
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.15): ಅದೊಂದು ವಾಟ್ಸಪ್ ಸಂದೇಶ ನಿನ್ನೆ ಮಂಗಳೂರು ವಿಮಾನ ನಿಲ್ದಾಣವನ್ನು ಅಕ್ಷರಶಃ ಸ್ತಬ್ಧಗೊಳಿಸಿತ್ತು. ತಮಾಷೆಗಾಗಿ ಉತ್ತರಪ್ರದೇಶ ಮೂಲದ ಆ ಜೋಡಿ ಮಾಡಿದ ವಾಟ್ಸಪ್ ಸಂದೇಶ ನಿನ್ನೆ ಇಡೀ ದಿನ ವಿಮಾನ ನಿಲ್ದಾಣವನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಆ ಜೋಡಿ ಮಂಗಳೂರು ಪೊಲೀಸರ ವಶದಲ್ಲಿದ್ದು, ಆ ಮೆಸೇಜ್ ಕುರಿತಂತೆ ಪೊಲೀಸರ ತನಿಖೆ ಮತ್ತಷ್ಟು ಚುರುಕಾಗಿದೆ. ಅಷ್ಟಕ್ಕೂ ನಿನ್ನೆ ಮಂಗಳೂರು ಏರ್ ಪೋರ್ಟ್ ನಲ್ಲಿ ನಡೆದಿದ್ದೇನು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ....
ಟೇಕಾಫ್ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಮೊಟಕು; Mangaluru Airport ನಲ್ಲಿ 'ಚಾಟಿಂಗ್' ಆತಂಕ!
ನಿನ್ನೆ(ಭಾನುವಾರ) ಬೆಳಗ್ಗೆ 11 ಗಂಟೆ ಸುಮಾರಿಗೆ ಇಂಡಿಗೋ ವಿಮಾನ(Indigo Aeroplane)ದ ಮ್ಯಾನೇಜರ್ ಕೆ.ಪಿ.ಬೋಪಣ್ಣ(K.P.Bopanna) ಎಂಬವರು ಮನೆಯಲ್ಲಿದ್ದ ವೇಳೆ ಸಂಸ್ಥೆಯ ಮತ್ತೊಬ್ಬ ಸಿಬ್ಬಂದಿ ಸಿನಾನ್ ಎಂಬವರ ಕರೆ ಬಂದಿದೆ. ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿದೆ. ಅದರಂತೆ ಮ್ಯಾನೇಜರ್ ಬೋಪಣ್ಣ ಏರ್ ಪೋರ್ಟ್(Airport) ಗೆ ಆಗಮಿಸಿ ಸಿಬ್ಬಂದಿ ಸಿನಾನ್ ರಿಂದ ಮಾಹಿತಿ ಪಡೆದು ಸಿಐಎಸ್ ಎಫ್((CISF) ಸಿಬ್ಬಂದಿ ಮೂಲಕ ವಿಮಾನದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆಗ ಈ ವಿಮಾನದಲ್ಲಿದ್ದ ಸಿಮ್ರಾನ್ ಶೆಟ್ಟಿ(Simran shetty) ಎಂಬ ಪ್ರಯಾಣಿಕರೊಬ್ಬರ ಮಾಹಿತಿಯಂತೆ, ಇವರ ಮುಂದಿನ ಸೀಟ್ ನಲ್ಲಿ ಕೂತಿದ್ದ ದಿಪಿಯಾನ್(Dipiyan) ಮಾಜಿ ಎಂಬ ಯುವಕನ ಮೊಬೈಲ್ ಗೆ ಸಿಮ್ರಾನ್ ಟಾಮ್(Simran Tom) ಎಂಬ ಹೆಸರಿನಿಂದ 'among all the muslims, youre the bomber' ಎಂಬ ಸಂದೇಶ ಬಂದಿದ್ದಾಗಿ ತಿಳಿಸಿದ್ದಾರೆ.
ಸಿಮ್ರಾನ್ ಶೆಟ್ಟಿ ಈ ಸಂದೇಶ ಗಮನಿಸಿದ ತಕ್ಷಣ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಇಂಡಿಗೋ ಮ್ಯಾನೇಜರ್ ಹಾಗೂ ಸಿಐಎಸ್ ಎಫ್ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ತಕ್ಷಣ ಪಿಐಸಿ ಮೂಲಕ ಮಾಹಿತಿ ರವಾನಿಸಿ ಟೇಕಾಫ್ ಗೆ ಸಿದ್ದವಾಗಿದ್ದ ಮುಂಬೈ ವಿಮಾನ ಇಂಡಿಗೋವನ್ನು ತಡೆದು ಎಲ್ಲಾ ಪ್ರಯಾಣಿಕರನ್ನು ಇಳಿಸಿ ತೀವ್ರ ತಪಾಸಣೆ ನಡೆಸಲಾಗಿದೆ. ಅಲ್ಲದೇ ಮೆಸೇಜ್ ಬಂದ ದಿಪಿಯಾನ್ ಮಾಜಿ ಎಂಬ ಯುವಕನ ಮೊಬೈಲ್ ತಪಾಸಣೆ ನಡೆಸಿದ್ದು, ಮೆಸೇಜ್ ಕಳುಹಿಸಿದ ಯುವತಿ ಕೂಡ ಅದೇ ಏರ್ ಪೋರ್ಟ್ ನಲ್ಲಿ ಬೆಂಗಳೂರು ತೆರಳುವ ವಿಮಾನದಲ್ಲಿ ಇರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನೂ ವಶಕ್ಕೆ ಪಡೆದು ವಿಮಾನ ತಪಾಸಣೆ ನಡೆಸಲಾಗಿದೆ. ಕೊನೆಗೆ ಇದೊಂದು ತಮಾಷೆ ಸಂದೇಶ ಅಂತ ಗೊತ್ತಾದ ಬಳಿಕ ಹಾಗೂ ತೀವ್ರ ತಪಾಸಣೆ ನಂತರ ಸಂಜೆ ವೇಳೆ ವಿಮಾನ ಮತ್ತೆ ಹಾರಾಟ ನಡೆಸಿದೆ.
Mangaluru Airport Bomb: ಬಾಂಬ್ ಇಟ್ಟಿದ್ದ ಆದಿತ್ಯಗೆ 20 ವರ್ಷ ಶಿಕ್ಷೆ
'YOU'R THE BOMBER' ಸಂದೇಶಕ್ಕೆ ಬೆಚ್ಚಿ ಬಿತ್ತು ಏರ್ ಪೋರ್ಟ್!
ಉತ್ತರ ಪ್ರದೇಶದ ಘಾಝಿಯಾಬಾದ್ ನಿವಾಸಿಗಳಾದ ಸಿಮ್ರಾನ್ ಥಾಮ್ (23), ದೀಪಯನ್ ಮಾಜಿ(23) ಇಬ್ಬರೂ ಪರಿಚಯಸ್ಥರೇ ಆಗಿದ್ದಾರೆ. ಕಳೆದ ಎರಡ್ಮೂರು ದಿನಗಳ ಹಿಂದೆ ಉಡುಪಿಯ ಮಣಿಪಾಲಕ್ಕೆ ಬಂದಿದ್ದ ಜೋಡಿ ನಿನ್ನೆ ಅವರವರ ಜಾಗಕ್ಕೆ ತೆರಳಲು ಏರ್ ಪೋರ್ಟ್ ಗೆ ಬಂದಿದ್ದಾರೆ. ಸಿಮ್ರಾನ್ ಚೆನ್ನೈನ ಸೆಲ್ವಾ ಮೇರೀಸ್ ಕಾಲೇಜಿನಲ್ಲಿ ಎಂ.ಎ(ಎಚ್ಆರ್) ವ್ಯಾಸಂಗ ಮಾಡುತ್ತಿದ್ದು, ಅದಕ್ಕಾಗಿ ಬೆಂಗಳೂರು ತೆರಳಿ ಅಲ್ಲಿಂದ ಚೆನ್ನೈಗೆ ಹೊರಟಿದ್ದಳು. ದೀಪಯನ್ ಗುಜರಾತ್ ನ ವಡೋದಾರದ ಎಲ್ ಅಂಡ್ ಟಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದು, ಮುಂಬೈ ಮೂಲಕ ವಡೋದರಕ್ಕೆ ಹೊರಟಿದ್ದ ಎನ್ನಲಾಗಿದೆ. ದೀಪಯನ್ ಈ ಹಿಂದೆ ಮಣಿಪಾಲದಲ್ಲಿ ಶಿಕ್ಷಣ ಪಡೆದಿದ್ದು, ಹೀಗಾಗಿ ಸುತ್ತಾಡಲು ಮಣಿಪಾಲಕ್ಕೆ ಬಂದಿದ್ದರು. ಆದರೆ ಪ್ರತೇಕ ವಿಮಾನದಲ್ಲಿದ್ದ ಈ ಜೋಡಿ ತಮಾಷೆಗಾಗಿ ಮಾಡಿದ ಸಂದೇಶ ಇಡೀ ಏರ್ ಪೋರ್ಟ್ ಸ್ತಬ್ಧಗೊಳಿಸಿದೆ. ಯೂ ಆರ್ ದಿ ಬಾಂಬರ್ ಅನ್ನೋ ಸಂದೇಶ ಆತಂಕ ಹುಟ್ಟಿಸಿದೆ. ಸದ್ಯ ಮಂಗಳೂರಿನ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂಡಿಗೋ ವಿಮಾನದ ಮ್ಯಾನೇಜರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಐಪಿಸಿ 505(1)(b) ಮತ್ತು (c) ನಡಿ ಪ್ರಕರಣ ದಾಖಲಾಗಿದ್ದು, ಯುವಕ ಮತ್ತು ಯುವತಿ ವಿಚಾರಣೆ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ