Chikkamagaluru: ಪತ್ರಿಕೋದ್ಯಮ ಪದವಿಯಲ್ಲಿ ಚಿನ್ನದ ಪದಕ ಪಡೆದ ಆಮುದಾ!

By Govindaraj SFirst Published Jun 11, 2022, 11:41 PM IST
Highlights

ಅದು ಮಲೆನಾಡಿನ ಕುಗ್ರಾಮ.ಮೂಲಭೂತ ಸೌಲಭ್ಯ ಗಗನಕುಸುಮ, ಸಂಪರ್ಕವಾದ ರಸ್ತೆ ಇಲ್ಲದೇ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆಯೂ ಇಡೀ ರಾಜ್ಯವೇ ಮೆಚ್ಚುವ ಸಾಧನೆಯನ್ನು ಮಲೆನಾಡಿನ ಹುಡುಗಿ ಮಾಡಿದ್ದಾಳೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.11): ಅದು ಮಲೆನಾಡಿನ ಕುಗ್ರಾಮ.ಮೂಲಭೂತ ಸೌಲಭ್ಯ ಗಗನಕುಸುಮ, ಸಂಪರ್ಕವಾದ ರಸ್ತೆ ಇಲ್ಲದೇ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆಯೂ ಇಡೀ ರಾಜ್ಯವೇ ಮೆಚ್ಚುವ ಸಾಧನೆಯನ್ನು ಮಲೆನಾಡಿನ ಹುಡುಗಿ ಮಾಡಿದ್ದಾಳೆ. ಆದ್ರೆ ಬೆನ್ನಿಗೆ ಅಂಟಿದ ಬಡತನ ಉನ್ನತ ವಿದ್ಯಾಭ್ಯಾಸದ ಕನಸನ್ನು ಕಮರಿಸಿದೆ.

ಚಿನ್ನದ ಹುಡುಗಿ ಗಾರ್ಮೆಂಟ್ ಉದ್ಯೋಗಿ: ಮಳೆಗಾಲದಲ್ಲಿ ಜಟಿ ಜಟಿ ಮಳೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಶಾಲಾ ಮಕ್ಕಳು, ಕೆಮ್ಮಣ್ಣಿನ ರಸ್ತೆ, ಗುಂಡಿ ಇಲ್ಲದೇ ರಸ್ತೆಯೇ ಇಲ್ಲ ಎನ್ನುವ ದುಸ್ಥಿತಿ. ಹೌದು! ಅಧುನಿಯ ಯುಗದಲ್ಲೂ ಇಂತಹ ದುಸ್ಥಿತಿ ಇರುವುದು ಮಲೆನಾಡಿನ ಕುಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಮರಸಣಿಗೆಯಲ್ಲಿ. ಇಂತಹ ದುಸ್ಥಿತಿಯಲ್ಲೇ ಮೈಲುಗಟ್ಟಲೆ ನಡೆದು ಚಿನ್ನದ ಪದಕ  ಪಡೆದ ಹುಡುಗಿ ಈಗ ಗಾರ್ಮೆಂಟ್ ಉದ್ಯೋಗಿಯಾಗಿದ್ದಾರೆ. 

Chikkamagaluru ; ಅಕ್ರಮ ಗೋಮಾಂಸ ಮಾರಾಟ ಶೆಡ್ ತೆರವು

ಕಳಸ ತಾಲ್ಲೂಕಿನ ಮರಸಣಿಗೆ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಉದಯಕುಮಾರ್ ಮಹಾಲಕ್ಷ್ಮಿ ದಂಪತಿಯ ಪುತ್ರಿ ಅಮುದಾ ಪದವಿ ತರಗತಿಯ ಪತ್ರಿಕೋದ್ಯಮ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಹುಡುಗಿ. ಕಳಸ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಈಕೆ ನಿತ್ಯ 3 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಬಂದು ಅಲ್ಲಿಂದ ವಾಹನದಲ್ಲಿ ಕಾಲೇಜಿಗೆ ತೆರಳಿ ವ್ಯಾಸಂಗ ಮುಗಿಸಿದ್ದಾಳೆ. ರಜೆ ದಿನಗಳಲ್ಲಿ ತಂದೆ ತಾಯಿಯೊಟ್ಟಿಗೆ ಕೂಲಿಗೆ ಹೋಗಿ ಒಂದಿಷ್ಟು ಹಣ ಸಂಪಾದಿಸಿ ಅದನ್ನು ಶಾಲಾ ಶುಲ್ಕವಾಗಿ ಭರಿಸಿದ ಕೀರ್ತಿ ಈಕೆಯದು.

ಪರೀಕ್ಷೆ ಮುಗಿಯುತ್ತಿದ್ದಂತೆ ಉದ್ಯೋಗ ಅರಸಿ ಬೆಂಗಳೂರಿಗೆ: ಕಡು ಬಡತನವಿದ್ದರೂ ಸಾಧಿಸಬೇಕೆಂಬ ಛಲದಿಂದ ಓದಿದ ಪರಿಣಾಮ ಕುವೆಂಪು ವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕದ ಜತೆ ನಗದು ಬಹುಮಾನ ಲಭಿಸಿದೆ. ಪರೀಕ್ಷೆ ಮುಗಿಯುತ್ತಿದ್ದಂತೆ ಈಕೆ ಫಲಿತಾಂಶಕ್ಕೂ ಕಾಯದೆ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿ ಅಲ್ಲಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲು ಕೆಲಸಕ್ಕೆ ರಜೆಯನ್ನು ಹಾಕಿ ಬರಬೇಕಾಗಿದೆ. 

ಇನ್ನಷ್ಟು ಓದುವ ಹಂಬಲ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಬಯಕೆ ಈಕೆಯದು. ಈಗಾಗಲೇ ಸಾಕಷ್ಟು ಸಾಲ ಮಾಡಿ ಓದಿಸಿರುವ ಪೋಷಕರಿಗೆ ಇದು ಕಷ್ಟದ ಕೆಲಸವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿದ ಅಮುದಾ ರ್ಯಾಂಕ್ ನಿರೀಕ್ಷೆ ಇರಲಿಲ್ಲ. ಆದರೆ, ಮನಸ್ಸಿಟ್ಟು ಓದುತ್ತಿದ್ದೆ. ನನಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಕುಟಂಬಕ್ಕೆ ಹೊರೆ ಆಗಬಾರದು ಎಂದು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ವಿದ್ಯಾಭ್ಯಾಸದ ಬಗ್ಗೆ ಪೋಷಕರನ್ನು ಕೇಳಿ ತೀರ್ಮಾನಿಸುತ್ತೇನೆ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾಳೆ. 
 
Chikkamagaluru; ಕಳೆದ 4 ವರ್ಷದಲ್ಲಿ ಅಪಘಾತದಲ್ಲಿ 672 ಮಂದಿ ಸಾವು!

ಚಿನ್ನದ ಹುಡುಗಿಗೆ ಅಭಿನಂದನೆ: ಚಿನ್ನದ ಪದಕ ಪಡೆದ ಈಕೆಯನ್ನು ಅನೇಕ ಜನ ಅಭಿನಂದಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯು ಸಂಭ್ರಮಿಸಿದೆ. ಈಕೆಯ ಆಸೆಗೆ ದಾನಿಗಳು ಆಸರೆ ಆಗಬೇಕಾಗಿದೆ. ಒಟ್ಟಾರೆ ಮಲೆನಾಡಿನ ಕುಗ್ರಾಮದ ಹುಡುಗಿ ಚಿನ್ನದ ಪದಕ ಪಡೆದು ಕೀರ್ತಿ ತಂದಿದ್ದಾರೆ. ರಸ್ತೆಯೇ ಇಲ್ಲದೇ ಕಿಲೋಮೀಟರ್ ಗಟ್ಟಲೆ ನಡೆದು ಈ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ.

click me!