
ಹಳಿಯಾಳ (ಜ.20) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಚಾಲಕನ ಬೇಜವಾಬ್ದಾರಿಗೆ ಐದು ವರ್ಷದ ಹಸುಗೂಸು ಬಲಿಯಾದ ದಾರುಣ ಘಟನೆ ನಡೆದಿದೆ.
ಹಳಿಯಾಳ ತಾಲೂಕಿನ ಕಾವಲವಾಡ ಗ್ರಾಮದ ಹಟ್ಟಿ ಓಣಿಯಲ್ಲಿ ಈ ಘೋರ ದುರಂತ ಸಂಭವಿಸಿದೆ. ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ಐದು ವರ್ಷದ ಬಾಲಕ ಹುಜೇರ ಸಲೀಂ ಶಿಗಳ್ಳಿ ಮೇಲೆ ನಿಯಂತ್ರಣ ತಪ್ಪಿದ ಇಕೋ ವ್ಯಾನ್ (ಕೆಎ 65 ಎಂ 3351) ಅತಿವೇಗವಾಗಿ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ಬಾಲಕ ಹುಜೇರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಪಘಾತದ ವೇಳೆ ಬಾಲಕನ ಪಕ್ಕದಲ್ಲೇ ಇದ್ದ ಆತನ ಅಜ್ಜಿ ಆಶಾಬಿ ಗಫೂರ್ಸಾಬ್ ಮುಲ್ಲಾ (60)ಗೂ ಗಂಭೀರ ಗಾಯಗಳಾಗಿದ್ದು, ಕೈ ಮೂಳೆ ಮುರಿತವಾಗಿದೆ. ಕೂಡಲೇ ಬಾಲಕನನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಮಗನನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲುಮುಟ್ಟಿದೆ.
ತರಬೇತಿ ಇಲ್ಲದೆ ಸ್ಟೀರಿಂಗ್ ಹಿಡಿದಿದ್ದ ಚಾಲಕ!
ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಆರೋಪಿ ಗೋರೆಸಾಬ್ ವಲಿಸಾಬ್ ಉಗ್ರಾಣಿ ಎಂಬಾತನಿಗೆ ಯಾವುದೇ ಚಾಲನಾ ತರಬೇತಿ ಇರಲಿಲ್ಲ. ತರಬೇತಿ ಇಲ್ಲದಿದ್ದರೂ ಹೊಸದಾಗಿ ಖರೀದಿಸಿದ್ದ ಕಾರನ್ನು ರಸ್ತೆಗೆ ಇಳಿಸಿದ್ದ ಚಾಲಕ, ನಿಯಂತ್ರಣ ಸಿಗದೆ ನೇರವಾಗಿ ಮನೆಯ ಕಟ್ಟೆಯೊಳಗೆ ಕಾರನ್ನು ನುಗ್ಗಿಸಿದ್ದಾನೆ.
ಪೊಲೀಸ್ ವಶಕ್ಕೆ ಆರೋಪಿ
ಘಟನೆ ನಡೆದ ಬೆನ್ನಲ್ಲೇ ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಗೋರೆಸಾಬ್ನನ್ನು ಬಂಧಿಸಿದ್ದಾರೆ. ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಅವಿವೇಕದ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ