ಲವ್ ಜಿಹಾದ್ ಆರೋಪ ಹೊತ್ತಿದ್ದ ಯೂಟ್ಯೂಬರ್ ಮುಕಳೆಪ್ಪನಿಂದ ಹಿಂದೂ ಸಂಪ್ರದಾಯದಂತೆ ಪತ್ನಿಯ ಸೀಮಂತ ಶಾಸ್ತ್ರ!

Published : Jul 14, 2026, 08:05 AM IST
youtuber mukaleppa

ಸಾರಾಂಶ

ಖ್ಯಾತ ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿ, ತಮ್ಮ ಹಿಂದೂ ಪತ್ನಿ ಗಾಯತ್ರಿ ಅವರ ಸೀಮಂತ ಕಾರ್ಯವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ. ಲವ್ ಜಿಹಾದ್ ಆರೋಪದ ವಿವಾದದ ನಂತರ, ಈ ದಂಪತಿ ಪತ್ನಿಯ ಸಂಪ್ರದಾಯಕ್ಕೆ ಗೌರವ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಧಾರವಾಡ: ಉತ್ತರ ಕರ್ನಾಟಕದ ಮನೆಮಾತಾಗಿರುವ ಖ್ಯಾತ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ವಿವಾದಕ್ಕಾಗಿ ಅಲ್ಲ. ಬದಲಾಗಿ ತಮ್ಮ ಪತ್ನಿಯ ಸೀಮಂತ ಕಾರ್ಯವನ್ನು ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಯಾರು ಈ ಮುಕಳೆಪ್ಪ?

ಧಾರವಾಡ ಮೂಲದ ಖ್ವಾಜಾ ಶಿರಹಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಮುಕಳೆಪ್ಪ ಎಂದೇ ಫೇಮಸ್. ಮುಕಳೆಪ್ಪ ರಿಯಲ್ ಟೀಮ್ ಮತ್ತು ಶಂಕರಪ್ಪ ಕಾಮಿಡಿ ಯೂಟ್ಯೂಬ್ ಚಾನೆಲ್‌ಗಳ ಮೂಲಕ ಉತ್ತರ ಕರ್ನಾಟಕದ ಸೊಗಡಿನ ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ವಿವಾದದ ಹಿನ್ನೆಲೆ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಖ್ವಾಜಾ ಅವರು ಗಾಯತ್ರಿ ಜಾಲಿಹಾಳ ಎಂಬ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಖ್ವಾಜಾ ಅವರು ಹಿಂದೂ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಯುವತಿಯನ್ನು ಪುಸಲಾಯಿಸಿ ಮದುವೆಯಾಗಿದ್ದಾರೆ ಎಂದು ಯುವತಿಯ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಆರೋಪಿಸಿದ್ದವು. ಈ ಸಂಬಂಧ ಲವ್ ಜಿಹಾದ್ ಆರೋಪದಡಿ ಧಾರವಾಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.

ಹಿಂದೂ ಸಂಪ್ರದಾಯದಂತೆ ಸೀಮಂತ

ಎಲ್ಲಾ ವಿವಾದಗಳು ಮತ್ತು ಪ್ರತಿರೋಧಗಳ ನಡುವೆಯೂ ಈ ದಂಪತಿ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಗಾಯತ್ರಿ ಅವರು ಗರ್ಭಿಣಿಯಾಗಿದ್ದು, ಮುಸ್ಲಿಂ ಧರ್ಮದವರಾಗಿದ್ದರೂ ಖ್ವಾಜಾ ಅವರು ಪತ್ನಿಯ ಆಸೆ ಮತ್ತು ಸಂಪ್ರದಾಯಕ್ಕೆ ಗೌರವ ನೀಡಿ, ಸಂಪೂರ್ಣ ಹಿಂದೂ ವಿಧಿವಿಧಾನದಂತೆ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ. ಹಸಿರು ಬಳೆ ತೊಟ್ಟು, ಮೈತುಂಬಾ ಒಡವೆ ಧರಿಸಿದ ಗಾಯತ್ರಿ ಅವರಿಗೆ ಆರತಿ ಎತ್ತಿ, ಸಂಪ್ರದಾಯದಂತೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಈ ಫೋಟೋಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ಒಂದು ಕಾಲದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಈ ಜೋಡಿಯ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದರೂ, ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಧರ್ಮ ಯಾವುದಾದರೇನು, ಪತ್ನಿಯ ಸಂಪ್ರದಾಯಕ್ಕೆ ಗೌರವ ಕೊಡುವುದು ದೊಡ್ಡ ಗುಣ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ವಿವಾದಗಳ ಸುಳಿಯಲ್ಲಿದ್ದ ಮುಕಳೆಪ್ಪ ಈಗ ಪತ್ನಿಯ ಸೀಮಂತ ಕಾರ್ಯದ ಮೂಲಕ ಹೊಸದೊಂದು ಸಂದೇಶ ಸಾರಲು ಹೊರಟಿದ್ದಾರೆ.

PREV
Read more Articles on
click me!

Recommended Stories

ಜೀವನದ ಕೊನೆಯ ಸೆಲ್ಫಿ: ಅರಬೈಲ್ ಘಾಟ್‌ನಲ್ಲಿ ಅಂತ್ಯವಾದ ಸ್ನೇಹಯಾತ್ರೆ, ಮೃತರ ಫೋಟೋ ರಿಲೀಸ್ ಮಾಡಿದ ಜಿಲ್ಲಾಡಳಿತ!
ಧಾರವಾಡ ಡೆಲಿವರಿ ಬಾಯ್ ಸ್ನೇಹಿತರು ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತ್ಯು, ಭೀಕರತೆ ಬಿಚ್ಚಿಟ್ಟ ಫೋಟೋಗಳು!