ಚಳ್ಳಕೆರೆಯಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ; ಜಿಲ್ಲೆಗೆ ಸಚಿವರಿದ್ದೂ ಏನು ಪ್ರಯೋಜನ?

By Kannadaprabha NewsFirst Published Jan 4, 2023, 9:57 AM IST
Highlights

ಚಿತ್ರದುರ್ಗ ಜಿಲ್ಲೆಯ ಆಟೋಗಳು ನಿಯಮಬಾಹಿರವಾಗಿ ಮಿತಿ ಮೀರಿ ಪ್ರಯಾಣಿಕರ ಕರೆದೊಯ್ಯುವುದು, ಹೆಚ್ಚುವರಿ ಮೊತ್ತ ವಸೂಲು ಮಾಡುವುದು ಒಂದೆಡೆಯಾದರೆ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಅದೇ ಆಟೋಗಳಲ್ಲಿ ಕುರಿಗಳಂತೆ ತುಂಬಿ ಅಪಾಯಕಾರಿ ಪ್ರಯಾಣ ಮಾಡಿಸುವುದಕ್ಕೆ ಚಳ್ಳಕೆರೆ ಸಾಕ್ಷಿಯಾಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಜ.4) : ಚಿತ್ರದುರ್ಗ ಜಿಲ್ಲೆಯ ಆಟೋಗಳು ನಿಯಮಬಾಹಿರವಾಗಿ ಮಿತಿ ಮೀರಿ ಪ್ರಯಾಣಿಕರ ಕರೆದೊಯ್ಯುವುದು, ಹೆಚ್ಚುವರಿ ಮೊತ್ತ ವಸೂಲು ಮಾಡುವುದು ಒಂದೆಡೆಯಾದರೆ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಅದೇ ಆಟೋಗಳಲ್ಲಿ ಕುರಿಗಳಂತೆ ತುಂಬಿ ಅಪಾಯಕಾರಿ ಪ್ರಯಾಣ ಮಾಡಿಸುವುದಕ್ಕೆ ಚಳ್ಳಕೆರೆ ಸಾಕ್ಷಿಯಾಗಿದೆ.

ಚಿತ್ರದುರ್ಗ(Chitradurga) ಜಿಲ್ಲೆಯಲ್ಲಿ ಪರಿಶಿಷ್ಟಹಾಗೂ ಹಿಂದುಳಿದ ಸಮುದಾಯಗಳೇ ಹೆಚ್ಚು ಇರುವುದರಿಂದ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲಾಗಿದೆ. ಹಾಸ್ಟೆಲ್‌ ನಿರ್ಮಾಣಕ್ಕೆ ನಗರ ಪ್ರದೇಶದಲ್ಲಿ ಸರ್ಕಾರಿ ಜಾಗ ಸಿಗುವುದು ದುರ್ಲಬ. ನಗರ ಹೊರ ಭಾಗದಲ್ಲಿ ಅಂದರೆ ಮೂರರಿಂದ ನಾಲ್ಕು ಕಿಮೀ ದೂರದಲ್ಲಿ ಸರ್ಕಾರಿ ಭೂಮಿ ದೊರಯ ಲ್ಲಿದ್ದು ಅಲ್ಲಿಯೇ ಹಾಸ್ಟೆಲ್‌ಗಳ ನಿರ್ಮಿಸಿ ಶೈಕ್ಷಣಿಕ ವಾತಾವರಣ ಕಲ್ಪಿಸಲಾಗುತ್ತದೆ. ಶಾಲಾ, ಕಾಲೇಜಿಗೆ ಮೂರರಿಂದ ನಾಲ್ಕು ಕಿಮೀ ದೂರ ಹಾಸ್ಟೆಲ್‌ ನಿರ್ಮಿಸಿದರೆ ವಿದ್ಯಾರ್ಥಿಗಳು ಹೋಗಿ ಬರುವುದಾದರೂ ಎಂತು ಎಂಬ ಬಗ್ಗೆ ಅಧಿಕಾರಿಗಳು ಆಲೋಚಿಸುವುದಿಲ್ಲ.

Chitradurga: ಚಿರತೆ ಪ್ರತ್ಯಕ್ಷ, ಕುರುಡಿಹಳ್ಳಿ ಗ್ರಾಮದ ಜನರಲ್ಲಿ ಮೂಡಿದ ಆತಂಕ

ಚಳ್ಳಕೆರೆ(Challakere) ಪಟ್ಟಣದಿಂದ ತುಮಕೂರು ಜಿಲ್ಲೆಯ ಪಾವಗಡಕ್ಕೆ ಹೋಗುವ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ(KSRTC dipo) ಇದ್ದು ಅದರ ಪಕ್ಕದಲ್ಲಿಯೇ ಹಿಂದುಳಿದ ವರ್ಗಗಳ ಇಲಾಖೆಯ ಆರು ದೇವರಾಜ ಅರಸು ಹಾಸ್ಟೆಲ್‌ಗಳಿವೆ. ಹಿಂಭಾಗವೇ ಪರಿಶಿಷ್ಟಜಾತಿ ವಿದ್ಯಾರ್ಥಿ ನಿಲಯವಿದೆ. ಸಾಲದೆಂಬಂತೆ ಆದರ್ಶ, ಮುರಾರ್ಜಿ ಶಾಲೆ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಎಲ್ಲವೂ ಇದೆ. ನಿತ್ಯ ಕನಿಷ್ಠವೆಂದರೂ ಎರಡರಿಂದ ಮೂರು ಸಾವಿರ ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಗಾಗಿ ಪಾವಗಡ ರಸ್ತೆ ತುಳಿಯುತ್ತಾರೆ. ಪ್ರತಿ ವಿದ್ಯಾರ್ಥಿ ಆರರಿಂದ ಎಂಟು(ಎರಡೂ ಕಡೆ ಸೇರಿ)ಕಿಮೀ ನಷ್ಟುಹಾದಿ ಸವೆಸಬೇಕು. ವಿದ್ಯಾರ್ಥಿಗಳು ನಡೆದು ಹೋಗುವುದು ಪ್ರಯಾಸ . ಸಿಟಿ ಬಸ್ಸುಗಳಾಗಲೀ, ಸಾರಿಗೆ ಸಂಸ್ಥೆ ಬಸ್ಸುಗಳಾಗಲೀ ಈ ಹಾದಿಯಲ್ಲಿ ಓಡಾಡುವುದಿಲ್ಲ. ಹಾಗಾಗಿ ಆಟೋ ಅವಲಂಬನೆ ಅನಿವಾರ್ಯವಾಗಿದೆ.

ಹಾಸ್ಟೆಲ್‌ ವಿದ್ಯಾರ್ಥಿಗಳ ಅನಿವಾರ್ಯ ಪರಿಸ್ಥಿತಿ ಗಮನಿಸಿರುವ ಆಟೋ ಚಾಲಕರು ಹದಿನೈದರಿಂದ ಇಪ್ಪತ್ತು ಮಂದಿಯನ್ನು ಕರೆದೊಯ್ಯುತ್ತಾರೆ. ಬ್ಯಾಗ್‌ಗಳ ಆಟೋ ಮೇಲಿನ ಕ್ಯಾರಿಯ ರ್‌ನಲ್ಲಿಡುವ ವಿದ್ಯಾರ್ಥಿಗಳು ಕುಳಿತು, ನಿಂತು ಅಪಾಯಕಾರಿ ರೀತಿಯಲ್ಲಿ ಪ್ರಯಾಣ ನಡೆಸುತ್ತಾರೆ. ಚಾಲಕನ ಅಕ್ಕ, ಪಕ್ಕ ನಾಲ್ಕು ಮಂದಿ ವಿದ್ಯಾರ್ಥಿಗಳು ಇರುತ್ತಾರೆ. ತುಸು ಏಮಾರಿ ಆಟೋ ಏನಾದರೂ ಚಾಲಕನ ನಿಯಂತ್ರಣ ತಪ್ಪಿದರೆ ಆಗುವ ಅನಾಹುತ ಊಹಿಸಲು ಕಷ್ಟವಾಗುತ್ತದೆ. ದುಬಾರಿ ಹಣ ತೆತ್ತು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಸ್ಪೇಸ್‌ಶಿಪ್‌ ಇಳಿಸಲು ಇಸ್ರೋ ಸಿದ್ಧತೆ!

ಸಚಿವರಿದ್ದು ಪ್ರಯೋಜನವೇನು ?

ಹಾಸ್ಟೆಲ್‌ ವಿದ್ಯಾರ್ಥಿಗಳು ಅಪಾಯಕಾರಿ ಪ್ರಯಾಣ ಮಾಡಿದರೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಸಾರಿಗೆ ಸಚಿವ ಶ್ರೀರಾಮುಲು(B Sriramulu) ಮೊಳಕಾಲ್ಮುರು ವಿಧಾನಸಭೆ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಹೊಳಲ್ಕೆರೆ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಶಾಲೆ ಆರಂಭ ಹಾಗೂ ಅಂತ್ಯದ ವೇಳೆ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆಂದು ನಾಲ್ಕಾರು ಬಸ್ಸುಗಳ ಓಡಿಸಬಹುದು. ಇಲ್ಲವೇ ಚಿತ್ರದುರ್ಗದಿಂದ ಚಳ್ಳಕೆರೆಗೆ ಬರುವ ಕೆಎಸ್ಸಾರ್ಟಿಸಿ ಬಸ್ಸುಗಳು ಡಿಪೋ ತನಕ ಓಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಂತಹ ಕಾಳಜಿಗಳು ವ್ಯಕ್ತವಾಗಿಲ್ಲ. ಶ್ರೀರಾಮಲು, ಚಂದ್ರಪ್ಪ ಜಿಲ್ಲೆಯಲ್ಲಿ ಇದ್ದರೇನು ಬಂತು ಭಾಗ್ಯ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

click me!