ದಾಂಪತ್ಯದಲ್ಲಿ ದೇಹ ಎರಡಾದರೂ ಆಲೋಚನೆ ಒಂದೇ ಇರಬೇಕು; ಬಸವಪ್ರಭು ಸ್ವಾಮೀಜಿ

By Kannadaprabha NewsFirst Published Nov 6, 2022, 12:23 PM IST
Highlights
  • ದಾಂಪತ್ಯದಲ್ಲಿ ದೇಹ ಎರಡಾದರೂ ಆಲೋಚನೆ ಒಂದೇ ಇರಬೇಕು
  • ಮುರುಘಾಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಮಹೋತ್ಸವದಲ್ಲಿ ಬಸವಪ್ರಭು ಸ್ವಾಮೀಜಿ ಅಭಿಮತ

ಚಿತ್ರದುರ್ಗ (ನ.6) : ದಾಂಪತ್ಯದಲ್ಲಿ ದೇಹ ಎರಡಾದರೂ ಆಲೋಚನೆಗಳು ಒಂದೇ ಇರಬೇಕೆಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. ಬಸವಕೇಂದ್ರ ಮುರುಘಾಮಠದಲ್ಲಿ ಶನಿವಾರ ನಡೆದ ಮೂವತ್ತೆರಡನೆ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿಮಾತ್ರ ಒಂದೇ ರೀತಿಯಾಗಿ ಕಾಣುತ್ತದೆ. ಅದೇ ರೀತಿ ಸಂಸಾರದಲ್ಲಿ ಸತಿ-ಪತಿ ಇಬ್ಬರಾದರೂ ಮನಸ್ಸು ಮಾತ್ರ ಒಂದೇ ಆಗಿರಬೇಕು. ಆಗ ಜೀವನ ಸುಂದರ ಮತ್ತು ಬಂಗಾರವಾಗುತ್ತದೆ ಎಂದರು.

ಮನುಷ್ಯನ ಆಸೆ, ಆಕಾಂಕ್ಷೆಗೆ ತೃಪ್ತಿಯೇ ಇಲ್ಲ : ಬಸವಪ್ರಭು ಸ್ವಾಮೀಜಿ ವಿಷಾದ

Latest Videos

ಸ್ವರ್ಗ ನರಕಗಳು ಎಲ್ಲಿಯೂ ಇಲ್ಲ. ಅವು ಮಾನವನ ಹೃದಯ ಮತ್ತು ನಾಲಿಗೆಯಲ್ಲಿವೆ. ಹೃದಯದಲ್ಲಿ ದ್ವೇಷವನ್ನು ತುಂಬಿಕೊಂಡರೆ ಬದುಕು ನರಕವಾಗುತ್ತದೆ. ಅದರ ಬದಲಾಗಿ ಪ್ರೇಮವನ್ನು ತುಂಬಿಕೊಂಡರೆ ಸ್ವರ್ಗವಾಗುತ್ತದೆ. ಅಂತರಂಗದಲ್ಲಿ ಸದ್ಭಾವನೆ ಇದ್ದಾಗ ಮಾತು, ಕೃತಿಗಳು ಸಾತ್ವಿಕವಾಗಿ ದಾರ್ಶನಿಕನಾಗುತ್ತಾನೆ. ದುರ್ಭಾವನೆ ಬಂದರೆ ಮಾನವ ರಕ್ಕಸನಾಗುತ್ತಾನೆ. ಜೀವನದಲ್ಲಿ ದಂಪತಿಗಳು ಬಂದ ಕಷ್ಟಗಳನ್ನು ತಡೆದುಕೊಳ್ಳಬೇಕು. ಯಾರು ಸಹನಾಶೀಲರಾಗುತ್ತಾರೋ ಅವರು ಜೀವನದಲ್ಲಿ ವಿಜಯಶಾಲಿಯಾಗುತ್ತಾರೆ ಎಂದರು.

ನಾಡಿನಲ್ಲಿ ಶತಶತಮಾನಗಳಿಂದ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡ ಬಂದ ಕೀರ್ತಿ ಚಿತ್ರದುರ್ಗ ಮುರುಘಾಮಠಕ್ಕೆ ಸಲ್ಲುತ್ತದೆ. ಮುರುಘಾಮಠದ ಪರಂಪರೆಯ ಎಲ್ಲಾ ಪೀಠಾಧೀಶರ ಕೊಡುಗೆ ಅನನ್ಯವಾಗಿದೆ. 1863ರಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿದ ಕೀರ್ತಿ ಮುರುಘಾಮಠದ ಶಿರಸಂಗಿ ಮಹಾಲಿಂಗ ಸ್ವಾಮೀಜಿಯವರಿಗೆ ಸಲ್ಲುತ್ತದೆ. ನಂತರ ಶ್ರೀ ಜಯದೇವ, ಶ್ರೀ ಜಯವಿಭವ, ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳು ಅನ್ನದಾಸೋಹ , ಜ್ಞಾನ ದಾಸೋಹ , ಅಕ್ಷರ ದಾಸೋಹವನ್ನು ಪ್ರಾರಂಭಿಸಿ ತ್ರಿವಿಧ ದಾಸೋಹಮಠವೆಂದು ಪ್ರಖ್ಯಾತಿಯನ್ನು ಪಡೆಯಲು ಕಾರಣರಾಗಿದ್ದಾರೆ ಎಂದರು.

ಸಮ್ಮುಖ ವಹಿಸಿದ್ದ ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ಮಾತನಾಡಿ, ಮುರುಘಾಮಠದಲ್ಲಿ ಜಾತ್ಯತೀತವಾಗಿ ಕಲ್ಯಾಣ ಕಾರ್ಯಗಳು ನಡೆದುಕೊಂಡು ಬಂದಿರುವುದು ವಿಶೇಷ. ವ್ಯಕ್ತಿ ವಿಕಲಚೇತನನಾದರೆ, ಕಣ್ಣು ಕಾಣಿಸದಾದರೆ, ಕನ್ನಡಕ, ಕೃತಕ ಕಣ್ಣು, ಕಾಲುಗಳ ಆಶ್ರಯಿಸುತ್ತಾನೆ. ಹೂ ಮತ್ತು ದಾರ ಒಂದಾಗಿ ಹಾರವಾಗುವಂತೆ ಪತಿ ಮತ್ತು ಸತಿ ಜೀವನದಲ್ಲಿ ಒಬ್ಬರಿಗೊಬ್ಬರು ಅರಿತು ಅನ್ಯೋನ್ಯವಾಗಿ ಜೀವನ ಸಾಗಿಸಬೇಕೆಂದರು.

ಅನ್ಯೋನ್ಯವಾಗಿ ಬದುಕಿ ಸಾವಿನಲ್ಲೂ ಒಂದಾದ ದಂಪತಿ

ಇದೇ ಸಂದರ್ಭದಲ್ಲಿ 5 ಜೋಡಿಗಳ ವಿವಾಹ ನೆರವೇರಿತು. ಚೆನ್ನಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ಜಯಂತಿಯನ್ನು ಆಚರಿಸಲಾಯಿತು.

ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು, ಪೈಲ್ವಾನ್‌ ತಿಪ್ಪೇಸ್ವಾಮಿ ಇದ್ದರು.ಪ್ರಕಾಶ್‌ದೇವರು ಸ್ವಾಗತಿಸಿದರು. ಎನ್‌.ಜಿ. ಶಿವಕುಮಾರ್‌ ನಿರೂಪಿಸಿದರು. ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.

click me!