ಅತಿಥಿ ಬೋಧಕರ ಸೇವೆ ಕಾಯಂ ಮಾಡಿ: ಸಿಎಂಗೆ ಹೊರಟ್ಟಿ ಪತ್ರ

Kannadaprabha News   | Asianet News
Published : Jun 20, 2021, 01:39 PM IST
ಅತಿಥಿ ಬೋಧಕರ ಸೇವೆ ಕಾಯಂ ಮಾಡಿ: ಸಿಎಂಗೆ ಹೊರಟ್ಟಿ ಪತ್ರ

ಸಾರಾಂಶ

*  ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಅತಿಥಿ ಬೋಧಕರು  * ವಯೋಮಿತಿ ಮೀರುತ್ತಿರುವುದರಿಂದ ಅಭದ್ರತೆಯಲ್ಲಿ ಸಿಲುಕಿರುವ ಹಲವರು * ಮಾನವೀಯತೆಯ ಆಧಾರದ ಮೇಲೆ ಅತಿಥಿ ಬೋಧಕನ್ನ ಕಾಯಂಗೊಳಿಸಬೇಕು 

ಬೆಂಗಳೂರು(ಜೂ.20):  ರಾಜ್ಯದ 415 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅರ್ಹ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವಂತೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಭಾಪತಿ, ಅತಿ ಕಡಿಮೆ ವೇತನ ಹಾಗೂ ಸೇವಾ ಭದ್ರತೆ ಇಲ್ಲದೆ ದುಡಿಯುತ್ತಿರುವ ಅವರೆಲ್ಲರೂ ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದ ಸಂಕಷ್ಟದಲ್ಲಿದ್ದಾರೆ. ಕೋವಿಡ್‌ನಿಂದಾಗಿ ಕಾಲೇಜುಗಳು ಪೂರ್ಣ ಆರಂಭವಾಗದ ಕಾರಣ ಅತಿಥಿ ಉಪನ್ಯಾಸಕರಿಗೆ ಪೂರ್ಣಾವಧಿ ಕಾರ್ಯಭಾರವೂ ಸಿಗದೆ ಸಿಗುತ್ತಿದ್ದ ಕಡಿಮೆ ವೇತನಕ್ಕೂ ಕತ್ತರಿ ಬಿದ್ದಿದೆ. ಹತ್ತಾರು ವರ್ಷ ಕೆಲಸ ಮಾಡಿದ ಹಲವರ ವಯೋಮಿತಿ ಮೀರುತ್ತಿರುವುದರಿಂದ ಅಭದ್ರತೆಯಲ್ಲಿ ಸಿಲುಕಿದ್ದಾರೆ. ಇದೇ ನೋವಿನಿಂದ ಕೆಲ ಅತಿಥಿ ಶಿಕ್ಷಕರು ಆತ್ಮಹತ್ಯೆಗೂ ಶರಣಾದ ಪ್ರಕರಣಗಳಿವೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿ ಪ್ರಕಾರವೇ ಅತಿಥಿ ಉಪನ್ಯಾಸಕರು ವಿದ್ಯಾರ್ಹತೆ ಹೊಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅವರೆಲ್ಲರ ಸೇವೆಯನ್ನು ಸರ್ಕಾರ ಕಾಯಂಗೊಳಿಸಬೇಕೆಂದು ಕೋರಿದ್ದಾರೆ.

ಶಾಲೆ ಪುನಾರಂಭ ಯಾವಾಗ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ

ಅಲ್ಲದೆ, ಪದವಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ ಸ್ಟಾಪ್‌ ಗ್ಯಾಪ್‌, ಗುತ್ತಿಗೆ ಆಧಾರಿತ, ಅರೆಕಾಲಿಕ ಉಪನ್ಯಾಸಕರುಗಳನ್ನೂ ಕೂಡ ಸರ್ಕಾರ ಮಾನವೀಯತೆಯ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಸೇವೆ ಕಾಯಂಗೊಳಿಸಬೇಕು. ಅಂತಹವರನ್ನು 1982, 1992, 1996, 2003ರಲ್ಲಿ ಕಾಯಂ ಮಾಡಿರುವ ಉದಾಹರಣೆಗಳಿವೆ. ಅದೇ ಮಾದರಿಯನ್ನು ಅನುಸರಿಸಿ ಈಗಲೂ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಯನ್ನು ಕಾಯಂಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
 

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ