಿತವಾಗಿ ನಡೆಯುವುದರಿಂದ ವಿದ್ಯಾರ್ಥಿಗಳು ಸೀಟುಗಳನ್ನು ಅಪ್‌ಗ್ರೇಡ್ ಮಾಡಿಕೊಂಡಾಗ ಅಥವಾ ಸೀಟು ಮುಖಾಂತರ ಬದಲಾವಣೆ ಮಾಡಿಕೊಂಡಾಗ, ಅವರು ಕಾಲೇಜಿಗೆ ಪಾವತಿಸಿರುವ ಯಾವುದೇ ಶುಲ್ಕವನ್ನು ಯಾವುದೇ ಕಡಿತವಿಲ್ಲದೆ ವಿದ್ಯಾರ್ಥಿಗಳಿಗೆ ಹಿಂತಿರುಗಿಸಲಾಗುವುದು ಎಂದು ಕಾಲೇಜುಗಳು ಭರವಸೆ ನೀಡಿವೆ ಎಂದು ಸಚಿವರು ತಿಳಿಸಿದರು.

ಆದರೆ, ಸಿಇಟಿ ಫಲಿತಾಂಶಗಳನ್ನು ಯಾವಾಗ ಪ್ರಕಟಿಸಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ದ್ವಿತೀಯ ಪಿಯುಸಿ ಫಲಿತಾಂಶಗಳು ಈಗಾಗಲೇ ಹೊರಬಿದ್ದಿದ್ದರೂ, ಕೃಷಿ ಕೋಟಾದ ಪ್ರಾಯೋಗಿಕ ಪರೀಕ್ಷೆಯ ಮರುಪರೀಕ್ಷೆಯನ್ನು ನಡೆಸಬೇಕಿರುವುದರಿಂದ, ಈ ಪ್ರಕ್ರಿಯೆ ಮುಗಿದ ತಕ್ಷಣವೇ ಸಿಇಟಿ ಫಲಿತಾಂಶದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರಕ್ಕೆ ಯೋಗ್ಯತೆಯಿಲ್ಲದಿದ್ದರೆ ರಾಜ್ಯಗಳಿಗೆ ಪರೀಕ್ಷೆಯ ಜವಾಬ್ದಾರಿ ನೀಡಲಿ

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಎಂ.ಸಿ. ಸುಧಾಕರ್, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು "ದೊಡ್ಡ ದಂಧೆ" ಎಂದು ಕರೆದರು.

"ದೇಶಾದ್ಯಂತ ಸುಮಾರು 22 ಲಕ್ಷದಷ್ಟು ವಿದ್ಯಾರ್ಥಿಗಳು ಭವಿಷ್ಯದ ಕನಸು ಹೊತ್ತು ನೀಟ್ ಪರೀಕ್ಷೆ ಬರೆದಿದ್ದರು. ಆದರೆ ಇಂದು ಆ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಯಾರು ದೊಡ್ಡ ದೊಡ್ಡ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿದ್ದಾರೋ, ಅವರೇ ಶಾಮೀಲಾಗಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದಾರೆ. ಇಂತಹ ವ್ಯವಸ್ಥಿತ ದಂಧೆಯನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ," ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರಕ್ಕೆ ನೇರ ಸವಾಲು ಹಾಕಿದ ಸಚಿವರು, "ನಾನು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಕಡಾಖಂಡಿತವಾಗಿ ಆಗ್ರಹಿಸುತ್ತೇನೆ; ನೀವು ತಕ್ಷಣ ಸುಪ್ರೀಂಕೋರ್ಟ್‌ಗೆ ಹೋಗಿ, 'ನಮ್ಮ ಕೈಯಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಯೋಗ್ಯತೆಯಿಲ್ಲ, ಹಾಗಾಗಿ ಆಯಾ ರಾಜ್ಯಗಳಿಗೇ ವೈದ್ಯಕೀಯ ಸೀಟುಗಳ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ' ಎಂದು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರಗಳಿಗೆ ಮುಕ್ತ ಅವಕಾಶ ನೀಡಿದರೆ, ತಾವೇ ಅತ್ಯಂತ ಸಮರ್ಥವಾಗಿ ಮತ್ತು ಯಶಸ್ವಿಯಾಗಿ ಮೆಡಿಕಲ್ ಪರೀಕ್ಷೆ ಹಾಗೂ ಸೀಟು ಹಂಚಿಕೆಯನ್ನು ನಿಭಾಯಿಸಬಲ್ಲವು ಎಂದರು.

ಮಾಂಗಲ್ಯ ತೆಗೆಸಿದ ಇತಿಹಾಸ ಇವರದ್ದು

ಹಿಂದಿನ ನೀಟ್ ಪರೀಕ್ಷಾ ಸಂದರ್ಭಗಳಲ್ಲಿ ನಡೆದ ಕಠಿಣ ತಪಾಸಣೆ ಮತ್ತು ವಿವಾದಾತ್ಮಕ ನಿಯಮಗಳನ್ನು ನೆನಪಿಸಿಕೊಂಡ ಸಚಿವರು, ಬಿಗಿ ಭದ್ರತೆಯ ಹೆಸರಿನಲ್ಲಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮಾಂಗಲ್ಯ ಸರವನ್ನು ಕಳಚಿಸಿದ ಘಟನೆಗಳು ಇದೇ ಕೇಂದ್ರ ಸರ್ಕಾರದ ಅವಧಿಯಲ್ಲಿ ನಡೆದಿವೆ ಎಂದು ಕಿಡಿಕಾರಿದರು. ಇಷ್ಟೆಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ಇವರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

ಹೀಗಾಗಿ, ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾದರೆ ಹಳೆಯ ಪದ್ಧತಿಯಂತೆ ರಾಜ್ಯ ಮಟ್ಟದಲ್ಲೇ ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಅವಕಾಶ ಸಿಗಬೇಕು ಎಂದು ಸಚಿವರು ಈ ಸಂದರ್ಭದಲ್ಲಿ ಬಲವಾಗಿ ಒತ್ತಾಯಿಸಿದರು.

PREV
Read more Articles on
click me!

Recommended Stories

ವಿಶ್ವವನ್ನೇ ಬೆರಗುಗೊಳಿಸಿದ ಕೈಬರಹ! ಮುತ್ತು ಪೋಣಿಸಿಟ್ಟಂತೆ ಬರೆದಾಕೆಗೆ ವಿಶ್ವ ದಾಖಲೆಯ ಮತ್ತೊಂದು ಕಿರೀಟ
​‘ಕೆನಡಾ ಡ್ರೀಮ್’ ತಂದಿಟ್ಟ ದುರಂತ: ಹೆತ್ತವರ 15 ವರ್ಷಗಳ ಶ್ರಮ ನೀರಪಾಲು... ಕಾರಣವೇನು?