ಕೇಂದ್ರ ಮಾಜಿ ಸಚಿವ, ಹಿರಿಯ 'ಕೈ' ಮುಖಂಡನ ಕಟ್ಟಾ ಬೆಂಬಲಿಗರು ಬಿಜೆಪಿಗೆ

By Kannadaprabha NewsFirst Published Nov 9, 2019, 11:21 AM IST
Highlights

ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರ ಕಟ್ಟಾಬೆಂಬಲಿಗರು ಶುಕ್ರವಾರ ಸಾಮೂಹಿಕವಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಜನಾರ್ದನ ಪೂಜಾರಿ ಬೆಂಬಲಿಗರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ.

ಮಂಗಳೂರು(ನ.09): ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರ ಕಟ್ಟಾಬೆಂಬಲಿಗರು ಶುಕ್ರವಾರ ಸಾಮೂಹಿಕವಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಜನಾರ್ದನ ಪೂಜಾರಿ ಬೆಂಬಲಿಗರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ ಮುಖಂಡ ಅರುಣ್‌ ಕುವೆಲ್ಲೊ, ಕಾಂಗ್ರೆಸ್‌ ವಕ್ತಾರ, ಇಂಟಕ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿರಾಜ್‌ ಅಂಬಟ್‌, ಮಾಜಿ ಮೇಯರ್‌ ಪುರಂದರದಾಸ್‌ ಕೂಳೂರು ಮತ್ತು 49ನೇ ಕಂಕನಾಡಿ ವಾರ್ಡ್‌ನ 50ಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಇವರಿಗೆ ಬಿಜೆಪಿ ಧ್ವಜ ನೀಡಿ, ಪಕ್ಷದ ಶಾಲು ಹಾಕಿ ಬರಮಾಡಿಕೊಳ್ಳಲಾಯಿತು.

ದ.ಕ. ಕಾಂಗ್ರೆಸ್‌ ದಿವಾಳಿ ಹಂತಕ್ಕೆ:

ಈ ಸಂದರ್ಭ ಮಾತನಾಡಿದ ನಳಿನ್‌ ಕುಮಾರ್‌ ಕಟೀಲು, ಕಾಂಗ್ರೆಸ್‌ ಕಾರ್ಯವೈಖರಿಗೆ ಬೇಸತ್ತು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ಮೆಚ್ಚಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ದಿವಾಳಿಯಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಖಾಲಿಯಾಗುವ ಹಂತದಲ್ಲಿದೆ ಎಂದಿದ್ದಾರೆ.

ಯುವ ಕಾಂಗ್ರೆಸ್‌ ಪ್ರಧಾನ ಕಾಯದರ್ಶಿ ವರುಣ್‌ರಾಜ್‌ ಅಂಬಟ್‌, 49ನೇ ಕಂಕನಾಡಿ ವಾರ್ಡ್‌ನ ಕಾಂಗ್ರೆಸ್‌ ಕಾರ್ಯಕರ್ತರಾದ ಭಾರತೀಶ್‌ ಅಮೀನ್‌, ಪ್ರಕಾಶ್‌ ಗರೋಡಿ, ಜಯರಾಜ್‌ ಶೆಟ್ಟಿನಾಗುರಿ ಬಿಜೆಪಿಗೆ ಸೇರ್ಪಡೆಗೊಂಡರು.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಮಾಜಿ ಶಾಸಕ ಯೋಗೀಶ್‌ ಭಟ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನಿತಿನ್‌ ಕುಮಾರ್‌, ರವಿಶಂಕರ ಮಿಜಾರ್‌, ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡುಬಿದಿರೆ, ಮುಖಂಡರಾದ ಹರಿಕೃಷ್ಣ ಬಂಟ್ವಾಳ್‌, ಯಶ್‌ಪಾಲ್‌ ಸುವರ್ಣ, ಪಾಲಿಕೆ ಮಾಜಿ ಸದಸ್ಯ ರಾಧಾಕೃಷ್ಣ, ಜಿತೇಂದ್ರ ಕೊಟ್ಟಾರಿ, ಭಾಸ್ಕರಚಂದ್ರ ಶೆಟ್ಟಿ, 49ನೇ ಕಂಕನಾಡಿ ವಾರ್ಡ್‌ ಬಿಜೆಪಿ ಅಭ್ಯರ್ಥಿ ವಿಜಯ ಕುಮಾರ್‌ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್‌ ಚೌಟ ಇದ್ದರು.

ಕಾಂಗ್ರೆಸ್‌ನಲ್ಲಿ ತತ್ವಸಿದ್ದಾಂತಕ್ಕೆ ಬೆಲೆ ಇಲ್ಲ

ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಶಶಿರಾಜ್‌ ಅಂಬಟ್‌, ಕಾಂಗ್ರೆಸ್‌ನಲ್ಲಿ ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲ. ಇನ್ನೊಬ್ಬರನ್ನು ಕೋಮುವಾದಿಗಳು ಎಂದು ತೋರಿಸಿ, ನಮ್ಮನ್ನು ಹೆದರಿಸಿ ಪಕ್ಷದಲ್ಲಿ ಇರುವಂತೆ ಮಾಡಲಾಗಿತ್ತು. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ ಮತ್ತು ಅವರ ಬೆಂಬಲಿಗರನ್ನು ವ್ಯವಸ್ಥಿತವಾಗಿ ಬದಿಗೊತ್ತಲಾಗಿದೆ. ಇದು ಮೊದಲ ಹಂತ. ಮುಂದಕ್ಕೆ ಹಂತ ಹಂತವಾಗಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಪೂಜಾರಿ ಕಡೆಗಣನೆ: ಕುವೆಲ್ಲೊ

ಕಾಂಗ್ರೆಸ್‌ ಪಕ್ಷದ ಎಲ್ಲ ಹುದ್ದೆಗಳಿಗೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅರುಣ್‌ ಕುವೆಲ್ಲೊ ಶುಕ್ರವಾರ ರಾಜಿನಾಮೆ ನೀಡಿ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಾನು ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಅಭಿಮಾನಿಯಾಗಿದ್ದು, ಅವರನ್ನು ಕಾಂಗ್ರೆಸ್‌ನ ವಲಸೆ ನಾಯಕರು ಕಡೆಗಣಿಸಿರುವುದರಿಂದ ಬೇಸತ್ತಿದ್ದೇನೆ. ಕೆಲವು ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಜಾತೀಯವಾದಿ ರಾಜಕಾರಣದತ್ತ ಹೊರಳುತ್ತಿದ್ದು, ವಲಸೆ ಕಾಂಗ್ರೆಸಿಗರ ಸೊತ್ತಾಗುತ್ತಿದೆ. ಇದರಿಂದ ನಾನು ಪಕ್ಷದ ಹುದ್ದೆ ಹಾಗೂ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಅರುಣ್‌ ಕುವೆಲ್ಲೊ ಅವರು ಜಿಲ್ಲಾಧ್ಯಕ್ಷರಿಗೆ ನೀಡಿದ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಮಂಗಳೂರು: ಕಾರ್ಮಿಕರು ಓಟ್ ಮಾಡಿದ್ರೆ ಒಂದು ದಿನ ವೇತನ ಸಹಿತ ರಜೆ

click me!