NET ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಬಳಕೆ ವಿರುದ್ಧ ಗುಡುಗಿದ ಕುಮಾರಸ್ವಾಮಿ

Published : Dec 27, 2021, 04:52 PM ISTUpdated : Dec 27, 2021, 04:54 PM IST
NET ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಬಳಕೆ ವಿರುದ್ಧ ಗುಡುಗಿದ ಕುಮಾರಸ್ವಾಮಿ

ಸಾರಾಂಶ

* NET ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಬಳಕೆ * UGC NET ವಿರುದ್ಧ ಗುಡುಗಿದ ಕುಮಾರಸ್ವಾಮಿ  * #ಹಿಂದಿ ಹೇರಿಕೆ ನಿಲ್ಲಿಸಿ ಹ್ಯಾಷ್‌ಟ್ಯಾಗ್ ಬಳಸಿ  ಸರಣಿ ಟ್ವೀಟ್

ಬೆಂಗಳೂರು, (ಡಿ.27): ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಯುಜಿಸಿ (UGC) ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌ - NET)ಯಲ್ಲಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ (Students) ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಶೇ.90ರಷ್ಟು ಹಿಂದಿ ಭಾಷಾ ಪ್ರಶ್ನೆಗಳನ್ನು ಕೇಳಲಾಗಿದೆ. ಇದಕ್ಕೆ   ಮಾಜಿ ಸಿಎಂ ಎಚ್.​ಡಿ ಕುಮಾರಸ್ವಾಮಿ(HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ UGC–NET ಪರೀಕ್ಷೆಯಲ್ಲಿ ಅವಾಂತರವಾಗಿದ್ದು, ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಹಿಂದಿ ಭಾಷೆಯಲ್ಲಿದ್ದವು. ಹೀಗಾಗಿ, ಎಚ್.​ಡಿ. ಕುಮಾರಸ್ವಾಮಿ ಅವರು #ಹಿಂದಿ ಹೇರಿಕೆ ನಿಲ್ಲಿಸಿ ಹ್ಯಾಷ್‌ಟ್ಯಾಗ್ ಬಳಸಿ  ಸರಣಿ ಟ್ವೀಟ್ ಮಾಡಿದ್ದಾರೆ.

NET Exam Kannada: ಹಲವೆಡೆ ಎಡವಟ್ಟು- ಮರುಪರೀಕ್ಷೆ ಭರವಸೆ

ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ." ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಪರಿಕ್ಷಾ ಸಂಸ್ಥೆಯು ಆಗಿರುವ ಲೋಪ ಸರಿಮಾಡಿ ಪುನಾ ಪರೀಕ್ಷೆ ನಡೆಸಬೇಕು. ಎರಡು ವರ್ಷಗಳಿಂದ ಪರಿಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ ಕ್ರಮ ವಹಿಸಬೇಕು. ಪರೀಕ್ಷೆ ಅವ್ಯವಸ್ಥೆ ಆಗರವಾಗಿತ್ತು ಎನ್ನುವುದು ತಿಳಿದುಬಂದಿದೆ. ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಅವರು ಟ್ವೀಟ್​ನಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ನಮ್ಮವರ ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಡೆಯುತ್ತಲೇ ಇದೆ. ಕನ್ನಡ ಐಚ್ಛಿಕ ಭಾಷಾ ಪಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ,  90 ಹಿಂದಿಯಲ್ಲೇ ಇದ್ದವು. ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯಗಳನ್ನು ಮಾಡಲಾಗುತ್ತಿದೆ ಎಂದು ಗುಡುಗಿದ್ದಾರೆ.

‘ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಕನ್ನಡಿಗರ ಕಡೆಗಣನೆ ಒಳ್ಳೆಯದಲ್ಲ. ನಮ್ಮ ಮೌನ ನಮ್ಮ ದೌರ್ಬಲ್ಯವಲ್ಲ. ಕೂಡಲೇ ಲೋಪ ಸರಿಮಾಡಿ ಪುನಃ ಪರೀಕ್ಷೆ ನಡೆಸಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಮರುಪರೀಕ್ಷೆ ಭರವಸೆ
ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಶೇ.90ರಷ್ಟು ಹಿಂದಿ ಭಾಷಾ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿದ್ಯಾರ್ಥಿಗಳನ್ನು ತೀವ್ರ ಗೊಂದಲಕ್ಕೀಡಾಗಿದ್ದರು. ಇದರಿಂದ  ಬೆಂಗಳೂರು (Bengaluru), ಧಾರವಾಡ, ಕೊಪ್ಪಳ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳ ಪ್ರತಿಭಟನೆ, ಆಕ್ರೋಶದ ಬಳಿಕ ‘ತಾಂತ್ರಿಕ ದೋಷದ’ ಸಮರ್ಥನೆ ನೀಡಿರುವ ಯುಜಿಸಿ ‘ಮರು ಪರೀಕ್ಷೆ ನಡೆಸುವ’ ಭರವಸೆ ನೀಡಿದೆ.

ಪ್ರಮಾದಗಳೇನು?:  
ಕನ್ನಡ ಭಾಷಾ ಪರೀಕ್ಷೆಯಲ್ಲಿ ಭಾಗ 1ರಲ್ಲಿ ಪ್ರಶ್ನೆ ಪತ್ರಿಕೆ ಸರಿಯಾಗಿತ್ತು. ಭಾಗ 2ರಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 10 ಅಂಕಗಳಿಗೆ ಮಾತ್ರ ಕನ್ನಡ (Kannada) ಭಾಷೆಯ ಪ್ರಶ್ನೆಗಳು ಇದ್ದು, ಉಳಿದ ಶೇ.90ರಷ್ಟುಅಂಕಗಳಿಗೆ ಹಿಂದಿ ಭಾಷೆಯ ಪ್ರಶ್ನೆಗಳನ್ನು ಕೇಳಲಾಗಿದೆ.

ಇದನ್ನು ನೋಡಿ ವಿದ್ಯಾರ್ಥಿಗಳು (Students) ಆತಂಕಕ್ಕೀಡಾಗಿ ಕೂಡಲೇ ಪರೀಕ್ಷಾ ಕೇಂದ್ರದಿಂದ ಹೊರಬಂದು ಪ್ರತಿಭಟನೆ ನಡೆಸಿದ್ದಾರೆ. ಈ ಎಡವಟ್ಟು ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತಂದಾಗ ‘ತಾಂತ್ರಿಕ ದೋಷದಿಂದ ಹೀಗೆ ಆಗಿದೆ. ಕೆಲವು ಸಮಯದ ನಂತರ ಸರಿಯಾಗುತ್ತೆ’ ಎಂದು ಹೇಳಿದರು. ನಂತರ ಕೆಲವು ಪರೀಕ್ಷಾರ್ಥಿಗಳಿಗೆ ಸಂಪೂರ್ಣ ಕನ್ನಡ (Kannada) ಪ್ರಶ್ನೆ ಪತ್ರಿಕೆ ಬಂದರೂ ಕೊನೆಯಲ್ಲಿ ತಾಂತ್ರಿಕ ದೋಷದಿಂದ ಸಬ್‌ಮಿಟ್‌ ಆಗಲಿಲ್ಲ.

‘ಕೆಲ ನಿಮಿಷದಲ್ಲಿ ಗೊಂದಲ ಸರಿಹೋಗಲಿದೆ’ ಎಂದ ಅಧಿಕಾರಿಗಳು 3 ಗಂಟೆ ಕಾದು ಕುಳಿತರೂ ಪ್ರಶ್ನೆ ಪತ್ರಿಕೆ ಪೂರೈಕೆ ಮಾಡಲಾಗಿಲ್ಲ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ. ಯುಜಿಸಿಯಿಂದಲೇ (UGC) ಈ ಸಮಸ್ಯೆ ಆಗಿರುವುದರಿಂದ ಮರು ಪರೀಕ್ಷೆಗೆ (Exam) ವಿದ್ಯಾರ್ಥಿಗಳು ಪಟ್ಟು ಹಿಡಿದರು. ಇದಕ್ಕೆ ಮಣಿದ ಯುಜಿಸಿ, ‘ಮುಂದಿನ ದಿನಗಳಲ್ಲಿ ಮರು ಪರೀಕ್ಷೆ ಮಾಡುವುದಾಗಿ ತಮ್ಮ ವೆಬ್‌ಸೈಟ್‌ ನಲ್ಲಿ ಪ್ರಕಟಿಸಿದೆ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಪರೀಕ್ಷಾರ್ಥಿ ಅರ್ಚನಾ, ‘ಇದು ಕನ್ನಡಕ್ಕೆ ಮಾಡಿರುವ ಅವಮಾನ. ನಾವು ಇಂದು ಕನ್ನಡ ಸಾಹಿತ್ಯ ಪರೀಕ್ಷೆ ಬರೆಯಲು ಬಂದಿದ್ದು, ಅದರಲ್ಲಿ ಕನ್ನಡದ 10 ಪ್ರಶ್ನೆಗಳಿದ್ದು ಉಳಿದ ಎಲ್ಲಾ ಪ್ರಶ್ನೆಗಳು ಹಿಂದಿ ಭಾಷೆಯಲ್ಲಿ ಪ್ರಕಟವಾಗಿದ್ದವು. ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ನಡೆದರೂ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ನಡೆಯಬೇಕು’ ಎಂದು ಒತ್ತಾಯಿಸಿದ್ದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ