Cyber Crime: ಸೈಬರ್‌ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್‌ ಚಂದ್ರಶೇಖರ್‌

Kannadaprabha News   | Asianet News
Published : Feb 24, 2022, 07:48 AM ISTUpdated : Feb 24, 2022, 10:11 AM IST
Cyber Crime: ಸೈಬರ್‌ ದಾಳಿ ಸರ್ಕಾರದ ಗಮನಕ್ಕೆ ತನ್ನಿ: ರಾಜೀವ್‌ ಚಂದ್ರಶೇಖರ್‌

ಸಾರಾಂಶ

*   ಡಿಜಿಟಲ್‌ ಇಂಡಿಯಾಗೆ ಕೈಜೋಡಿಸಿ *   ಐಟಿ ಕಂಪನಿಗಳಿಗೆ ಮನವಿ ಕೇಂದ್ರ ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಮನವಿ *   ಬೆಂಗ್ಕೂರಲ್ಲಿ ಐಬಿಎಂ ಸೆಕ್ಯೂರಿಟಿ ಕಮಾಂಡ್‌ ಸೆಂಟರ್‌ ಉದ್ಘಾಟನೆ  

ಬೆಂಗಳೂರು(ಫೆ.24): ಸಂಸ್ಥೆಗಳು ತಮ್ಮ ಮೇಲೆ ನಡೆದ ಯಾವುದೇ ಸೈಬರ್‌ ದಾಳಿಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬ ನಿಯಮ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ಕೇಂದ್ರದ ಇಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಯ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹೇಳಿದ್ದಾರೆ.

ಭಾರತದ ಸೈಬರ್‌ ಲೋಕ ಸುರಕ್ಷಿತ ಮತ್ತು ನಂಬಿಕೆಗೆ ಅರ್ಹ ಎಂಬುದನ್ನು ಖಾತರಿ ಪಡಿಸಲು ಹಾಗೂ ಡಿಜಿಟಲ್‌ ಇಂಡಿಯಾ(Digital India) ಯೋಜನೆ ಸಂಪೂರ್ಣವಾಗಿ ಜಾರಿಗೊಳ್ಳಲು ಐಬಿಎಂ(IBM) ಭಾರತ ಸರ್ಕಾರದ(Government of India) ಜೊತೆ ಕೈ ಜೋಡಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿ ಐಬಿಎಂ ಏಷ್ಯಾ ಫೆಸಿಫಿಕ್‌ ವಲಯವನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರಿನ ಎಂಬಸ್ಸಿ ಗಾಲ್ಫ್‌ ಲಿಂಕ್‌ನಲ್ಲಿರುವ ತನ್ನ ಕ್ಯಾಂಪಸ್‌ನಲ್ಲಿ ಆರಂಭಿಸುತ್ತಿರುವ ‘ಐಬಿಎಂ ಸೆಕ್ಯೂರಿಟಿ ಕಮಾಂಡ್‌ ಸೆಂಟರ್‌’ ಅನ್ನು ವರ್ಚುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.

ಐಬಿಎಂ ಸ್ಥಾಪಿಸಿರುವ ಸೆಕ್ಯೂರಿಟಿ ಕಮಾಂಡ್‌ ಸೆಂಟರ್‌ ಹಬ್‌ ಸೈಬರ್‌(IBM Security Command Center) ಭದ್ರತೆಯ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೇ ಸೈಬರ್‌ನ ಸುರಕ್ಷತೆ ಬಳಕೆಗೆ ಅಗತ್ಯವಾದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಒದಗಿಸಬೇಕು. ಇಂದು ಅಬಾಲವೃದ್ಧರಾದಿಯಾಗಿ ಎಲ್ಲ ವರ್ಗದ ಜನರು ಸೈಬರ್‌ ಬಳಸುತ್ತಿದ್ದು, ನೆರೆಯ ದೇಶಗಳಿಂದ ಆಗುತ್ತಿರುವ ಸೈಬರ್‌ ದಾಳಿಯನ್ನು(Cyber Attacks) ಹತ್ತಿಕ್ಕುವುದು ಅತಿ ಮುಖ್ಯ ಎಂದು ಹೇಳಿದರು.

ಸರ್ಕಾರದ ಗಮನಕ್ಕೆ ಕಡ್ಡಾಯ:

ಸಂಸ್ಥೆಗಳು ತಮ್ಮ ಮೇಲೆ ನಡೆದ ಯಾವುದೇ ಸೈಬರ್‌ ದಾಳಿಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬ ನಿಯಮ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ಸೈಬರ್‌ ದಾಳಿಯ ಪ್ರಕರಣಗಳನ್ನು ಮುಚ್ಚಿಡದೇ ಸರ್ಕಾರಕ್ಕೆ ತಿಳಿಸಬೇಕು. ಸೈಬರ್‌ ಲೋಕದಲ್ಲಿನ ಅಪಾಯದ ಸಂಪೂರ್ಣ ಅರಿವು ಸರ್ಕಾರಕ್ಕೆ ಇರಬೇಕು. 100 ಮಿಲಿಯನ್‌ಗಿಂತ ಹೆಚ್ಚು ಸೈಬರ್‌ ಪ್ರಕರಣಗಳನ್ನು ಭಾರತೀಯ ಕಂಪ್ಯೂಟರ್‌ ತುರ್ತು ಸ್ಪಂದನೆ ತಂಡ ದಾಖಲಿಸಿಕೊಂಡಿದೆ. ಅತಿ ಹೆಚ್ಚು ಸೈಬರ್‌ ಅಪರಾಧ ಘಟಿಸುವ ದೇಶಗಳಲ್ಲಿ ಭಾರತಕ್ಕೆ(India) ಎರಡನೇ ಸ್ಥಾನವಿದೆ ಎಂದು ಸಚಿವರು ಹೇಳಿದರು.

Education in India: ಕೌಶಲ್ಯಾಧಾರಿತ ಶಿಕ್ಷಣವೇ ದೇಶದ ಭವಿಷ್ಯ: ಕೇಂದ್ರ ಸಚಿವ ಆರ್‌ಸಿ

ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪಾಟೀಲ್‌ ಮಾತನಾಡಿ, ಉದ್ದಿಮೆಗಳಿಗೆ ಸೈಬರ್‌ ದಾಳಿಯ ಆತಂಕ ಈ ಹಿಂದಿಗಿಂತ ಹೆಚ್ಚಿದ್ದು ಸೈಬರ್‌ ಸುರಕ್ಷತೆ ಜಾಗತಿಕ ಸವಾಲಾಗಿದೆ. ಇದನ್ನು ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಸೈಬರ್‌ ಸುರಕ್ಷತೆಯ ವಲಯದಲ್ಲಿ ಹೊಂದಾಣಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಐಬಿಎಂ ಸೈಬರ್‌ ಸೆಕ್ಯುರಿಟಿ ಹಬ್‌ ಸ್ಥಾಪಿಸಲಾಗಿದ್ದು, ಸೈಬರ್‌ ದಾಳಿಗೆ ತುತ್ತಾದ ಸಂದರ್ಭದಲ್ಲಿ ಅತಿ ವೇಗವಾಗಿ ಪರಿಣಾಮಕಾರಿ ಮತ್ತು ಪಾರದರ್ಶಕ ರೀತಿಯಲ್ಲಿ ಸ್ಪಂದಿಸಲು ನಮ್ಮ ಬಳಕೆದಾರರಿಗೆ ನೆರವಾಗಲಿದೆ ಎಂದು ಹೇಳಿದರು.

24 ತಾಸು ರಕ್ಷಣೆ

ಐಬಿಎಂ ಸೆಕ್ಯುರಿಟಿ ಕಮಾಂಡ್‌ ಹಬ್‌ ನಿರ್ಮಾಣಕ್ಕಾಗಿ ಭಾರಿ ಹಣ ವೆಚ್ಚ ಮಾಡಿದ್ದು ಸೈಬರ್‌ ದಾಳಿಯನ್ನು ಎದುರಿಸುವುದು ಮತ್ತು ಸೈಬರ್‌ ದಾಳಿಯನ್ನು ಎದುರಿಸುವ ತಂತ್ರಗಳ ತರಬೇತಿಗೆ ಗಮನ ನೀಡಲಿದೆ. ದಿನದ ಇಪ್ಪತ್ತ ನಾಲ್ಕು ಗಂಟೆಯೂ ತನ್ನ ಬಳಕೆದಾರರಿಗೆ ಸೈಬರ್‌ ದಾಳಿಯಿಂದ ರಕ್ಷಣೆ ನೀಡಲು ಶ್ರಮಿಸಲಿದೆ.

ಇದೇ ವೇಳೆ ಐಬಿಎಂ ಸೈಬರ್‌ ಭದ್ರತೆಯ ತನ್ನ ಜಾಗತಿಕ ವಿಶ್ಲೇಷಣಾ ವರದಿಯನ್ನು ಬಿಡುಗಡೆ ಮಾಡಿದ್ದು ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್‌ ದಾಳಿ ಏಷ್ಯಾ ಫೆಸಿಫಿಕ್‌ ಪ್ರಾಂತ್ಯದಲ್ಲಿ ನಡೆಯುತ್ತಿದೆ ಎಂದು ಹೇಳಿದೆ. 2021ರಲ್ಲಿ ಜಗತ್ತಿನಲ್ಲಿ ನಡೆದ ಸೈಬರ್‌ ದಾಳಿಗಳಲ್ಲಿ ಶೇ. 26 ಏಷ್ಯಾ ಫೆಸಿಫಿಕ್‌ ಭಾಗದಲ್ಲಿ ನಡೆದಿದೆ. ಜಪಾನ್‌, ಆಸ್ಪ್ರೇಲಿಯಾ ಮತ್ತು ಭಾರತದಲ್ಲಿ ಹೆಚ್ಚು ಸೈಬರ್‌ ದಾಳಿಗಳು ಘಟಿಸಿವೆ. ಈ ಹಿಂದೆ ಉತ್ತರ ಅಮೆರಿಕ ಮತ್ತು ಯೂರೋಪ್‌ ಭಾಗದಲ್ಲಿ ಹೆಚ್ಚು ಸೈಬರ್‌ ದಾಳಿ ನಡೆಯುತ್ತಿತ್ತು. ಹಣಕಾಸು ಸೇವೆ ನೀಡುವ ಸಂಸ್ಥೆಗಳು ಮತ್ತು ಉತ್ಪಾದನಾ ವಲಯದಲ್ಲಿರುವ ಸಂಸ್ಥೆಗಳ ಮೇಲೆ ಹೆಚ್ಚು ದಾಳಿ ನಡೆಯುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ