
ದಾವಣಗೆರೆ (ನ.8) : ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಎಂ.ಪಿ.ರಮೇಶ್ ಅವರ ಪುತ್ರ ಎಂ.ಆರ್.ಚಂದ್ರಶೇಖರ ಶ್ವಾಸಕೋಶದ ಒಳಗೆ ನೀರು ಇರುವುದನ್ನು ಡಯಾಟಂ ವರದಿ ದೃಢಪಟ್ಟಿಸಿದ್ದು, ಬದುಕಿದ್ದಾಗಲೇ ಚಂದ್ರು ನಾಲೆಗೆ ಬಿದ್ದಿರುವ ಸಾಧ್ಯತೆಯೇ ಹೆಚ್ಚಾಗಿದೆ.
ಪೊಲೀಸರ ಕೈಸೇರಿದ ಡಯಾಟಮ್ ವರದಿ: ಚಂದ್ರು ಅವರದ್ದು ಸಹಜ ಸಾವು..?
ಚಂದ್ರು ಸಾವು ಅಪಘಾತವಲ್ಲ. ಅದೊಂದು ಷಡ್ಯಂತ್ರ, ಅಮಾನುಷವಾಗಿ ಹಿಂಸೆ ನೀಡಿ, ಕೊಲೆ ಮಾಡಲಾಗಿದೆ ಎಂದು ಶಾಸಕ ರೇಣುಕಾಚಾರ್ಯ, ಸಹೋದರ, ಮೃತನ ತಂದೆ ಎಂ.ಪಿ.ರಮೇಶ ಆರೋಪಿಸಿದ್ದರು. ಹುಬ್ಬಳ್ಳಿ-ದಾವಣಗೆರೆಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಸಲಹೆ ಮೇರೆಗೆ ಪೊಲೀಸ್ ಇಲಾಖೆಯು ಡಯಾಟಂ ಪರೀಕ್ಷೆ ಮಾಡಿಸಿತ್ತು. ನಾಲೆಯಲ್ಲಿ ನಾಲ್ಕು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದ ಚಂದ್ರು ಪಾರ್ಥಿವ ಶರೀರದ ಡಯಾಟಂ ವರದಿಯೂ ಇದೀಗ ಪೊಲೀಸ್ ಇಲಾಖೆ ಕೈ ಸೇರಿದ್ದು, ಚಂದ್ರು ನಾಲೆಗೆ ಬೀಳುವಾಗ ಜೀವಂತ ಇದ್ದ ಎಂಬುದನ್ನು ಆತನ ಶ್ವಾಸಕೋಶದ ಒಳಗೆ ನೀರು ಸೇರಿರುವ ವರದಿಯೇ ಸ್ಪಷ್ಟಪಡಿಸಿದೆ ಎಂಬುದಾಗಿ ಮೂಲಗಳು ಹೇಳುತ್ತಿವೆ.
ಡಯಾಟಂ ಪರೀಕ್ಷೆಯು ವ್ಯಕ್ತಿಯು ಸಹಜವಾಗಿ ಸಾವನ್ನಪ್ಪಿದ್ದೋ ಅಥವಾ ಅಸಹಜ ಸಾವೋ ಎಂಬುದನ್ನು ತಿಳಿಸುವ ವಿಧಾನವಾಗಿದೆ. ಡಯಾಟಂ ಪರೀಕ್ಷೆಯಲ್ಲಿ ಮೃತ ಚಂದ್ರು ಶ್ವಾಸಕೋಶದಲ್ಲಿ ನೀರು, ಕಲ್ಮಶ ಇರುವುದು ದೃಢಪಟ್ಟಿದೆ. ಇದರೊಂದಿಗೆ ಚಂದ್ರು ಪ್ರಕರಣದಲ್ಲಿ ಆತ ನೀರಿನಲ್ಲಿ ಬಿದ್ದ ನಂತರ ಮೃತಪಟ್ಟಿರುವುದು ಒಂದು ಹಂತದಲ್ಲಿ ದೃಢಪಟ್ಟಂತಾಗಿದೆ. ಈ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಎಫ್ಎಸ್ಎಲ್ ಹಾಗೂ ಮರಣೋತ್ತರ ಪರೀಕ್ಷೆ ವರದಿಗಾಗಿ ಪ್ರಕರಣದ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ.
ಈಗ ಬಂದ ಡಯಾಟಂ ವರದಿ ಜೊತೆಗೆ ಎಫ್ಎಸ್ಎಲ್, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿನ ರಹಸ್ಯಕ್ಕೆ ಸ್ಪಷ್ಟಚಿತ್ರಣ ಸಿಗಲಿದೆ. ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ರಮೇಶ್ ಪುತ್ರ ಚಂದ್ರು ಸಾವಿನ ಪ್ರಕರಣ ಹೈಪ್ರೊಫೈಲ್ ಕೇಸ್ ಆಗಿದೆ. ಸ್ವತಃ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ರಾಜ್ಯ ಸರ್ಕಾರವೂ ಕೇಸ್ನ ಬಗ್ಗೆ ನಿಗಾ ವಹಿಸಿದ್ದು, ಎಡಿಜಿಪಿ ಅಲೋಕ್ ಕುಮಾರ್, ಹೊನ್ನಾಳಿ-ನ್ಯಾಮತಿ ರಸ್ತೆಯ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಶವ ಪತ್ತೆಯಾದ ದಿನದಿಂದಲೂ ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ. ಚಂದ್ರು ಸಾವಿನ ತನಿಖೆ ವೈಫಲ್ಯಕ್ಕೆ ಗರಂ ಆಗಿದ್ದೆ; ರೇಣುಕಾಚಾರ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ