IISc Suicide Prevention: ಆತ್ಮಹತ್ಯೆ ತಡೆಗೆ ಸೀಲಿಂಗ್​ ಫ್ಯಾನ್​ ತೆರವುಗೊಳಿಸುತ್ತಿದೆ ಭಾರತೀಯ ವಿಜ್ಞಾನ ಸಂಸ್ಥೆ!

By Suvarna NewsFirst Published Dec 18, 2021, 11:45 AM IST
Highlights
  • ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಹಾಸ್ಟೆಲ್​ ಫ್ಯಾನ್​ಗಳನ್ನು ತೆರವುಗೊಳಿಸುತ್ತಿರುವ IISc
  • ಅಧಿಕಾರಿಗಳ ನಿರ್ಧಾರಕ್ಕೆ ವಿದ್ಯಾರ್ಥಿಗಳ ವಿರೋಧ
  • ಸಮೀಕ್ಷೆಯಲ್ಲಿ ಶೇ. 89 ವಿದ್ಯಾರ್ಥಿಗಳ ನಕಾರ
     

ಬೆಂಗಳೂರು: ಕಾಲೇಜು ಕ್ಯಾಂಪಸ್​ನಲ್ಲಿ ಆತ್ಮಹತ್ಯೆ (Suicide) ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science​)ಯು ಹಾಸ್ಟೆಲ್​ ರೂಮ್​ಗಳಲ್ಲಿರುವ ಸೀಲಿಂಗ್​ ಫ್ಯಾನ್​ಗಳನ್ನು (ceiling fans) ತೆರವುಗೊಳಿಸುತ್ತಿದೆ ಎಂದು ವರದಿಯಾಗಿದೆ. IISc ಅಧಿಕಾರಿಗಳ ಈ ನಿರ್ಧಾರವನ್ನು ವಿದ್ಯಾರ್ಥಿಗಳು ವಿರೋಧಿಸಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಸರ್ವೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷದಲ್ಲಿ ಕ್ಯಾಂಪಸ್​ ನಲ್ಲಿ ಆರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. ಮುಂದೆ ಭವಿಷ್ಯದಲ್ಲಿ ಈ ರೀತಿಯ  ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಫ್ಯಾನ್​ಗಳನ್ನು ತೆಗೆಯುವ ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.

ಹಾಸ್ಟೆಲ್​ನಲ್ಲಿ ಸೀಲಿಂಗ್​ ಫ್ಯಾನ್​ಗಳನ್ನು ತೆಗೆದು ಅದರ ಬದಲಾಗಿ ನೇರವಾಗಿ ಗೋಡೆಗೆ ಅಳವಡಿಸಬಹುದಾದಂತಹ ವಾಲ್​ ಮೌಂಟೆಡ್​ ಫ್ಯಾನ್​ಗಳನ್ನು ಹಾಕುತ್ತಿದ್ದಾರೆ ಎಂದು ಅಲ್ಲಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಮಂಡಳಿಯ ಮುಖ್ಯಸ್ಥರಿಗೆ ಈಮೇಲ್​ ಮಾಡಿ ವಿಷಯ ಮುಟ್ಟಿಸಿದ್ದಾರೆ. 15 ದಿನಗಳ ಒಳಗೆ  ಭಾರತೀಯ ವಿಜ್ಞಾನ ಸಂಸ್ಥೆ ಕ್ಯಾಂಪಸ್​ ನಲ್ಲಿರುವ ಎಲ್ಲಾ ಹಾಸ್ಟೆಲ್​ಗಳಲ್ಲಿನ ಸೀಲಿಂಗ್​ ಫ್ಯಾನ್​ಗಳನ್ನು ತೆಗೆದು ವಾಲ್​ ಮೌಂಟೆಡ್​ ಫ್ಯಾನ್​ಗಳನ್ನು (wall mounted fan) ಹಾಕುವುದಾಗಿ ಕಾರ್ಮಿಕರು ಹೇಳಿದ್ದಾರೆಂದು ವಿದ್ಯಾರ್ಥಿಗಳು ಈಮೇಲ್​ನಲ್ಲಿ ಬರೆದಿದ್ದಾರೆ.

ಸೀಲಿಂಗ್​ ಫ್ಯಾನ್​ ತೆಗೆಯುವ ನಿರ್ಧಾರ ಸರಿಯೇ ಎಂಬುದರ ಬಗ್ಗೆ ವಿದ್ಯಾರ್ಥಿಗಳೇ ಸಮೀಕ್ಷೆಯೊಂದನ್ನು ನಡೆಸಿದ್ದು, ಶೇ. 89 ವಿದ್ಯಾರ್ಥಿಗಳು ಹಾಸ್ಟೆಲ್ ಅಧಿಕಾರಿಗಳ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಉಳಿದ ವಿದ್ಯಾರ್ಥಿಗಳು ಈ ನಿರ್ಧಾರದ ಬಗ್ಗೆ ಚಿಂತೆಯೂ ಮಾಡಿಲ್ಲ. ವಿದ್ಯಾರ್ಥಿಗಳು ತಾವು ನಡೆಸಿದ  ಸಮೀಕ್ಷೆಯನ್ನು ಕೂಡ ವಿದ್ಯಾರ್ಥಿ ಮಂಡಳಿಯ ಮುಖ್ಯಸ್ಥರಿಗೆ ಈಮೇಲ್​ ಜತೆಗೆ ಕಳುಹಿಸಿ ಕೊಟ್ಟಿದ್ದಾರೆ. ಫ್ಯಾನ್​ ಬದಲಿಸುವುದರಿಂದ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಶೇ. 89 ವಿದ್ಯಾರ್ಥಿಗಳ ಅಭಿಪ್ರಾಯವೂ ಆಗಿದೆ. ಇದೊಂದು ಮೂರ್ಖ ಕಲ್ಪನೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದರೂ IISc ಅಧಿಕಾರಿಗಳು ಮಾತ್ರ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ.

ಬೆಂಗ​ಳೂ​ರಿನ IISc ದೇಶದ ನಂ.2 ಶಿಕ್ಷಣ ಸಂಸ್ಥೆ!

ಐಐಎಸ್​ಸಿ (IISc) ಮ್ಯಾನೇಜ್​ಮೆಂಟ್​ ತೆಗೆದುಕೊಂಡಿರುವ ಈ ನಿರ್ಧಾರವು ಅವೈಜ್ಞಾನಿಕ ಕ್ರಮವಾಗಿದೆ ಎಂದು ಯುವ ಆಪ್ತ ಸಮಾಲೋಚಕರು ಹಾಗೂ ಸಮುದ್ರ ಫೌಂಡೇಶನ್​ನ ಸಿಇಒ ಭಾರತಿ ಸಿಂಗ್​ ಹೇಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ತಳಮಟ್ಟದಿಂದ ಕೆಲಸ ಮಾಡಿ, ವಿದ್ಯಾರ್ಥಿಗಳಲ್ಲಿರುವ ಆತಂಕ ನಿವಾರಣೆಗೆ ಸಮಾಲೋಚಕರಿಂದ ಪರಿಹಾರ ಒದಗಿಸುವಂತಹ ಕೆಲಸ ಆಗಬೇಕು. ಇಲ್ಲಿ ಓದಿನ ಒತ್ತಡದ ಜತೆಗೆ ಕೆಲವೊಮ್ಮೆ ವೈಯಕ್ತಿಕ ಕಾರಣವೂ ಕೂಡ ಆತ್ಮಹತ್ಯೆಯ ಕಾರಣವಾಗಿರುತ್ತದೆ. ಅದನ್ನು ಬಿಟ್ಟು ಈ ರೀತಿಯ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು IISC ಲಸಿಕೆ ಡೆಲ್ಟಾಗೂ ರಾಮಬಾಣ : ತಜ್ಞರ ಮಹತ್ವದ ಅಧ್ಯಯನ

ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸಲು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಕ್ಷೇಮ ಕೇಂದ್ರವು ಪರಿಣಾಮಕಾರಿಯಾಗಿಲ್ಲ ಮತ್ತು ಅದನ್ನು ಸುಧಾರಿಸಲು ಕರೆಗಳು ಬರುತ್ತಿವೆ ಎಂದು  IISc ವಿದ್ಯಾರ್ಥಿ ಪರಿಷತ್ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ.

IIT Bombay alumni: ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11 ಸಾಧಕರು

ಇತ್ತೀಚೆಗೆ  IISc ನಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.  ಇದನ್ನು ತಡೆಯಲು ಸಂಸ್ಥೆಯು ಹಲವು ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತಂದಿದೆ. ವಸತಿಗೃಹಗಳ ಮಹಡಿ ಹಾಗೂ ಚಾವಣೆ ಬಳಿ ವಿದ್ಯಾರ್ಥಿಗಳು ಒಬ್ಬಂಟ್ಟಿಯಾಗಿ ಹೋಗುವುದನ್ನು ನಿರ್ಬಂದಿಸಲಾಗಿದೆ.  ಇದರಲ್ಲಿ ಕೆಲವನ್ನು ಈಗಾಗಲೇ ವಿದ್ಯಾರ್ಥಿಗಳು ವಿರೋಧಿಸಿದ್ದಾರೆ ಎಂದು ತಿಳಿದುಬಂದಿದೆ.
 

click me!