
ಚಿಕ್ಕಮಗಳೂರು (ಫೆ.12): ನಗರದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಂಗಳಮುಖಿಯರು ₹10 ಸಾವಿರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ ಘಟನೆ ಬುಧವಾರ ನಡೆದಿದೆ. ಚಿಕ್ಕಮಗಳೂರಿನ ರಂಗಣ್ಣನ ಛತ್ರದಲ್ಲಿ ಬುಧವಾರ ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಯುತ್ತಿತ್ತು. ಹಸೆಮಣೆ ಏರಿದ್ದ ವಧು-ವರರಿಗೆ ಅತಿಥಿಗಳು ಶುಭ ಹಾರೈಸುತ್ತಿದ್ದಾಗ ಇಬ್ಬರು ಮಂಗಳಮುಖಿಯರು ಮಂಟಪಕ್ಕೆ ಬಂದಿದ್ದಾರೆ.
ಸಂಪ್ರದಾಯದಂತೆ ಮದುವೆ ಮನೆಯವರು ₹500 ನೀಡಲು ಹೋದಾಗ ನಿರಾಕರಿಸಿದ ಮಂಗಳಮುಖಿಯರು, ಅಸಭ್ಯವಾಗಿ ವರ್ತಿಸಿ,‘ದೊಡ್ಡದಾಗಿ ಮದುವೆ ಮಾಡ್ಕೋತೀರಿ, ₹10000 ಕೊಡೋ ಯೋಗ್ಯತೆ ಇಲ್ವಾ?’ ಎಂದು ಮನೆಯವರನ್ನು ನಿಂದಿಸಿದ್ದಾರೆ. ಈ ಅಸಭ್ಯ ವರ್ತನೆಯನ್ನು ಕೆಲವರು ಪ್ರಶ್ನಿಸಿದಾಗ ‘ಧಮ್ಮಿದ್ದರೆ ಹೊರಗೆ ಬಾ, ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.
ಅಷ್ಟು ದೊಡ್ಡ ಮೊತ್ತ ನೀಡಲು ನಿರಾಕರಿಸಿದಾಗ, ಮಂಗಳಮುಖಿಯರು ಮಂಟಪದ ಮೇಲೆಯೇ ರಂಪಾಟ ಆರಂಭಿಸಿದ್ದಾರೆ.
ಈ ವೇಳೆ, ಮಂಗಳವಾದ್ಯದ ಸದ್ದಿಗಿಂತ ಮಂಗಳಮುಖಿಯರ ಕಿರುಚಾಟವೇ ಹೆಚ್ಚಾಗಿ ಸಂಭ್ರಮದಿಂದ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ, ಕಿರುಚಾಡುತ್ತಲೇ ಅವರು ಅಲ್ಲಿಂದ ಹೊರಟು ಹೋಗಿದ್ದಾರೆ.
ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ