Bengaluru: ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್‌

Kannadaprabha News   | Asianet News
Published : Feb 24, 2022, 04:59 AM IST
Bengaluru: ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್‌

ಸಾರಾಂಶ

*   ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಕೃತ್ಯ *   ಹಣದಾಸೆಗೆ ಕಳ್ಳತನ ಕೃತ್ಯಕ್ಕಿಳಿದಿದ್ದ ಆರೋಪಿ *   ವ್ಯಾಪಾರಿಗಳ ಸೋಗಲ್ಲಿ ಅಕ್ಕಸಾಲಿಗರಿಗೆ ವಂಚಿಸಿದ್ದವರ ಸೆರೆ

ಬೆಂಗಳೂರು(ಫೆ.24): ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಹೋಗಿ ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ(Gold) ದೋಚಿದ್ದ(Robbery) ಕಿಡಿಗೇಡಿಯೊಬ್ಬ ಜ್ಞಾನಭಾರತಿ ಠಾಣೆ ಪೊಲೀಸರಿಗೆ(Police) ಸಿಕ್ಕಿಬಿದ್ದಿದ್ದಾನೆ.

ಬಾಲಾಜಿ ಲೇಔಟ್‌ ನಿವಾಸಿ ಕಿರಣ್‌ ಕುಮಾರ್‌ ಬಂಧಿತ. ಆರೋಪಿಯಿಂದ(Accused)9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ನ 6ನೇ ಹಂತದ ರಾಜ್ಯ ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಶಾಂತಮ್ಮ(70) ಅವರ ಮನೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ. ಪ್ರಕರಣದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಲಕ್ಷ್ಮಣ್‌ ನಾಯಕ್‌ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru Crime: ಮನೆ ಮಾಲೀಕರ ಕಟ್ಟಿಹಾಕಿ 88 ಲಕ್ಷ ದೋಚಿದ ಖದೀಮರು

ತಮಿಳುನಾಡು(Tamil Nadu) ಮೂಲದ ಕಿರಣ್‌, ಬಾಲಾಜಿ ಲೇಔಟ್‌ನಲ್ಲಿ ತನ್ನ ಗೆಳತಿ ಜತೆ ನೆಲೆಸಿದ್ದಾನೆ. ಕ್ಯಾಬ್‌ ಚಾಲಕನಾಗಿರುವ ಆತ, ಹಣದಾಸೆಗೆ ಕಳ್ಳತನ(Theft) ಕೃತ್ಯಕ್ಕಿಳಿದಿದ್ದ. ಆತನ ಮೇಲೆ ರಾಜಗೋಪಾಲ ನಗರ ಹಾಗೂ ವಿಜಯಪುರ ಠಾಣೆಗಳಲ್ಲಿ ಪ್ರಕರಣಗಳಿವೆ. ಬಾಡಿಗೆ ನೆಪದಲ್ಲಿ ಮನೆಗಳಿಗೆ ಹೋಗಿ ವೃದ್ಧ ದಂಪತಿಗಳಿದ್ದರೆ ಬೆದರಿಸಿ ಹಣ ಸುಲಿಗೆ ಮಾಡುವುದು ಆತನ ಕೃತ್ಯವಾಗಿತ್ತು. ಅಂತೆಯೇ ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶಾಂತಮ್ಮ ಅವರನ್ನು ಬೆದರಿಸಿ ಆತ ಚಿನ್ನಾಭರಣ ದೋಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಂಚು ಹಾಕಿ ಕೃತ್ಯ:

ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಾಂತಮ್ಮ ಅವರು, ತಮ್ಮ ಪತಿ ಜತೆ ವಿಶ್ವೇಶ್ವರಯ್ಯ ಲೇಔಟ್‌ನ 6ನೇ ಹಂತದಲ್ಲಿ ನೆಲೆಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿಯಲ್ಲಿ ವೃದ್ಧ ದಂಪತಿ ನೆಲೆಸಿದ್ದು, ಇನ್ನೆರಡು ಅಂತಸ್ತಿನ ಮನೆಗಳನ್ನು ಬಾಡಿಗೆ ಕೊಟ್ಟಿದ್ದಾರೆ. ಕೆಲ ದಿನಗಳಿಂದ ಅವರ ಎರಡನೇ ಮಹಡಿಯ ಮನೆ ಖಾಲಿ ಇತ್ತು. ಆಗ ಬಾಡಿಗೆ ಕೇಳುವ ನೆಪದಲ್ಲಿ ಶಾಂತಮ್ಮ ಅವರ ಮನೆಗೆ ಹೋದ ಕಿರಣ್‌, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಬಂದಿದ್ದ. ಹತ್ತು ದಿನಗಳ ಬಳಿಕ ಮತ್ತೆ ಅವರ ಮನೆಗೆ ಹೋದ ಆತ, ಬಾಡಿಗೆ ಮನೆ ತೋರಿಸುವಂತೆ ಎರಡನೇ ಮಹಡಿಗೆ ಶಾಂತಮ್ಮ ಅವರನ್ನು ಕರೆದೊಯ್ದಿದ್ದಾನೆ. ಆಗ ಅವರ ಕೈ-ಕಾಲು ಕಟ್ಟಿಹಾಕಿ ಆರೋಪಿ ಚಿನ್ನಾಭರಣ ದೋಚಿದ್ದ. ಎಷ್ಟುಹೊತ್ತಾದರೂ ಪತ್ನಿ ಮನೆಗೆ ಬಾರದೆ ಹೋದಾಗ ಶಾಂತಮ್ಮ ಅವರ ಪತಿ, ಸ್ಥಳೀಯರ ನೆರವು ಪಡೆದು ಎರಡನೇ ಮಹಡಿಗೆ ತೆರಳಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪಾರಿಗಳ ಸೋಗಲ್ಲಿ ಅಕ್ಕಸಾಲಿಗರಿಗೆ ವಂಚಿಸಿದ್ದವರ ಸೆರೆ

ಬೆಂಗಳೂರು: ಚಿನ್ನಾಭರಣ ವ್ಯಾಪಾರಿಗಳ ಸೋಗಿನಲ್ಲಿ ಒಡವೆ ಖರೀದಿಸುವುದಾಗಿ ನಂಬಿಸಿ ತಮ್ಮ ಅಂಗಡಿಗೆ ಕರೆಸಿಕೊಂಡು ಅಕ್ಕಸಾಲಿಗರೊಬ್ಬರಿಂದ ಆಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ಮೂವರು ಚಾಲಾಕಿ ಖದೀಮರು ಮಾಗಡಿ ರಸ್ತೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Chikkaballapur Crime: ಮದುವೆಗೆ ಬಂದು ಒಡವೆ ಎಗರಿಸಿದ ಮಹಿಳೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲಿಪುರ ಗ್ರಾಮದ ಸೈಯದ್‌ ಉಜ್ಜೂರ್‌ ಹೈದರ್‌, ಫರ್ಹಾನ್‌ ಅಬ್ಬಾಸ್‌ ಹಾಗೂ ಸೈಯದ್‌ ಮುತ್ತಾಜ್‌ ಬಂಧಿತರು(Arrest). ಆರೋಪಿಗಳಿಂದ 15 ಲಕ್ಷ ಮೌಲ್ಯದ 316 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕಾಟನ್‌ಪೇಟೆಯ ಮಂಡಲ್‌ ಎಂಬುವರಿಗೆ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಜಿ.ಟಿ.ಶ್ರೀನಿವಾಸ್‌ ನೇತೃತ್ವದ ತಂಡವು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಿನ ಅಂಗಡಿ ತೆರೆದು ಗಾಳ:

ಆರೋಪಿಗಳು, ವ್ಯಾಪಾರಿಗಳ ಸೋಗಿನಲ್ಲಿ ಅಕ್ಕಸಾಲಿಗರಿಗೆ ವಂಚಿಸಿ ಒಡವೆ ದೋಚುವ ಸಂಚು ರೂಪಿಸಿದ್ದರು. ಅಂತೆಯೇ ಮೆಜೆಸ್ಟಿಕ್‌ಗೆ ಬಂದು ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ ಆರೋಪಿಗಳು, ಮೊದಲು ರಾಜಾಜಿನಗರದ ಭಾಷ್ಯಂ ವೃತ್ತ ಸಮೀಪ ಅಂಗಡಿ ಬಾಡಿಗೆ ಪಡೆದಿದ್ದರು. ಆನಂತರ ಕಾಟನ್‌ಪೇಟೆಗೆ ತೆರಳಿ ಅಕ್ಕಸಾಲಿಗ ಮಂಡಲ್‌ ಅವರನ್ನು ಭೇಟಿಯಾದ ಹೈದರ್‌, ಅಬ್ಬಾಸ್‌ ಹಾಗೂ ಮುತ್ತಾಜ್‌, ತಾವು ಹೊಸದಾಗಿ ಆಭರಣ ಅಂಗಡಿ ಆರಂಭಿಸಿದ್ದು. ನಮಗೆ ಐದು ನೆಕ್ಲಸ್‌ಗಳನ್ನು ಮಾಡಿಕೊಡುವಂತೆ ಹೇಳಿ ಆರ್ಡರ್‌ ಕೊಟ್ಟಿದ್ದರು. ನೆಕ್ಲಸ್‌ಗಳ ತಯಾರಿಸಿದ ಬಳಿಕ ಮಂಡಲ್‌, ಭಾಷ್ಯಂ ವೃತ್ತದಲ್ಲಿದ್ದ ಆರೋಪಿಗಳ ಮಳಿಗೆಗೆ ಬಂದಿದ್ದಾರೆ. ಆಗ ಆ ಒಡವೆಗಳನ್ನು ಪರಿಶೀಲಿಸಿ ಬರುವುದಾಗಿ ಅಬ್ಬಾಸ್‌, ಮಂಡಲ್‌ ಅವರಿಂದ ನೆಕ್ಲೆಸ್‌ ಪಡೆದು ಹೊರ ಹೋಗಿದ್ದಾನೆ. ಇದಾದ ನಂತರ ಗೆಳೆಯನನ್ನು ಕರೆತರುವುದಾಗಿ ಹೇಳಿ ಮತ್ತಿಬ್ಬರು ಕಾಲ್ಕಿತ್ತಿದ್ದರು.

ಎಷ್ಟು ಹೊತ್ತಾದರೂ ಆರೋಪಿಗಳು ಬಾರದೆ ಹೋದಾಗ ಅನುಮಾನಗೊಂಡ ಮಂಡಲ್‌, ಆರೋಪಿಗಳಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಅವರ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಕೊನೆಗೆ ತಾವು ಮೋಸ ಹೋಗಿರುವುದು ಅರಿತ ಮಂಡಲ್‌, ತಕ್ಷಣವೇ ಮಾಗಡಿ ರಸ್ತೆ ಠಾಣೆ ಪೊಲೀಸರಿಗೆ ದೂರು ನೀಡಿದರು. ಅಂತೆಯೇ ತನಿಖೆ ನಡೆಸಿದ ಪೊಲೀಸರು, ಅಂತಿಮವಾಗಿ ಒಬ್ಬೊಬ್ಬರಾಗಿ ವಂಚಕರನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ