Udupi: ಇವನೆಂಥಾ ಕಳ್ಳ ಮಾರಾಯ್ರೇ: ಎಂಟು ಲಕ್ಷ ಕದ್ದವ ಒಂದು ಲಕ್ಷ ಯಾಕೆ ಬಿಟ್ಟು ಹೋದ?

By Govindaraj SFirst Published May 11, 2022, 1:44 PM IST
Highlights

ಇಲ್ಲೊಬ್ಬ ಕಳ್ಳ ಕುತೂಹಲಕಾರಿ ರೀತಿಯಲ್ಲಿ ಹಣ ದೋಚಿದ್ದಾನೆ. ಕಳ್ಳತನಕ್ಕೆಂದು ಬರುವ ಆಸಾಮಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುವುದನ್ನು ಕೇಳಿದ್ದೇವೆ. ಆದರೆ ಈ ಕಳ್ಳ ಹಾಗಲ್ಲ. ಈ ಚೋರನ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತೆ. 

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ 

ಉಡುಪಿ (ಮೇ.11): ಇಲ್ಲೊಬ್ಬ ಕಳ್ಳ (Thief) ಕುತೂಹಲಕಾರಿ ರೀತಿಯಲ್ಲಿ ಹಣ (Money) ದೋಚಿದ್ದಾನೆ. ಕಳ್ಳತನಕ್ಕೆಂದು ಬರುವ ಆಸಾಮಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುವುದನ್ನು ಕೇಳಿದ್ದೇವೆ. ಆದರೆ ಈ ಕಳ್ಳ ಹಾಗಲ್ಲ. ಈ ಚೋರನ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತೆ. ಈ ಘಟನೆ ನಡೆದಿರುವುದು ಉಡುಪಿ (Udupi) ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ (Malpe Police Station) ವ್ಯಾಪ್ತಿಯಲ್ಲಿ. ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರು ಅಂದರೆ ಕೋಟ್ಯಂತರ ರೂಪಾಯಿ ವ್ಯವಹಾರ ಇರುತ್ತೆ. ಜಗತ್ತು ಎಷ್ಟೇ ಆಧುನಿಕ ವಾಗಿದ್ದರೂ ಬಂದರಿನಲ್ಲಿ ಇವತ್ತಿಗೂ ವಿಶ್ವಾಸದಲ್ಲಿ ವ್ಯವಹಾರ ನಡೆಯುತ್ತೆ.

ಕೆಲವೊಮ್ಮೆ ಮೀನು ಮಾರಾಟವಾದ ನಂತರ ಲಕ್ಷಾಂತರ ರೂಪಾಯಿಯನ್ನು ಸಾಮಾನ್ಯ ಮೀನುಗಾರನು ಕೂಡ ಮಾಮೂಲಿ ಚೀಲದಲ್ಲಿ ಹಾಕಿಕೊಂಡು ಓಡಾಡುತ್ತಿರುತ್ತಾನೆ. ಆದರೆ ಕಾಲ ಬದಲಾಗಿದೆ, ವಿಶ್ವಾಸದ್ರೋಹ ಹೆಚ್ಚಾಗಿದೆ . ಈ ಪ್ರಕರಣದಲ್ಲೂ ಕೂಡ ಆಗಿರೋದು ಅದೇ! ಮಲ್ಪೆಯ ಕೊಳ ಎಂಬಲ್ಲಿ ಮೀನುಗಾರಿಕಾ ಬಂದರಿನಲ್ಲಿ ಬೋಟ್‌ವೊಂದರ ರೈಟರ್ ಆಗಿ ಕೆಲಸ ಮಾಡುತ್ತಿರುವ ಗದಗದ ಕಳಸಾಪುರ ಗ್ರಾಮದ ಸುರೇಶ ಲಮಾಣಿ ಕಳ್ಳತನದಿಂದ ಕಂಗಾಲಾಗಿರುವ ವ್ಯಕ್ತಿ. ಈತ  ಈ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಲು ಬಂದಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ಯಾಕೆ? ಸ್ಪಷ್ಟ ಕಾರಣ ಕೊಟ್ಟ ಪ್ರಮೋದ್ ಮಧ್ವರಾಜ್

ಸುರೇಶ ಲಮಾಣಿ ವಾಮನ ಕಾಂಚನ್ ಎಂಬವರ ಪಾಲುದಾರಿಕೆಯ SDDK ಮೀನು ಪಾರ್ಟಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಈ ಪಾರ್ಟಿ ವ್ಯವಹಾರ ನಡೆಸಲು ಯಾವುದೇ ಸ್ವಂತ  ಕಚೇರಿ ಹೊಂದಿರದ ಕಾರಣ, ದೈನಂದಿನ ಹಣವನ್ನು ಸುರೇಶ್ ತನ್ನ ಬಳಿಯೇ ಇರಿಸಿಕೊಳ್ಳುತ್ತಾರೆ. ಮೇ.7 ಮತ್ತು 8 ರಂದು ನಡೆಸಿದ ಮೀನು ವ್ಯಾಪಾರದಿಂದ ಬಂದ 10.30 ಲಕ್ಷ ರುಪಾಯಿ ಹಣವನ್ನು ಕೂಡ ಹಾಗೆ ತನ್ನ ಬಳಿ ಇಟ್ಟುಕೊಂಡಿದ್ದರು. ಈ ಮೊತ್ತವನ್ನು ನಂತರ ಮಾಲೀಕಕ ವಾಮನ ಅವರಿಗೆ ನೀಡಲು ನಿರ್ಧರಿಸಿ ಕೊಳ ಎಂಬಲ್ಲಿರುವ ತಮ್ಮ ರೂಮಿನಲ್ಲಿ ಬಾಕ್ಸಿನ ಒಳಗೆ ಇಟ್ಟು ಬೀಗ ಹಾಕಿದ್ದರು.

ಮರುದಿನ ಬೆಳಿಗ್ಗೆ 4:30 ರ ಸುಮಾರಿಗೆ ಮೀನುಗಾರಿಕೆಗಾಗಿ ಮಲ್ಪೆ ಬಂದರಿಗೆ ಹೋಗಿದ್ದರು. ಬಳಿಕ ಅವರು ಮೀನುಗಾರಿಕೆ ಕೆಲಸ ಮುಗಿಸಿ ವಾಪಾಸು ಬೆಳಿಗ್ಗೆ 9:30 ರ ವೇಳೆಗೆ ರೂಮಿನ ಬಳಿ ಬಂದು ನೋಡುವಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ.  ಬೆಳಿಗ್ಗೆ ಸುರೇಶ್ ತನ್ನ ರೂಮಿನ ಬೀಗ ಮುರಿದು ಒಳಗೆ ನೋಡಿದಾಗ ಬಾಕ್ಸ್‌ನಲ್ಲಿ ಇಟ್ಟಿದ್ದ 10,30,000 ರೂ. ಪೈಕಿ 8,90,000 ರೂ. ವನ್ನು ಕಳವು ಮಾಡಿ ಉಳಿದ ಹಣವನ್ನು ಕಳ್ಳನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬಾಕಿ ಹಣ  1.40 ಲಕ್ಷ ರುಪಾಯಿ ಅದೇ ಬಾಕ್ಸ್‌ನಲ್ಲಿ ಇದ್ದಿದ್ದ ಕಂಡು ನಿಜಕ್ಕೂ ಅಚ್ಚರಿ ಪಡುವಂತಾಗಿದೆ.

Udupi: ಮನೆಯೊಂದರಲ್ಲಿ ತಾಯಿ ಮಗಳ ಶವ ಪತ್ತೆ, ಸಾವಿನ ಹಿಂದೆ ಅನುಮಾನದ ಹುತ್ತ

ಕಳ್ಳ ಯಾಕೆ ಹೀಗೆ ಮಾಡಿದನೋ ಗೊತ್ತಿಲ್ಲ? ಕದಿಯುವಾಗ ಈ ಬಡ ಕಾರ್ಮಿಕನ ಬಗ್ಗೆ ಕನಿಕರ ಬಂದಿರಬಹುದು, ಅಥವಾ ತನಗೆ ಬೇಕಾದಷ್ಟು ಹಣವನ್ನು ಮಾತ್ರ ಈತ ದೋಚಿಕೊಂಡು ಹೋಗಿರಬಹುದು. ಅದೇನೇ ಇದ್ದರೂ ದೋಚಿಕೊಂಡು ಹೋದ ಹಣಕ್ಕೆ ಹೋಲಿಸಿದರೆ ಬಿಟ್ಟು ಹೋದ ಹಣ ಲೆಕ್ಕಕ್ಕಿಲ್ಲ ಅನ್ನಬಹುದು. ಸುರೇಶ್ ಲಮಾಣಿ ಬಳಿ ಇಷ್ಟೊಂದು ಪ್ರಮಾಣದ ಹಣ ಇದೆ ಅನ್ನುವುದನ್ನು ಖಚಿತವಾಗಿ ತಿಳಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಸದ್ಯ ಈ ಪ್ರಕರಣದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!