ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಸೆ.21ರ ವಿಶೇಷ ಅಧಿವೇಶನದಲ್ಲಿ ನಿರ್ಣಯ: ಹೆಬ್ರಿಯಲ್ಲಿ ಸಿಎಂ ಡಿಕೆಶಿ ಭರವಸೆ

Published : Sep 19, 2026, 07:30 AM IST
DK shivakumar Kasturirangan Report

ಸಾರಾಂಶ

ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಹೆಬ್ರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಜನರ ಅಭಿಪ್ರಾಯ ಆಲಿಸಿದರು. ಸೆಪ್ಟೆಂಬರ್ 21 ರಿಂದ 23 ರವರೆಗೆ ನಡೆಯುವ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ವರದಿ ಬಾಧಿತ ಪ್ರದೇಶಗಳಲ್ಲಿ ಭೌತಿಕ ಸರ್ವೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹೆಬ್ರಿ : ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಅಧಿಸೂಚನೆ ಜಾರಿ ವಿರುದ್ಧ ಸೆ. 21, 22, 23 ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಅವರು ಶುಕ್ರವಾರ, ಇಲ್ಲಿನ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಈ ಅಧಿಸೂಚನೆ ಜಾರಿ ಬಗ್ಗೆ ಸ್ಥಳೀಯರ ಅಭಿಪ್ರಾಯ ಆಲಿಸಿ ಮಾತನಾಡಿದರು.

ಅವರು ಸಭೆಯಲ್ಲಿ ಅಧಿಸೂಚನೆಯ ಪರ ಅಥವಾ ವಿರುದ್ಧ ಸ್ಪಷ್ಟ ನಿರ್ಣಯವನ್ನು ಘೋಷಿಸಲಿಲ್ಲ, ಆದರೆ, ಜನರ ಅಭಿಪ್ರಾಯವೇ ನನ್ನ ಸರ್ಕಾರದ ಅಭಿಪ್ರಾಯ, ನಾನು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿಗಾಗಿ ರಾಜಕಾರಣ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮೊದಲ ದಿನವಿಡೀ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ

ವಿಶೇಷ ಅಧಿವೇಶನದ ಮೊದಲ ದಿನವಿಡೀ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ, ಜನರಿಗೆ ಆತಂಕ ಬೇಡ, ನಿಮ್ಮ ಜೊತೆ ಸರ್ಕಾರ ಇದೆ, ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದವರು ಹೇಳಿದರು.

ಈ ವರದಿಯ ಬಾಧಿತ ಗ್ರಾಮಗಳಲ್ಲಿ ಸಭೆ, ಸರ್ವೇ ನಡೆಸಬೇಕಾದ ಅಗತ್ಯ ಇದೆ, ಸರ್ವೇಗೆ ತಾಂತ್ರಿಕ ಸಮಿತಿ ರಚನೆಗೆ ಬೇಡಿಕೆ ವ್ಯಕ್ತವಾಗಿದೆ, ಆದ್ದರಿಂದ ತಾನು ಇನ್ನೆರಡು ದಿನಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೂ ಹೋಗಿ ಸಭೆ ನಡೆಸಿ ಜನರ ಅಭಿಪ್ರಾಯ ಕೇಳುತ್ತೇನೆ ಎಂದರು.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು, ರಾಜ್ಯ ಸರ್ಕಾರ ಈಗಾಗಲೇ ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ, ಜನರಿಗೆ ಆತಂಕ ಬೇಡ ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಜನರ ವಿರುದ್ಧ ಯಾವುದೇ ಯೋಜನೆ, ಕಾಯ್ದೆ ಬಂದರೂ ವಿರೋಧಿಸುತ್ತೇವೆ, ಅಗತ್ಯವಾದರೆ ಕಾನೂನು ಹೋರಾಟವೂ ಮಾಡುತ್ತೇವೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ನ್ಯಾಯವಾದಿ ಟಿ.ಬಿ.ಶೆಟ್ಟಿ, ಹೆಬ್ರಿ ಗ್ರಾಪಂ ಅಧ್ಯಕ್ಷ ನವೀನ್ ಅಡ್ಯಂತಾಯ, ನಾಡ್ಪಾಲು ಗ್ರಾಪಂ ಅಧ್ಯಕ್ಷ ದಿನೇಶ್ ಹೆಗ್ಡೆ, ಕೃಷಿಕ ಸಂಘದ ಉದಯಕುಮಾರ್ ಶೆಟ್ಟಿ, ಆದಿವಾಸಿ ಬುಡಕಟ್ಟು ಪ್ರತಿನಿಧಿ ಶ್ರೀಧರ ಗೌಡ ವರದಿ ವಿರುದ್ಧ ತಮ್ಮ ಅಭಿಪ್ರಾಯ ಮಂಡಿಸಿ, ವರದಿ ವ್ಯಾಪ್ತಿಯ ಗ್ರಾಮಗಳಲ್ಲಿ ಭೌತಿಕ ಸರ್ವೆ ನಡೆಸಿ, ಕಾಡು ನಾಡು ಪ್ರತ್ಯೇಕಿಸಲು ಆಗ್ರಹಿಸಿದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಶೆಟ್ಟಿ ಗಂಟಿಹೊಳೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ, ರಮಾನಾಥ ರೈ, ವಿನಯಕುಮಾರ್ ಸೊರಕೆ ಮತ್ತು ಇಲಾಖೆಯ ಅಧಿಕಾರಿಗಳಿದ್ದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ವಾಗತಿಸಿದರು.

PREV
Read more Articles on
click me!

Recommended Stories

Karnataka News 19th Sep Live; ಕಸ್ತೂರಿ ರಂಗನ್ ವರದಿ ವಿರುದ್ಧ 21ರ ವಿಶೇಷ ಅಧಿವೇಶನದಲ್ಲಿ ನಿರ್ಣಯ
ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ, ಡಿಕೆ ಶಿವಕುಮಾರ್ ಮಹತ್ವದ ಘೋಷಣೆ