ಯಾದಗಿರಿಗೂ ಅಂಟಿದ ಪಿಎಸ್ಐ ಅಕ್ರಮ ನಂಟು: ಸಿದ್ದುಗೌಡ ಅರೆಸ್ಟ್

By Govindaraj SFirst Published Aug 6, 2022, 1:26 PM IST
Highlights

ಬ್ಲೂಟೂತ್ ಡಿವೈಸರ್ ಬಳಸಿ ಪಿಎಸ್ಐ ಪರೀಕ್ಷೆಯಲ್ಲಿ ಪಾಸಾದ 8 ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ ಹಿನ್ನೆಲೆ ಯಾದಗಿರಿಯ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಸಿದ್ದುಗೌಡ ಅಂದರ್ ಆಗಿದ್ದಾನೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ 

ಯಾದಗಿರಿ (ಆ.06): ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮೋಸಗಾರರ ಬೇಟೆ ಮುಂದುವರೆಸಿದ್ದಾರೆ. ಬ್ಲೂಟೂತ್ ಡಿವೈಸರ್ ಬಳಸಿ ಪಿಎಸ್ಐ ಪರೀಕ್ಷೆಯಲ್ಲಿ ಪಾಸಾದ 8 ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ ಹಿನ್ನೆಲೆ ಯಾದಗಿರಿಯ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಸಿದ್ದುಗೌಡ ಅಂದರ್ ಆಗಿದ್ದಾನೆ.

ಕ.ಕರ್ನಾಟಕ ಕೋಟಾದಡೀ 22ನೇ ರ್ಯಾಂಕ್ ಪಡೆದಿದ್ದ ಸಿದ್ದುಗೌಡ: ಸಿಐಡಿ ಅಧಿಕಾರಿಗಳು ಪಿಎಸ್ಐ ಅಕ್ರಮ ಪ್ರಕರಣ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ತಲಾಶನ್ನು ಮುಂದುವರೆಸಿದ್ದಾರೆ. ಅದೇ ರೀತಿಯಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ್(ಬಿ) ಗ್ರಾಮದ ಸಿದ್ದುಗೌಡನನ್ನು ಸಿಐಡಿ ಅಧಿಕಾರಿಗಳು ಸ್ಥಳೀಯ ಪೋಲಿಸರ ಸಹಾಯದಿಂದ ಶುಕ್ರವಾರ ಬಂಧಿಸಿದ್ದಾರೆ. 

PSI Scam: ಮತ್ತೆ ಎಂಟು ಜನ ಅಭ್ಯರ್ಥಿಗಳು ಅರೆಸ್ಟ್: ಬಂಧಿತರಲ್ಲಿ ಹಲವರು ಸರಕಾರಿ ನೌಕರರು

ಸಿದ್ದುಗೌಡ ಎಂಬ ಆರೋಪಿ ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಕೋಟಾದಢೀ 22ನೇ ರ್ಯಾಂಕ್ ಪಡೆದಿದ್ದ, ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸರ್ ಬಳಸಿದ ಆರೋಪ ಸಿದ್ದುಗೌಡನ ಮೇಲಿದೆ. ಗುರುವಾರ ಸಿಐಡಿ ಅಧಿಕಾರಿಗಳು ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, 8 ಜನರನ್ನು ಬಂಧಿಸಿದೆ, ಅದರಲ್ಲಿ ಯಾದಗಿರಿಯ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ಸಿದ್ದುಗೌಡ ಕೂಡ ಒಬ್ಬನಾಗಿದ್ದಾನೆ.

ಡಿಆರ್ ಪೋಲಿಸ್, ಎಫ್‌ಡಿಎ ನಂತರ ಪಿಎಸ್ಐ ಪಾಸ್ ಆಗಿದ್ದ ಸಿದ್ದುಗೌಡ: ಸಿದ್ದುಗೌಡ ಕಳೆದ ಒಂದು ವರ್ಷದಿಂದ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯನಾಗಿ ಕೆಲಸ ಮಾಡ್ತಿದ್ದ. ಇದಕ್ಕೂ ಮುಂಚೆ ಫಾರೆಸ್ಟ್ ಗಾರ್ಡ್, ಡಿ.ಆರ್ ಪೋಲಿಸ್ ಹಾಗೂ ಶ್ವಾನದಳ ಸಿಬ್ಬಂದಿಯಾಗಿ ಕಾರ್ಯನಿರ್ವಹಣೆ, ಎಫ್‌ಡಿಎ ನಂತರ 545 ಪಿಎಸ್ಐ ನೇಮಕಾತಿಯಲ್ಲಿಯೂ ಪಾಸ್ ಆಗಿದ್ದನು. ಸಿದ್ದುಗೌಡ ಕಲಬುರಗಿಯ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದನು. 

ಮುದ್ನಾಳ್ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ ನೇಪವೊಡ್ಡಿ ಕಳೆದ ತಿಂಗಳು ಜೂನ್ 4 ರಿಂದ 19ರವರೆಗೆ ರಜೆಯಲ್ಲಿದ್ದ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಬಯಲಿಗೆ ಬಂದಾಗಿನಿಂದಲೂ ಬುಗಿಲಿನಲ್ಲೇ ಸಿದ್ದುಗೌಡ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ. ನೊಂದ ಅಭ್ಯರ್ಥಿಯೊಬ್ಬರು ಸಿದ್ದುಗೌಡ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾನೆಂದೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರುಗಳನ್ನು ನೀಡಿದ್ದರು, ಜಿಲ್ಲಾಡಳಿತ ನೊಂದ ಅಭ್ಯರ್ಥಿಯ ಲಿಖಿತ ದೂರನ್ನು ಸಿಎಂ ಹಾಗೂ ಗೃಹ ಮಂತ್ರಿಗಳಿಗೆ ಕಳುಹಿಸುವ ಮೂಲಕ ಕೈ ತೊಳೆದುಕೊಂಡಿತ್ತು. 

PSI Recruitment Scam; ರಾಜ್ಯಕ್ಕೆ ಟಾಪರ್‌ ಆಗಿದ್ದಾತ ಕೊಟ್ಟಿದ್ದು 40 ಲಕ್ಷ ಲಂಚ!

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದಲ್ಲಿ ಮಧ್ಯವರ್ತಿ ಶಂಕೆ: ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯ ಕಲ್ಯಾಣ ಕರ್ನಾಟಕ ಕೋಟಾದಡಿ 22ನೇ ರ್ಯಾಂಕ್ ಪಡೆದಿದ್ದ ಸಿದ್ದುಗೌಡ ಮೇಲೆ ಹಲವಾರು ಆರೋಪಗಳು ಕೇಳಿಬಂದಿವೆ. ಮೊದಲನೇಯದಾಗಿ ಆತ ಬ್ಲೂಟೂತ್ ಡಿವೈಸರ್ ಬಳಸಿ ಪಿಎಸ್ಐ ಪರೀಕ್ಷೆಯಲ್ಲಿ ಪಾಸ್, ಎರಡನೇಯದಾಗಿ ಹಲವಾರು ಅಕ್ರಮ ಅಭ್ಯರ್ಥಿಗಳಿಗೆ ಈತನೇ ಬ್ಲೂಟೂತ್ ಬಳಸುವ ಬಗ್ಗೆ ತರಬೇತಿ ನೀಡಿದ್ದ. ಜೊತೆಗೆ ಹಲವಾರು ಅಭ್ಯರ್ಥಿಗಳ ಮಧ್ಯವರ್ತಿಯು ಆಗಿದ್ದ ಎಂಬ ಶಂಕೆ ಹಿನ್ನೆಲೆ ಸಿಐಡಿ ಅಧಿಕಾರಿಗಳು ಖೆಡ್ಡಾ ತೋಡಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ನಡೆದ ವಿಚಾರಣೆಗೆ ಕೂಡ ಹಾಜರಾಗಿರುವ ಸಿದ್ದುಗೌಡ, ಕಲಬುರಗಿ ವಿಚಾರಣೆ ಕೇಂದ್ರಕ್ಕೂ ಎರಡು ಬಾರಿ ಹಾಜರಾಗಿದ್ದನು. ಇದರಿಂದಾಗಿ ಸಿಐಡಿ ಅಧಿಕಾರಿಗಳಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪ್ರಕಾಶ್ ರಾಠೋಡ್ ಸಿದ್ದುಗೌಡನನ್ನು ಮುಂದೆ ಬಿಟ್ಟು ಹಿಂದೆ ಹಿಡಿದಿದ್ದಾರೆ.

click me!