
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.11): ಜಿಲ್ಲೆಯ ಅಬಕಾರಿ ಡಿಸಿ ನಾಗಶಯನ (DC Nagashyana) ಒಂದಲ್ಲ ಒಂದು ವಿಷಯದಲ್ಲಿ ಯಾವಾಗ್ಲು ಸುದ್ದಿ ಆಗುತ್ತಲೇ ಇರುತ್ತಾರೆ. ಪ್ರತೀ ಕೆಡಿಪಿ ಸಭೆಯಲ್ಲಿ (KDP Meeting) ಜನಪ್ರತಿನಿಧಿಗಳು ಅಬಕಾರಿ ಇಲಾಖೆ ಬಗ್ಗೆ ವಿಷಯ ಪ್ರಸ್ತಾಪ ಮಾಡುವ ವೇಳೆಯಲ್ಲೂ ಈ ವ್ಯಕ್ತಿ ಮಾತ್ರ ಸಭೆಗೆ ಪ್ರತಿ ಬಾರಿ ಗೈರಾಗುತ್ತಿದ್ದರು. ಅದೇ ರೀತಿ ಏನಾದ್ರು ಮಾಹಿತಿ ಪಡೆಯಲು ಕಚೇರಿಗೆ ತೆರಳಿದ್ರು ನಾಗಶಯನ ಸಾಮಾನ್ಯ ಜನರಿಗೆ ಸಿಗುವುದೇ ಕಷ್ಟವಾಗ್ತಿತ್ತು. ಆದ್ರೆ ನಿನ್ನೆ ಅದೇನ್ ಗ್ರಹಚಾರನೋ ಏನೋ ಲಂಚ ಸ್ವೀಕರಿಸುವ ವೇಳೆ ರೆಡ್ ಆಂಡ್ ಅಗಿ ಎಸಿಬಿ (ACB) ಬಲೆಗೆ ಬಿದ್ದಿದ್ದಾರೆ.
ಬಾರ್ ಲೈಸೆನ್ಸ್ ರಿನಿವಲ್ಗಾಗಿ 3.28 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಾಗಶಯನ: ಅಬಕಾರಿ ಇಲಾಖೆ ಅಂದ ಮೇಲೆ ಜಿಲ್ಲೆಯಲ್ಲಿ ಬರುವ ಎಲ್ಲಾ ಮದ್ಯದ ಅಂಗಡಿಗಳ ಮಾಲೀಕರು ಅವುಗಳನ್ನು ಇಷ್ಟು ವರ್ಷಕ್ಕೊಮ್ಮೆ ರಿನಿವಲ್ ಮಾಡಿಸಿಕೊಳ್ಳುವುದು ಸಹಜ. ಅದಕ್ಕಂತಲೇ ಸರ್ಕಾರ ಶುಲ್ಕವನ್ನು ನಿಗದಿ ಮಾಡಿರುತ್ತದೆ. ಆದ್ರೆ ನಾಗಶಯನ ಮಾತ್ರ ಕಳೆದೊಂದು ವಾರದಿಂದ ಚಿತ್ರದುರ್ಗ ನಗರದ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಒಂದಾದ ದುರ್ಗದ ಸಿರಿ ಹೋಟೆಲ್ ಮಾಲೀಕರಾದ ಬಾಬು ರೆಡ್ಡಿ ಅವರ ಒಡೆತನಕ್ಕೆ ಸೇರಿದ ಬಾರ್ ಲೈಸೆನ್ಸ್ ರಿನಿವಲ್ಗಾಗಿ ಕಚೇರಿಗೆ ಅಲೆದಿದ್ದಾರೆ. ಈ ಸಂದರ್ಭದಲ್ಲಿ ಅಬಕಾರಿ ಡಿಸಿ ವ್ಯವಹಾರ ಕುದುರಿಸಿದ್ದಾರೆ.
ಚಿತ್ರದುರ್ಗದಲ್ಲಿ ವರುಣನ ಆರ್ಭಟಕ್ಕೆ ಅಪಾರ ಬೆಳೆ ನಷ್ಟ: ಕಂಗಾಲಾದ ಅನ್ನದಾತ
ನೀವು ನನಗೆ 3.28 ಲಕ್ಷ ಕೊಟ್ಟರೆ ಮಾತ್ತ ರಿನಿವಲ್ ಮಾಡಿ ಕೊಡುವುದಾಗಿ ಡಿಮ್ಯಾಂಡ್ ಮಾಡಿದ್ದಾರೆ. ಕೆಲವು ಬಾರ್ ಮಾಲೀಕರು ತಮ್ಮ ಕೆಲಸ ಮುಗಿದ್ರೆ ಸಾಕಪ್ಪ ಎಂದು ಅಧಿಕಾರಿಗಳು ಕೇಳಿದಷ್ಟು ಲಂಚ ನೀಡಿ ಕೆಲಸ ಮಾಡಿಸಿಕೊಂಡು ತೆರಳುತ್ತಾರೆ. ಆದ್ರೆ ಬಾಬು ರೆಡ್ಡಿ ಸ್ವಲ್ಪ ಬುದ್ದಿವಂತ ಆಗಿದ್ದರಿಂದ ಜೊತೆಗೆ ಜಿ.ಪಂ ಮಾಜಿ ಸದಸ್ಯ ಆಗಿದ್ದರಿಂದ ಉಪಾಯದಿಂದ ಆಯ್ತು ಎಂದು ಒಪ್ಪಿಕೊಂಡು ಬಂದಿದ್ದಾರೆ. ನಂತರ ಪದೇ ಪದೇ ನಾಗಶಯನ ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ, ಒಂದು ಲಕ್ಷ ನಗದು ಹಣವನ್ನು ಲೈಸೆನ್ಸ್ ರಿನಿವಲ್ ಮಾಡಿಸಲು ಕೊಟ್ಟಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಅಬಕಾರಿ ಡಿಸಿ ದಿನೇ ದಿನೇ ಇನ್ನುಳಿದ ಹಣ ನೀಡುವಂತೆ ಬಾಬು ರೆಡ್ಡಿಗೆ ಪೀಡಿಸಿದ್ದಾನೆ. ಇದರಿಂದ ಬೇಸತ್ತ ಬಾರ್ ಮಾಲೀಕ ಎಸಿಬಿ ಅಧಿಕಾರಿಗಳ ಬಳಿ ಹೋಗಿ ದೂರು ಸಲ್ಲಿಸಿದ್ದಾರೆ. ಅಲ್ಲಿಂದ ಶುರುವಾಯ್ತು ನೋಡಿ ಉನ್ನತ ಹುದ್ದೆಯಲ್ಲಿರೋ ಅಬಕಾರಿ ಡಿಸಿಯ ಬ್ಯಾಡ್ ಟೈಮ್. ಸರಿಯಾದ ಟೈಮ್ ನೋಡಿ ಪ್ಲಾನ್ ಮಾಡಿದ ಎಸಿಬಿ ಅಧಿಕಾರಿಗಳು ಬಾರ್ ಮಾಲೀಕನ ಕೈಗೆ ಇನ್ನುಳಿದ 2.28 ಲಕ್ಷ ಹಣವನ್ನು ಕೊಟ್ಟು ಅಬಕಾರಿ ಡಿಸಿಗೆ ಕೊಡುವಂತೆ ಕಳಿಸಿದ್ದಾರೆ. ಅದೇ ವೇಳೆಗೆ ಕಚೇರಿಯಲ್ಲೇ ಇದ್ದ ನಾಗಶಯನ ಲಂಚದ ಹಣಕ್ಕಾಗಿ ಬಾಯ್ತೆರೆದು ಕುಳಿತಿದ್ದನಂತೆ.
ಇನ್ನೇನು ಬಾರ್ ಮಾಲೀಕ ಹಣ ನೀಡಬೇಕು ಅಷ್ಟರಲ್ಲೇ ಎಸಿಬಿ ಅಧಿಕಾರಿಗಳು ಅಬಕಾರಿ ಡಿಸಿಯ ಕರ್ಮಕಾಂಡವನ್ನು ರೆಡ್ ಆಂಡ್ ಆಗಿ ಹಿಡಿದಿದ್ದಾರೆ. ಇದೇ ಸಮಯದಲ್ಲಿ ನಾಗಶಯನ ವಾಹನ ಚಾಲಕ ಮೌಸಿನ್ ಖಾನ್ ಕೂಡ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಕಂಡು ಬಂದು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು 4-6 ಗಂಟೆಗಳ ಕಾಲ ಚಿತ್ರದುರ್ಗ ನಗರದ ಜೆಸಿಆರ್ 4ನೇ ಕ್ರಾಸ್ ನಲ್ಲಿರುವ ಅಬಕಾರಿ ಇಲಾಖೆ ಕಚೇರಿಯಲ್ಲಿ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ರಾತ್ರಿ 9 ಗಂಟೆ ಸುಮಾರಿಗೆ ಇಬ್ಬರನ್ನು ಜೆಸಿಗೆ ಕಳುಹಿಸಲಾಯಿತು.
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ, ಟಾಯ್ಲೆಟ್ನಲ್ಲಿ ದಂಧೆ!
ಡಿಸಿ ನಾಗಶಯನ ಹಿನ್ನೆಲೆ ಏನು?: ಅಬಕಾರಿ ಡಿಸಿ ಮೇಲೆ ಈ ರೀತಿಯ ಭ್ರಷ್ಟಾಚಾರ ಇದೇ ಮೊದಲಲ್ಲ, ಹಲವು ಭ್ರಷ್ಟಾಚಾರ ಆರೋಪಗಳು ಈ ಅಧಿಕಾರಿಯ ಮೇಲಿವೆ. ಅಲ್ಲದೇ ಈತನ ಪತ್ನಿ ಕವಿತಾ IPS ಅಧಿಕಾರಿಯಾಗಿದ್ದು, ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ಎಸ್ಪಿ ಆಗಿ ಕೆಲಸ ಮಾಡಿದ್ದರು. ಸದ್ಯ ಹೈದ್ರಾಬಾದ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೇ ಈತನು ರಾಜಕೀಯ ವಲಯದಲ್ಲಿ ಭಾರೀ ಪ್ರಭಾವಿಗಳ ಹಿನ್ನೆಲೆ ಹೊಂದಿರೋ ಕಾರಣ ಅನೇಕ ಬಾರಿ ಜನಪ್ರತಿನಿಧಿಗಳು ಸಭೆ ಕರೆದ್ರು ಗೈರಾಗ್ತಿದ್ದರು. ಇಂತಹ ಪ್ರಭಾವಿಗಳ ಹಿನ್ನೆಲೆಯುಳ್ಳ ಅಬಕಾರಿ ಡಿಸಿಯನ್ನೇ ಭರ್ಜರಿ ಭೇಟೆಯಾಡಿರೋ ಎಸಿಬಿ ಅಧಿಕಾರಿಗಳು ಮುಂದೆ ಆತನಿಗೆ ಯಾವ ರೀತಿ ವಿಚಾರಣೆಗೆ ಒಳಪಡಿಸ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ