
ಬೆಂಗಳೂರು (ಡಿ.10): ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಅತುಲ್ ಸುಭಾಷ್ ಅವರ ಸಾವಿಗೆ ಕಾರಣವೇನೆಂಬುದು ಇದೀಗ ಬಹಿರಂಗವಾಗಿದೆ. ಅತುಲ್ ಸಾವಿಗೂ ಮುನ್ನ ಬರೆದಿಟ್ಟಿದ್ದ 40 ಪುಟಗಳ ಡೆತ್ ನೋಟ್ನಲ್ಲಿ ತನ್ನ ಕರುಣಾಜನಕ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾನೆ.
ಹೌದು, ಬೆಂಗಳೂರಿನ ಮಾರತಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಉತ್ತರ ಭಾರತ ಮೂಲದ ಅತುಲ್ ಸುಭಾಷ್ ಸಾವಿಗೆ ಕಾರಣವೇನೆಂದು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆಗ ಸ್ಥಳದಲ್ಲಿ ಲಭ್ಯವಾದ 40 ಪುಟಗಳ ಡೆತ್ ನೋಟ್ನಲ್ಲಿ ತನೇಕೆ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಇಂಚಿಂಚು ಮಾಹಿತಿ ಬರೆದಿಟ್ಟಿದ್ದಾನೆ. ಅದರಲ್ಲಿ ಹೆಂಡತಿ, ಹೆಂಡತಿಯ ಅಮ್ಮ, ಅಣ್ಣ, ಹಾಗೂ ಹೆಂಡತಿಯ ಅಂಕಲ್ ಸೇರಿ ಎಲ್ಲರೂ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಬೆಂಗಳೂರಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಮೇಲೆ ಆತನ ಮಡದಿ ಬರೋಬ್ಬರಿ 9 ಕೇಸ್ಗಳನ್ನು ಹಾಕಿದ್ದರು ಎಂಬುದನ್ನು ತಿಳಿಸಿದ್ದಾರೆ. ದೆಹಲಿಯಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿ ತನ್ನ ಗಂಡನ ಮೇಲೆ ಕೊಲೆಯತ್ನ, ಅಸಮರ್ಪಕ ಲೈಂಗಿಕ ಕ್ರಿಯೆ, ವರದಕ್ಷಿಣೆ ಸೇರಿದಂತೆ 9 ಪ್ರಕರಣ ದಾಖಲಿಸಿದ್ದಳು. ಇನ್ನು ಪ್ರತಿ ಬಾರಿ ಕೋರ್ಟ್ ವಿಚಾರಣೆಗೂ ಅತುಲ್ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೋಗಿ ಬರಬೇಕಿತ್ತು. ಈ ವರ್ಷದ 12 ತಿಂಗಳಲ್ಲಿ 40 ಬಾರಿ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಬಂದಿದೆ. ಪ್ರತಿ ವಿಚಾರಣೆಗೆ ವಿಮಾನದಲ್ಲಿ ಹೋಗಿ ಬರಲು ಕನಿಷ್ಠ 3 ದಿನಗಳ ಸಮಯದಂತೆ ಬರೋಬ್ಬರಿ 120 ದಿನಗಳನ್ನು ಕೋರ್ಟ್ ಕೇಸಿಗಾಗಿ ಉತ್ತರ ಪ್ರದೇಶಕ್ಕೆ ಹೋಗಿ ಬರುವುದಕ್ಕೆಂದೇ ಕಳೆದಿದ್ದಾನೆ. ಕೆಲಸದ ಸ್ಥಳದಲ್ಲಿ ರಜೆ ಪಡೆದುಕೊಂಡು ಸಾವಿರಾರು ರೂ. ಹಣ ಖರ್ಚು ಮಾಡಿಕೊಂಡು ಕೋರ್ಟ್ ಕೇಸಿಗೆ ಹೋಗಿ ಬರುವುದು ತುಂಬಾ ತ್ರಾಸದಾಯಕ ಕೆಲಸವವಾಗಿತ್ತು. 2024ರ ಅರ್ಧ ವರ್ಷವನ್ನು ಕಾನೂನು ಹೋರಾಟದಲ್ಲಿಯೇ ಕಳೆದಿದ್ದರು. ಇದರಿಂದ ಅತುಲ್ ಬೇಸತ್ತು ಹೋಗಿದ್ದರು.
ಇದನ್ನೂ ಓದಿ: ಹೆಂಡ್ತಿ ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಗಂಡ; ಮಗಳಿಗೊಂದು ಗಿಫ್ಟ್ ತಂದಿಟ್ಟ!
ಎರಡು ವರ್ಷದಿಂದ ಮಗನ ಮುಖ ನೋಡಲು ಬಿಡದ ಹೆಂಡತಿ:
ಅತುಲ್ ಹೇಳಿಕೊಳ್ಳುವಂತೆ ತನ್ನದೇನೂ ತಪ್ಪಿರದಿದ್ದರೂ ಹೆಂಡತಿ ಡಿವೋರ್ಸ್ಗಾಗಿ 3 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದಳು ಎಂದು ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಿದ್ದಾನೆ. ಇನ್ನು ಕಳೆದ ಎರಡು ವರ್ಷದಿಂದ ತಾನು ಜನ್ಮ ನೀಡಿದ ಮಗನ ಮುಖವನ್ನು ನೋಡುವುದಕ್ಕೂ ಹೆಂಡತಿ ಅವಕಾಶ ಮಾಡಿಕೊಟ್ಟಿರಲಿಲ್ಲ. ಮಗನಿಗೆ 4 ವರ್ಷಗಳಾಗಿದ್ದರಿಂದ ಮನೆಯಿಂದ ಹೊರಗೂ ಕಳಿಸುತ್ತಿರಲಿಲ್ಲ. ಯಾರಾದರೂ ಒಬ್ಬರು ಮಗುವಿನ ಜೊತೆಗಿರುತ್ತಿದ್ದರು. ಅವರು ತನ್ನ ಮಗನ ಮುಖ ನೋಡಲೂ ಬಿಡುತ್ತಿರಲಿಲ್ಲವಂತೆ. ಈ ಎಲ್ಲ ಕಾರಣಗಳಿಂದ ಮನನೊಂದ ಅತುಲ್ ಸುಭಾಷ್ 'Justice is Due' ಎಂಬ ಫಲಕವನ್ನು ತನ್ನ ಕೊರಳಿಗೆ ಹಾಕಿಕೊಂಡು ಮನೆಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ದೊಡ್ಡ ಹುದ್ದೆ, ಲಕ್ಷ ರೂ. ಸಂಬಳ.. ಈ ಲಿಂಕ್ ಕ್ಲಿಕ್ ಮಾಡಿದ್ರೆ ಬದುಕು ಬೀದಿಗೆ!
ಅತುಲ್ ಸಂಬಂಧಿಕರಿಗೆ ಮಾರತಹಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದು, ಅವರು ಬಂದ ನಂತರ ಮರಣೋತ್ತರ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಆದರೆ, ಈ ಕೇಸು ಯಾವ ರೀತಿಯಾಗಿ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಗಂಡ-ಹೆಂಡತಿ ಜಗಳದಲ್ಲಿ ಒಂದು ಜೀವವೇ ಬಲಿಯಾಗಿದ್ದು ಮಾತ್ರ ಸಮಾಜವೇ ಮರುಕ ಪಡುವಂತಹ ಘಟನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ