UPSC ಪರೀಕ್ಷೆಯನ್ನು ಎಂಜಿನಿಯರ್‌ಗಳೇ ಯಾಕೆ ಹೆಚ್ಚು ಪಾಸು ಮಾಡೋದು?

By Suvarna NewsFirst Published Nov 12, 2021, 1:14 PM IST
Highlights

UPSC ಪರೀಕ್ಷೆಗಳನ್ನು ಎದುರಿಸುವುದು ಸುಲಭದ ಮಾತಲ್ಲ. ತೀರಾ ಇತ್ತೀಚಿನವರೆಗೆ ಮಾನವಿಕ, ಆರ್ಟ್ಸ್ ಪದವೀಧರರ ಈ ಪರೀಕ್ಷೆಯನ್ನು ಸುಲಭವಾಗಿ ಪಾಸು ಮಾಡುತ್ತಾರೆಂಬ ನಂಬಿಕೆ ಇತ್ತು. ಆದರೆ, ಇತ್ತೀಚಿನ ಕೆಲವು ವರ್ಷಗಳ ಯುಪಿಎಸ್‌ಸಿ ಫಲಿತಾಂಶವನ್ನು ಗಮನಿಸಿದರೆ, ಎಂಜಿನಿಯರಿಂಗ್ ಪದವೀಧರರು ಸುಲಭವಾಗಿ ಈ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸು ಮಾಡುತ್ತಿದ್ದಾರೆ. ಇದಕ್ಕೆ ಏನು ಕಾರಣ?

ಇತ್ತೀಚೆಗೆ ವಿದ್ಯಾವಂತ ಯುವ ಜನಾಂಗದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಯಾಗಬೇಕೆಂಬ ಆಸೆ ಜಾಸ್ತಿ ಆಗಿರೋದನ್ನ ಗಮನಿಸಿರ್ತೀರಿ. ಯಾವುದೇ ಕೋರ್ಸ್ ಮಾಡಿರಲಿ, ಸಾಮಾನ್ಯ ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಓದಿದ್ರೂ ತಮ್ಮದೇ ಕ್ಷೇತ್ರದಲ್ಲಿ ಕೆಲಸ ಮಾಡಲು, ಮುಂದುವರಿಯಲು ಯುವಕರು ಇಷ್ಟಪಡುತ್ತಿಲ್ಲ. ಬದಲಾಗಿ ಯುಪಿಎಸ್ಸಿ ಪರೀಕ್ಷೆ ಪಡೆದು ದೇಶದ ಅತ್ಯುನ್ನತ ಹುದ್ದೆಗಳಾದ ಐಎಎಸ್ (IAS), ಐಪಿಎಸ್ (IPS), ಐಆರ್ಎಸ್ (IRS), ಐಎಫ್ಎಸ್ (IFS) ಅಧಿಕಾರಿಗಳಾಗುತ್ತಿದ್ದಾರೆ. ದಶಕಗಳಿಂದ ಕಲಾ ಅಥವಾ ಆರ್ಟ್ಸ್ ವಿಭಾಗದ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಬಹಳ ಸುಲಭ ಅನ್ನೋ ಮಾತು ಇದೆ. ಆದ್ರೀಗ ಆ ಮಾತನ್ನ ಇತರೆ ಟೆಕ್ನಿಕಲ್ ಕೋರ್ಸ್ ಪದವೀಧರರು ಸುಳ್ಳಾಗಿಸಿದ್ದಾರೆ. ಇಂಟರೆಸ್ಟಿಂಗ್ ವಿಷಯ ಅಂದ್ರೆ, ಕೈತುಂಬ ಸಂಬಳ ಬರುವ ಸಾಫ್ಟ್ವೇರ್ ಕ್ಷೇತ್ರವನ್ನು ಬಿಟ್ಟು ಇಂಜಿನಿಯರಿಂಗ್ ಪದವೀಧರರು (Engineering Graduates) ಯುಪಿಎಸ್ಸಿ (UPSC) ಪರೀಕ್ಷೆ ಬರೆದು ಯಶಸ್ವಿಯಾಗುತ್ತಿದ್ದಾರೆ. ಪ್ರತಿ ವರ್ಷವೂ ಯುಪಿಎಸ್ಸಿ ಪರೀಕ್ಷೆ ಬರೆಯುವವರ ಪೈಕಿ ಇಂಜಿನಿಯರ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. 

ಸೆಪ್ಟೆಂಬರ್ 24, 2021 ರಂದು ಪ್ರಕಟವಾಗಿದ್ದ  2020ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪ್ 10 ರ್ಯಾಂಕರ್‌ಗಳಲ್ಲಿ 6 ಮಂದಿ ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು.  ಕಳೆದೊಂದು ದಶಕದಲ್ಲಿ ಇಬ್ಬರನ್ನು ಹೊರತುಪಡಿಸಿ (2011ರಲ್ಲಿ ಶೆನಾ ಅಗರ್ವಾಲ್ ಮತ್ತು 2015ರಲ್ಲಿ ಟೀನಾ ದಾಬಿ) ಉಳಿದವರೆಲ್ಲ UPSC ಟಾಪರ್‌ಗಳು ಎಂಜಿನಿಯರಿಂಗ್ ವಿಭಾಗದವರೇ ಆಗಿದ್ದಾರೆ. ಆರ್ಟ್ಸ್ ವಿಭಾಗ ಅಥವಾ ಮಾನವಿಕ ಶೈಕ್ಷಣಿಕ ಹಿನ್ನೆಲೆ ಹೊಂದಿರುವವರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸುಲಭವಾಗುತ್ತದೆ ಎಂಬ ಜನಪ್ರಿಯ ಕಲ್ಪನೆಯನ್ನು ಕಳೆದೊಂದು ದಶಕದಲ್ಲಿ ಇಂಜಿನಿಯರಿಂಗ್ ಹಿನ್ನೆಲೆಯುಳ್ಳ ಯುಪಿಎಸ್ಸಿ ಟಾಪರ್ಸ್ ಬುಡಮೇಲಾಗಿಸಿದ್ದಾರೆ. 

ಲಾಭದಾಯಕ ಪ್ಲೇಸ್‌ಮೆಂಟ್ ಆಫರ್‌ಗಳ ಹೊರತಾಗಿಯೂ ಇಂಜಿನಿಯರ್‌ಗಳು ಆಡಳಿತಾತ್ಮಕ ಸೇವೆಗಳಿಗೆ ಸೇರಲು ಒಲವು ತೋರುತ್ತಿದ್ದಾರೆ. ಕೆಲವರು ಪದವಿಯ ನಂತರ ಯುಪಿಎಸ್ಸಿ ಪರೀಕ್ಷೆಗೆ ತಮ್ಮ ತಯಾರಿ ಪ್ರಾರಂಭಿಸಿದರೆ, ಇನ್ನೂ ಕೆಲವರು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದಕ್ಕಾಗಿ ತಮ್ಮ ಕಾರ್ಪೊರೇಟ್ ವೃತ್ತಿಜೀವನಕ್ಕೆ ಗುಡ್ಬೈ ಹೇಳುತ್ತಿದ್ದಾರೆ. 

ಕನ್ನಡದಲ್ಲಿ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ

DoPT ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ ಯುಪಿಎಸ್‌ಸಿ (UPSC) ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚಾಗಿದೆ. 2019 ರಲ್ಲಿ, ಇಂಜಿನಿಯರಿಂಗ್ ಪದವಿ ಹೊಂದಿರುವ ಅನೇಕ ಅಧಿಕಾರಿಗಳನ್ನು DoPT 'ಪದವೀಧರ' ವರ್ಗಕ್ಕೆ ಸೇರಿಸಿದ್ದರಿಂದ ಸಂಖ್ಯೆ 27 ಕ್ಕಿಂತ ಹೆಚ್ಚಿರಬಹುದು.

ಈ ವರ್ಷದ UPSC ಟಾಪ್ 10 ಪಟ್ಟಿಯಲ್ಲಿರುವ AIR (All India Ranking) 1 ಶುಭಂ ಕುಮಾರ್, ಮತ್ತು ಜಿವಾನಿ ಕಾರ್ತಿಕ್ ನಾಗ್ಜಿಭಾಯಿ IIT ಬಾಂಬೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ಪ್ರವೀಣ್ ಕುಮಾರ್ IIT ಕಾನ್ಪುರದಿಂದ ಪದವೀಧರರಾಗಿದ್ದರೆ, ಅಂಕಿತಾ ಜೈನ್ DTU ದೆಹಲಿಯವರಾಗಿದ್ದಾರೆ. ಜಾಗೃತಿ ಅವಸ್ಥಿ ಬಿಟೆಕ್ ಪದವೀಧರರಾಗಿದ್ದಾರೆ. ಇವುಗಳ ಹೊರತಾಗಿ, IIT-BHU (ವಾರಣಾಸಿ)ಯಿಂದ ಒಟ್ಟು 17 ವಿದ್ಯಾರ್ಥಿಗಳು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.  ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಸಕ್ತಿಯಿಂದಾಗಿ, ಐಐಟಿ (BHU) ಹಳೆಯ ವಿದ್ಯಾರ್ಥಿಗಳು, ಈಗ UPSC ಆಕಾಂಕ್ಷಿಗಳಿಗೆ ನಿಯಮಿತ ಕೌನ್ಸೆಲಿಂಗ್ ಆಯೋಜಿಸುತ್ತಿದ್ದಾರೆ.

ಐಆರ್‌ಎಸ್ (IRS) ಬ್ಯಾಚ್ 2019ರ ಅಂಕುಶ್ ಕೊಠಾರಿ ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿಯಾಗಿದ್ದು, ಇವರು ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು 19 ಲಕ್ಷ ರೂ. ವೇತನವಿದ್ದ ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಅನ್ನು ತ್ಯಜಿಸಿದ್ದರು. ಒಟ್ಟಾರೆಯಾಗಿ, ಎಂಜಿನಿಯರ್‌ಗಳು  ಜೆಇಇ(JEE) ಪರೀಕ್ಷೆಗೆ ತಯಾರಿ ನಡೆಸುವಾಗ ವಿಶ್ಲೇಷಣಾತ್ಮಕ ಕೌಶಲ್ಯ ಗಳಿಸುತ್ತಾರೆ. ಮುಂದೆ ಪದವಿಯ ಸಮಯದಲ್ಲಿ ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆಯ ಪ್ರಿಲಿಮ್ಸ್‌ಗೆ ಅರ್ಹತೆ ಪಡೆಯುವಲ್ಲಿ ಹೆಚ್ಚಿನ ಲಾಭ ತಂದುಕೊಟ್ಟಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

NEET Result: ಮೇಘನ್, ಜಶನ್ ಕರ್ನಾಟಕಕ್ಕೆ ಟಾಪರ್

click me!