
ಬೆಂಗಳೂರು(ಜೂ.18): ತನ್ನ ಪ್ರಿಯತಮೆಗೆ ಮದುವೆ ನಿಶ್ಚಯವಾಗಿದೆ ಎಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಪ್ರಿಯತಮೆ ಸಹ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರು ಸಮೀಪ ನಡೆದಿದೆ. ಪಶ್ಚಿಮ ಬಂಗಾಳ ರಾಜ್ಯ ಮೂಲದ ದೀಪಕ್ ಕುಮಾರ್ (21) ಹಾಗೂ ಎಸ್.ಧಾರಾ (21) ಮೃತ ದುರ್ದೈವಿಗಳು. ತನ್ನ ಮನೆಯಲ್ಲಿ ಗುರುವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ದೀಪಕ್ ಆತ್ಮಹತ್ಯೆ ಮಾಡಿಕೊಂಡರೆ, ಮರುದಿನ ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಧಾರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರ ಮೊಬೈಲ್ಗಳನ್ನು ಪರಿಶೀಲಿಸಿದಾಗ ಪ್ರೇಮ ಪ್ರಸಂಗ ಬೆಳಕಿಗೆ ಬಂದಿದೆ ಎಂದು ಮಾರತ್ತಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.
ಸ್ನೇಹಿತರಿಗೆ ಗುಡ್ ಬೈ:
ಬೆಳ್ಳಂದೂರು ಕೋಡಿಯ ಕಾರ್ಮಿಕರ ಜೋಪಡಿಯಲ್ಲಿ ಪ್ರತ್ಯೇಕವಾಗಿ ಪಶ್ಚಿಮ ಬಂಗಾಳ ಮೂಲದ ದೀಪಕ್ ಹಾಗೂ ಧಾರಾ ನೆಲೆಸಿದ್ದರು. ದೀಪ ಗಾರೆ ಕೆಲಸ ಹಾಗೂ ಧಾರಾ ಹೌಸಿಂಗ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಒಂದೇ ರಾಜ್ಯದವರಾಗಿದ್ದರಿಂದ ಪರಸ್ಪರ ಪರಿಚಯವಾಗಿ ಬಳಿಕ ಪ್ರೇಮವಾಗಿದೆ. ಆದರೆ ಈ ಪ್ರೇಮಕ್ಕೆ ಎರಡು ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಇತ್ತೀಚೆಗೆ ಧಾರಾಳಿಗೆ ಬೇರೊಬ್ಬ ಯುವಕನ ಜತೆ ಮದುವೆಗೆ ಆಕೆಯ ಪೋಷಕರು ಮುಂದಾಗಿದ್ದರು. ಈ ವಿಚಾರ ತಿಳಿದು ದೀಪಕ್ ಬೇಸರಗೊಂಡಿದ್ದ. ಇದೇ ನೋವಿನಲ್ಲೇ ಗುರುವಾರ ಕೆಲಸಕ್ಕೆ ತೆರಳದೆ ಶೆಡ್ನಲ್ಲೇ ಇದ್ದ ದೀಪಕ್, ಮಧ್ಯಾಹ್ನ ತನ್ನ ಗೆಳೆಯರಿಗೆ ಗುಡ್ ಬೈ ಎಂದು ಸಂದೇಶ ಕಳುಹಿಸಿ ನೇಣಿಗೆ ಕೊರಳೊಡ್ದಿದ್ದಾನೆ. ಕೆಲಸ ಮುಗಿಸಿಕೊಂಡು ಆತನ ಸ್ನೇಹಿತರು ಶೆಡ್ಗೆ ಮರಳಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನನ್ನಿಂದ ಮಗಳಿಗೂ ಕ್ಯಾನ್ಸರ್ ಬಂತು... ನೊಂದು ನೇಣಿಗೆ ಶರಣಾದ ಪೊಲೀಸ್ ಅಪ್ಪ..!
ತನ್ನ ಪ್ರಿಯಕರ ದೀಪಕ್ ಆತ್ಮಹತ್ಯೆ ವಿಚಾರ ತಿಳಿದು ನೊಂದ ಧಾರಾ, ಬೆಳ್ಳಂದೂರು ಕೋಡಿ ಸಮೀಪದ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿದ ಸಾರ್ವಜನಿಕರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ನಸುಕಿನಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿವೆ.
ಮೊಬೈಲ್ನಲ್ಲಿತ್ತು ಪ್ರೇಮಿಗಳ ಚಿತ್ರ
24 ತಾಸಿನಲ್ಲಿ ಪ್ರತ್ಯೇಕವಾಗಿ ಸಂಭವಿಸಿದ ದೀಪಕ್ ಹಾಗೂ ಧಾರಾ ಆತ್ಮಹತ್ಯೆ ಘಟನೆಗಳ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸ್ಥಳೀಯವಾಗಿ ವಿಚಾರಿಸಿದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಸಂಗತಿ ಗೊತ್ತಾಗಿದೆ. ಬಳಿಕ ಮೃತ ಪ್ರೇಮಿಗಳ ಮೊಬೈಲ್ಗಳನ್ನು ಪರಿಶೀಲಿಸಿದಾಗ ಜೋಡಿ ಭಾವಚಿತ್ರಗಳು ಪತ್ತೆಯಾಗಿವೆ. ಪ್ರೇಮದ ಕಾರಣಕ್ಕೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ