ಕರ್ನಾಟಕದಲ್ಲಿ ಏಳು ಡಿಜಿಟಲ್‌ ವಿವಿ ಸ್ಥಾಪನೆಗೆ ನಿರ್ಧಾರ: ಸಿಎಂ ಬೊಮ್ಮಾಯಿ

By Kannadaprabha NewsFirst Published Jun 12, 2022, 12:14 PM IST
Highlights

*  ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂತಹ ವಿಶ್ವವಿದ್ಯಾಲಯಗಳನ್ನು ತೆರೆಯಬೇಕಿದೆ
*  ರಾಜ್ಯದಲ್ಲಿನ ತಾಂತ್ರಿಕ ಜ್ಞಾನ ಹಾಗೂ ಕೌಶಲ ಸಾಮರ್ಥ್ಯ ಹೆಚ್ಚಾಗಿದೆ
*  ರಾಜ್ಯದ ಏಳು ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೆ

ಬೆಳಗಾವಿ(ಜೂ.12):  ರಾಜ್ಯದಲ್ಲಿ ಏಳು ಡಿಜಿಟಲ್‌ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಸಭೆಯಲ್ಲಿಅವರು ಮಾತನಾಡಿದರು.

ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂತಹ ವಿಶ್ವವಿದ್ಯಾಲಯಗಳನ್ನು ತೆರೆಯಬೇಕಿದೆ. ರಾಜ್ಯದಲ್ಲಿನ ತಾಂತ್ರಿಕ ಜ್ಞಾನ ಹಾಗೂ ಕೌಶಲ ಸಾಮರ್ಥ್ಯ ಹೆಚ್ಚಾಗಿದೆ. ಇದನ್ನು ಬಳಸಿಕೊಂಡು ವಿಶಿಷ್ಟರೀತಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರಾಜ್ಯದ ಏಳು ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೇಗೇರಿಸಲಾಗುವುದು. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಎಡವಟ್ಟು: ಹುತಾತ್ಮ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಪಠ್ಯಕ್ಕೆ ಕೊಕ್

ಯಾವ ಸೊಸೈಟಿಯಲ್ಲಿ ಶಿಕ್ಷಣ , ಜ್ಞಾನ ಇರುತ್ತದೆಯೋ ಅದರಿಂದ ಒಂದು ಸಂಸ್ಕಾರಭರಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಒಂದು ಕಾಲದಲ್ಲಿ ಭೂಮಿ ಜಾಸ್ತಿ ಇದ್ದವರು ಜಗತ್ತು ಆಳುತ್ತಿದ್ದ. 21ನೇ ಶತಮಾನ ಭೂಮಿ ಇದ್ದವರದ್ದಲ್ಲ. ದುಡ್ಡಿದ್ದವರದ್ದು ಅಲ್ಲ. ಜ್ಞಾನ ಇದ್ದವರದ್ದಾಗಿದೆ. ಮೊದಲು ಬೇರೆ ಬೇರೆ ದೇಶದ ಪ್ರಧಾನಿಗಳು ಭಾರತಕ್ಕೆ ಬಂದರೆ ದೆಹಲಿಗೆ ಹೋಗುತ್ತಿದ್ದರು. ಈಗ ಬೆಂಗಳೂರಿಗೆ ಬರುತ್ತಿದ್ದಾರೆ. ಕೆಎಲ್‌ಇ ಸೊಸೈಟಿ ಜ್ಞಾನಮಂದಿರದಲ್ಲಿ ಕೆಲಸ ಮಾಡಲು ಸಿಕ್ಕದ ಭಾಗ್ಯ ನೀವೇ ಧನ್ಯರು ಎಂದರು.

ಕೆಎಲ್‌ಇ ಸಂಸ್ಥೆಗೆ ದೊಡ್ಡ ಇತಿಹಾಸವಿದೆ. ಸಾವಿರಾರು ಜನ ಗುರುಗಳು, ದಾನಿಗಳು ಕೂಡಿ ಕಟ್ಟಿದ್ದಾರೆ. ಕೆಎಲ್‌ಇ ಅತ್ಯಂತ ಪ್ರಜಾಪ್ರಭುತ್ವ ಇರುವ ಶಿಕ್ಷಣ ಸಂಸ್ಥೆಯಾಗಿದೆ. ಪ್ರಭಾಕರ ಕೋರೆ ಸ್ಥಾನ ಅತ್ಯಂತ ಮಹತ್ವದ್ದು. ಅವರು ಎಲೆಕ್ಟೆಡ್‌ ಚೇರಮನ್‌. ನಾಟ್‌ ಅಪಾಯಿಂಟೆಡ್‌ ಚೇರಮನ್‌. ಪ್ರಭಾಕರ ಕೋರೆ ಅಣ್ಣ ಸಿ.ಬಿ.ಕೋರೆ ತೀರಿ ಹೋದಾಗ ಪ್ರಭಾಕರ ಕೋರೆ ಅಧ್ಯಕ್ಷ ಮಾಡಲು ಬಹಳ ಚರ್ಚೆ ಜಿಜ್ಞಾಸೆ ನಡೆದಿತ್ತು. 1986ರಲ್ಲಿ ನಾವು ಎಲ್ಲಾ ರೀತಿಯ ಬೆಂಬಲ ನೀಡಿದ್ದೇವೆ. ಅಂದಿನಿಂದ ಇಂದಿನವರೆಗೂ ಕೆಎಲ್‌ಇ ಸಂಸ್ಥೆ ಅಭಿವೃದ್ಧಿ ಆಗಿದೆ. ಪ್ರಭಾಕರ ಕೋರೆ ಅಧಿಕಾರ ಸ್ವೀಕರಿಸಿದಾಗ 34 ಇದ್ದ ಶಿಕ್ಷಣ ಸಂಸ್ಥೆ ಈಗ 272 ಶಿಕ್ಷಣ ಸಂಸ್ಥೆಗಳು ಇವೆ. ದೇಶದ ಗಡಿದಾಟಿ ಮೊರೆಷಿಯಸ್‌, ದುಬೈ ಸೇರಿ ಎಲ್ಲ ಕಡೆ ಸಂಸ್ಥೆ ಮಾಡಿದ್ದಾರೆ. ಇದು ಲೀಡರ್‌ಶಿಪ್‌ ಇನ್‌ ಎಜ್ಯುಕೇಶನ್‌ ತೋರಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಪ್ರಭಾಕರ ಕೋರೆ ಅವರನ್ನು ಹೊಗಳಿದರು.

ದಿ ಗ್ರೌಥ್‌ ಆಫ್‌ ಎಜ್ಯುಕೇಶನ್‌ ಸೊಸೈಟಿ ಇನ್‌ ಡೆಮಾಕ್ರಟಿಕ್‌ ವೇ ಇದರ ಮೇಲೆ ಪಿಎಚ್‌ಡಿ ಮಾಡಬೇಕು. ಸಪ್ತರ್ಷಿಗಳ ಕನಸು ನನಸು ಮಾಡಿದ ಪ್ರಭಾಕರ ಕೋರೆ ಬಗ್ಗೆ ಪಿಎಚ್‌ಡಿ ಮಾಡಬೇಕು. ಮುಂದಿನ ಪೀಳಿಗೆಗೆ ಈ ಸಂಸ್ಥೆ ಹೇಗೆ ಕಟ್ಟಿದ್ದರು ಹೇಗೆ ಬೆಳೆಯಿತು ತಿಳಿಯಬೇಕು. ಕೆಎಲ್‌ಇ ಸಂಸ್ಥೆ ಇರದಿದ್ದರೆ ಕೆಂಪು ಅಂಗಿ ಧೋತರ ಉಟ್ಟು ಹೊಲದಲ್ಲಿ ಇರುತ್ತಿದ್ದವೇನೂ. ಸಾರ್ವಜನಿಕರ ಬದುಕಿನಲ್ಲಿ ಅವರು ಮಾಡಿದ ಸೇವೆ ಇತರ ಕ್ಷೇತ್ರದಲ್ಲಿ ಅದ್ಭುತವಾಗಿದೆ. ನೀವು ರಾಜಕಾರಣಕ್ಕೆ ಬರಬೇಡಿ ನಮಗೆ ಸ್ವಾಮಿ ಆಗಿ, ನಮ್ಮದೇನೂ ಸಮಸ್ಯೆ ಇದ್ದರೆ ನಿಮ್ಮ ಹತ್ತಿರ ಬರುತ್ತೇವೆ. ನೀವು ಹಿರಿಯ ಸ್ವಾಮಿ ಆಗಿ ಎಂದು ಹಾಸ್ಯಚಟಾಕಿ ಹಾರಿಸಿದರು.

ಹಿಜಾಬ್‌ ಗದ್ದಲದ ಕಾಲೇಜಲ್ಲಿ ಈಗ ಸಾವರ್ಕರ್‌ ಫೋಟೋ ವಿವಾದ..!

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ,ಕೆಎಲ್‌ಇ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕ ಸಿಎಂ ಆಗಿದ್ದಾರೆ. ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಇಬ್ಬರೂ ಕೆಎಲ್‌ಇ ವಿದ್ಯಾರ್ಥಿಗಳು. ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಕೆಎಲ್‌ಇ ಸಂಸ್ಥೆ. ಬೊಮ್ಮಾಯಿ ತಂದೆ ನಮ್ಮ ಕೆಎಲ್‌ಇ ಸೊಸೈಟಿ ಸದಸ್ಯರಿದ್ದರು. ಬೆಳಗಾವಿಯಲ್ಲಿ 2830 ಕೆಎಲ್‌ಇ ಶಿಕ್ಷಕರ ಮತಗಳಿವೆ. ಲಕ್ಷ್ಮಣ ಸವದಿ, ಉಮೇಶ ಕತ್ತಿ ಸೇರಿ ಆಡಳಿತ ಪಕ್ಷದ ಹಲವರು ಕೆಎಲ್‌ಇ ವಿದ್ಯಾರ್ಥಿಗಳು. ವಿರೋಧ ಪಕ್ಷದ ಹಲವು ನಾಯಕರು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಕೂಡ ಕೆಎಲ್‌ಇ ವಿದ್ಯಾರ್ಥಿ. ಬೆಳಗಾವಿ ಜಿಎ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫೇಲ್‌ ಆಗಿದ್ದಾನೆ. ನಮ್ಮ ಸಂಸ್ಥೆಗೆ ಯಾರೂ ಸಹಾಯಮಾಡುತ್ತಾರೋ ಅವರಿಗೆ ನಾವು ಬೆಂಬಲಿಸುತ್ತೇವೆ. ಹುಬ್ಬಳ್ಳಿಯಲ್ಲಿ 3300 ನಮ್ಮ ಕೆಎಲ್‌ಇ ಶಿಕ್ಷಕರು ಮತದಾರರಿದ್ದಾರೆ. ಎರಡು ವರ್ಷ ಫೀಸ್‌ ವಸೂಲಿ ಆಗದಿದ್ದರೂ ಯಾರ ವೇತನ ಕಡಿಮೆ ಮಾಡಿಲ್ಲ .ನಮಗ ದುಡ್ಡು ಎಲ್ಲಿ ಬರುತ್ತದೆ ಗೊತ್ತಿಲ್ಲ. ಈ ಸಂಸ್ಥೆ ತಿಜೋರಿ ಎಂದು ಖಾಲಿ ಬಿದ್ದಿಲ್ಲ ಎಂದು ಹೇಳಿದರು.
ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಸಂಸದೆ ಮಂಗಲ ಅಂಗಡಿ, ರವಿಕುಮಾರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮೊದಲಾದವರು ಉಪಸ್ಥಿತರಿದ್ದರು.

click me!