ಶ್ರೀಕೃಷ್ಣದೇವರಾಯ ವಿವಿಯ ‘ಪರೀಕ್ಷಾ ಅವಧಿ’ಯ ವಿವಾದ

By Kannadaprabha NewsFirst Published Sep 16, 2022, 10:49 AM IST
Highlights

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತೆ ಯಡವಟ್ಟು ಮಾಡಿದೆ. ಪರೀಕ್ಷಾ ಅವಧಿಯನ್ನು ಈ ಮೊದಲಿನಂತೆಯೇ ನಿಗದಿ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ(ಸೆ.16):  ರಾಜ್ಯಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ವಿಶ್ವವಿದ್ಯಾಲಯದಲ್ಲಿ ಏಕತೆ ತರಲು ರಾಜ್ಯ ಸರ್ಕಾರ ಯತ್ನಿಸುತ್ತಿರುವ ಬೆನ್ನಲ್ಲೇ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತೆ ಯಡವಟ್ಟು ಮಾಡಿದೆ. ಪರೀಕ್ಷಾ ಅವಧಿಯನ್ನು ಈ ಮೊದಲಿನಂತೆಯೇ ನಿಗದಿ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಎನ್‌ಇಪಿಯ ಅಡಿಯಲ್ಲಿ ರಾಜ್ಯಾದ್ಯಂತ ಪದವಿ ಪರೀಕ್ಷೆಯಲ್ಲಿ 100 ಅಂಕಗಳಲ್ಲಿ 40 ಅಂಕಗಳನ್ನು ಇಂಟರ್ನಲ್‌ (ಆಂತರಿಕ) ನೀಡುತ್ತಿದ್ದು, ಕೇವಲ 60 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಅದರಂತೆ ರಾಜ್ಯಾದ್ಯಂತ ಎಲ್ಲ ವಿವಿಗಳಲ್ಲಿ ಪರೀಕ್ಷಾ ಅವಧಿಯನ್ನು ಎನ್‌ಇಪಿ ಅನುಸಾರ ಕೇವಲ 2 ಗಂಟೆ ನಿಗದಿ ಮಾಡಲಾಗಿದೆ.

ಆದರೆ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಾತ್ರ ಪರೀಕ್ಷಾ ಸಮಯವನ್ನು 3 ಗಂಟೆಗೆ ನಿಗದಿಗೊಳಿಸಲಾಗಿದೆ. ಕೇವಲ 60 ಅಂಕಗಳಿಗೆ 3 ಗಂಟೆಯ ಅಗತ್ಯ ಇಲ್ಲವಾದರೂ ವಿಶ್ವವಿದ್ಯಾಲಯ ನಡೆಯು ತೀವ್ರ ಟೀಕೆಗೆ ಗುರಿಯಾಗಿದೆ.

ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್‌ ಶೀಘ್ರ: ರಾಘವೇಶ್ವರ ಶ್ರೀ

ಸ್ಪರ್ಧಾತ್ಮಕ ಪರೀಕ್ಷೆಗೆ ಸಮಸ್ಯೆ:

ಕೇವಲ 60 ಅಂಕಗಳಿಗೆ ಇಷ್ಟೊಂದು ಸಮಯ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಎದುರಿಸುವ ಸಾಮರ್ಥ್ಯದಲ್ಲಿ ಏರುಪೇರಾಗುತ್ತದೆ. 100 ಅಂಕ ಇದ್ದಾಗಲೇ 3 ಗಂಟೆ ನಿಗದಿ ಮಾಡಲಾಗುತ್ತಿತ್ತು. ಈಗ ಕೇವಲ 60 ಅಂಕಗಳಿಗೆ ಮೂರು ಗಂಟೆ ನಿಗದಿ ಮಾಡಿರುವುದು ಅಪಹಾಸ್ಯಕ್ಕೆ ಕಾರಣವಾಗಿದೆ.

ಸೆ. 26ರಿಂದ ಪ್ರಾರಂಭ:

ಪದವಿ ಪರೀಕ್ಷೆಗಳು ಸೆ. 26ರಿಂದ ಪ್ರಾರಂಭವಾಗಲಿವೆ. ಈಗಾಗಲೇ ಪರೀಕ್ಷಾ ವೇಳಾಪಟ್ಟಿನಿಗದಿ ಮಾಡಲಾಗಿದೆ. ರಾಜ್ಯದ ಉಳಿದ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 10ರಿಂದ 12 ಗಂಟೆಯವರೆಗೂ ಪರೀಕ್ಷಾ ಅವಧಿ ನಿಗದಿ ಮಾಡಿದ್ದರೆ ಬಳ್ಳಾರಿ ವಿವಿಯಲ್ಲಿ ಮಾತ್ರ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೂ ಪರೀಕ್ಷಾ ಸಮಯ ನಿಗದಿಗೊಳಿಸಲಾಗಿದೆ. ರಾಜ್ಯಾದ್ಯಂತ ಎಲ್ಲ ವಿವಿಯಲ್ಲಿಯೇ ಬೇರೆ, ಈ ವಿಶ್ವವಿದ್ಯಾಲಯದಲ್ಲಿಯೇ ಬೇರೆ ಎಂದರೆ ಏನರ್ಥ?

ರಾಜ್ಯದಲ್ಲಿ 10 ನಾರಾಯಣಗುರು ವಸತಿ ಶಾಲೆ ಆರಂಭ ಪ್ರಸ್ತಾಪ

ರಾಜ್ಯಾದ್ಯಂತ ಇತರ ವಿವಿಯಲ್ಲಿ ಪರೀಕ್ಷಾ ಸಮಯವನ್ನು ಅಂಕ ಕಡಿತವಾಗಿರುವ ಹಿನ್ನೆಲೆ ಮೂರು ಗಂಟೆಯಿಂದ 2 ಗಂಟೆಗೆ ಕಡಿತ ಮಾಡಲಾಗಿದೆ. ನಮ್ಮ ವಿವಿಯಲ್ಲಿಯೂ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಅಂತ ಶ್ರೀಕೃಷ್ಣದೇವರಾಯ ವಿವಿ ಸಿಂಡಿಕೇಟ್‌ ಸದಸ್ಯ ಡಾ. ಬಸವರಾಜ ಪೂಜಾರ ತಿಳಿಸಿದ್ದಾರೆ. 

ಪರೀಕ್ಷಾ ಸಮಯವನ್ನು ಅನಗತ್ಯವಾಗಿ ಹೆಚ್ಚು ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಆಲಸ್ಯ ಬೆಳೆಯುತ್ತದೆ. ಅವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುವಾಗ ಸಮಸ್ಯೆ ಎದುರಿಸುತ್ತಾರೆ. ಇದನ್ನು ಸರಿಪಡಿಸುವ ಅಗತ್ಯವಿದೆ ಅಂತ ಪ್ರೊ. ಶಂಕರಯ್ಯ ಅಬ್ಬಿಗೇರಿ ಹೇಳಿದ್ದಾರೆ. 
 

click me!