
ಉಡುಪಿ (ಜೂ.23): ಆಕೆ ಮಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿ. ಹೊಟ್ಟೆ ನೋವು ಎಂದು ಉಡುಪಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾಕೆ, ಶವವಾಗಿ ಮನೆಗೆ ಮರಳಿದ್ದಾಳೆ. ಯಾವುದೇ ಕಾಯಿಲೆಯ ಲಕ್ಷಣವಿಲ್ಲದೆ ಕೇವಲ ಹೊಟ್ಟೆ ನೋವಿಗೆ ಎಂದು ಆಸ್ಪತ್ರೆ ದಾಖಲಾಗಿದ್ದವಳ ಈ ಸಾವು ಮನೆಯವರನ್ನ ಮತ್ತು ವಿದ್ಯಾರ್ಥಿ ಸಮೂಹವನ್ನ ಆಕ್ರೋಶಕ್ಕೀಡು ಮಾಡಿದೆ. ಇಂದು ಆಕ್ರೋಶದ ಕಟ್ಟೆ ಒಡೆದು ಬೃಹತ್ ಪ್ರತಿಭಟನೆ ನಡೆಯಿತು.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲು ನಿವಾಸಿ ನಿಕಿತಾ( 20) ಎನ್ನುವ ವಿದ್ಯಾರ್ಥಿನಿಯ ಕಥೆ. ಮಂಗಳೂರು ಕೆಪಿಟಿಯಲ್ಲಿ ಪೈನಲ್ ಇಯರ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದವಳು. ಒಂದು ದಿನ ಮನೆಗೆ ಬಂದವಳು ವಿಪರೀತ ಹೊಟ್ಟೆ ನೋವು ಎಂದು ಹೇಳಿದ್ದಾಳೆ. ಮನೆಯವರು ಉಡುಪಿ ನಗರದ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಬುಧವಾರದಂದು ಹೊಟ್ಟೆ ನೋವೆಂದು ದಾಖಲಾಗದ ಹುಡುಗಿ ಭಾನುವಾರ ಇಹಲೋಕ ತ್ಯಜಿಸಿದ್ದಾಳೆ.
ಕೌಟುಂಬಿಕ ಕಲಹಕ್ಕೆ ಬೇಸತ್ತು ನೇಣಿಗೆ ಶರಣಾದ ನವ ವಿವಾಹಿತೆ
ಕಾಪುವಿನ ಹುಡಿಗಿ ಸಾವಿಗೆ ಭಾರಿ ಪ್ರತಿಭಟನೆ: ಇದೇ ವಿಚಾರವಾಗಿ ಆಸ್ಪತ್ರೆಯವರ ನಿರ್ಲಕ್ಷದಿಂದಾಗಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎನ್ನುವ ಆಡಿಯೋ ಸಂದೇಶವನ್ನು ಕರಾವಳಿಯಂತೆ ವೈರಲ್ ಆಗಿತ್ತು. ಆದರೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗದ ಕಾರಣ ಈಕೆ ಎಲ್ಲಿಯ ಹುಡುಗಿ ಅನ್ನೋದು ಬಯಲಾಗಿರಲಿಲ್ಲ. ಆದರೆ ಉಡುಪಿಗೆ ಸಮೀಪದ ಕಾಪುವಿನ ಹುಡುಗಿ ಎಂದ ಗೊತ್ತಾದ ತಕ್ಷಣ, ಸ್ಥಳೀಯರು ಮತ್ತು ವಿದ್ಯಾರ್ಥಿ ಸಂಘಟನೆಗಳ ತಾಳ್ಮೆ ಕಟ್ಟೆ ಒಡೆದಿದೆ. ಮನೆಯವರಿಗೆ ಧೈರ್ಯ ತುಂಬಿದ ಆಕೆಯ ಕುಲಾಲ ಸಮುದಾಯದ ಮುಖಂಡರು ಹಾಗೂ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಎಬಿವಿಪಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿದರು . ಈ ಸಾವಿಗೆ ಸ್ಪಷ್ಟ ಉತ್ತರ ನೀಡುವಂತೆ ಆಗ್ರಹಿಸಿ ಆಸ್ಪತ್ರೆಗೆ ನುಗ್ಗುವ ಯತ್ನ ಮಾಡಿದೆ.
ಹತ್ತಾರು ಪರೀಕ್ಷೆ ಮಾಡಿದರೂ ಸತ್ತಿದ್ದೇಗೆ? : ಇಂದು ಬೆಳಿಗ್ಗೆ ನೂರಾರು ಜನ ವಿದ್ಯಾರ್ಥಿಗಳು ಉಡುಪಿ ನಗರದ ಸಿಟಿ ಆಸ್ಪತ್ರೆ ಮುಂಭಾಗದಲ್ಲಿ ಜಮಾಯಿಸಿದ್ದರು. ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಿಸಿದಾಕೆಯನ್ನ ಶವವಾಗಿ ಹೊರಗೆ ಕಳುಹಿಸಿದ್ದೀರಿ. ಈ ಸಾವಿನ ಕುರಿತಾಗಿ ಉತ್ತರ ನೀಡಿ ಆಸ್ಪತ್ರೆಯವರು ಸಾವಿನ ಜವಾಬ್ದಾರಿ ತೆಗೆದುಕೊಳ್ಳಿ ಎನ್ನುವ ಬೇಡಿಕೆ ಇಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆಸ್ಪತ್ರೆಗೆ ದಾಖಲಾದ ನಿಕಿತಾಳಿಗೆ ಸ್ಕ್ಯಾನಿಂಗ್, ಎಂಡೋಸ್ಕೋಪಿ, ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಸರಿಯಾದ ಮಾಹಿತಿ ನೀಡದೆ ಆಪರೇಷನ್ ನಡೆಸಿದ್ದಾರೆ ಎಂದು ಆರೋಪಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ಪೊಲೀಸರು ವಿದ್ಯಾರ್ಥಿಗಳನ್ನ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಆಸ್ಪತ್ರೆಯವರು ಬಂದು ಮಾತನಾಡುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.
ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ದೂರು: ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆಯ ಮುಖ್ಯ ವೈದ್ಯರು ಪ್ರತಿಭಟನಾಕಾರರಿಗೆ ನಿಖಿತ ಚಿಕಿತ್ಸೆ ವಿಚಾರವಾಗಿ ಮಾತನಾಡಿ ಮನವೊಲಿಸುವ ಯತ್ನ ಮಾಡಿದರು. ಅಲ್ಲದೇ ಆ ದಿನ ಡ್ಯುಟಿಯಲ್ಲಿ ವೈದ್ಯೆ ಬಂದು ಘಟನೆ ವಿಚಾರವಾಗಿ ಮಾತಾನಾಡಿದರು. ಇಷ್ಟಾದರೂ ಕೂಡ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪಟ್ಟು ಹಿಡಿದರು. ಬಳಿಕ ಪ್ರತಿಭಟನೆ ಗೆ ತಾತ್ಕಾಲಿಕ ಬ್ರೇಕ್ ನೀಡಿದ ಎಬಿವಿಪಿ ವಿದ್ಯಾರ್ಥಿಗಳು ಉಡುಪಿ ಡಿಸಿ, ಡಿಎಚ್ ಓ ದೂರು ನೀಡಿ ತನಿಖೇ ನಡೆಸುವಂತೆ ಮನವಿ ಸಲ್ಲಿಸಿದಾಗಿ ತಿಳಿಸಿ ತೆರಳಿದರು.
Fraud: ಹಣ ಡಬ್ಲಿಂಗ್ ಕಂಪನಿಗೆ ಲಕ್ಷಾಂತರ ಹೂಡಿಕೆ: ಮೋಸಕ್ಕೊಳಗಾದ ಶಿಕ್ಷಕ ಆತ್ಮಹತ್ಯೆ
ಮಗಳ ಸಾವಿನ ಬಗ್ಗೆ ದೂರು ನೀಡದ ಪೋಷಕರು: ಮಗಳ ಸಾವಿನ ಆಘಾತದಲ್ಲಿ ಮನೆಯವರು ಯಾವುದೇ ಪೊಲೀಸ್ ದೂರು ನೀಡಿಲ್ಲ. ಮೇಲಾಗಿ ಮೃತಳ ಮರಣೋತ್ತರ ಪರೀಕ್ಷೆ ನಡೆಸದೆ, ಅಂತಿಮ ಸಂಸ್ಕಾರ ಪೂರೈಸಿದ್ದಾರೆ. ಇನ್ನೊಂದೆಡೆ ವೈದ್ಯರು ತಾವು ನೀಡಿರುವ ಸ್ಪಷ್ಟೀಕರಣ ದಲ್ಲಿ ಎಲ್ಲಾ ತಾಂತ್ರಿಕ ವಿವರಗಳನ್ನು ನಮೂದಿಸಿದ್ದಾರೆ. ಮಾತ್ರವಲ್ಲ ಆಕೆಗೆ ನಡೆಸಿದ ಶಸ್ತ್ರಚಿಕಿತ್ಸೆಯ ವಿಡಿಯೋ ದಾಖಲೀಕರಣ ಕೂಡ ಇದೆ ಎಂದು ತಿಳಿಸಿದ್ದಾರೆ. ನಮ್ಮಿಂದ ಯಾವುದೇ ತಪ್ಪಾಗಿಲ್ಲ ಈ ಸಾವಿನ ಬಗ್ಗೆ ನಮಗೆ ವಿಷಾಧವಿದೆ ಎಂದು ಹೇಳಿದ್ದಾರೆ.
ನಿತ್ಯವೂ ಮನೆಯಿಂದ ಕಾಲೇಜಿಗೆ ತೆರಳಿ ನಗುನಗುತ ಇರುತ್ತಿದ್ದ ವಿದ್ಯಾರ್ಥಿನಿ ಹಠಾತ್ತನೆ ಸಾವನ್ನಪ್ಪಿರೋದು ಮನೆಯವರಿಗೆ ನೋವು ತಂದಿದೆ. ಸಾವಿನ ವಿಚಾರವಾಗಿ ಸೂಕ್ತ ತನಿಖೆ ನಡೆಸಿ ತಪ್ಪಿತಸರಿಗೆ ಶಿಕ್ಷೆ ನೀಡಬೇಕು ಹಾಗೂ ಮನೆಯವರಿಗೆ ಪರಿಹಾರವನ್ನು ನೀಡಬೇಕು ಎನ್ನುವ ಎಬಿವಿಪಿ ವಿದ್ಯಾರ್ಥಿ ಸಂಘಟನೆಗೆ ಉಳಿದ ಸಂಘಟನೆಗಳು ಸಹಕಾರ ನೀಡಿದೆ. ಇನ್ನು ಈ ವಿಚಾರವಾಗಿ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕಿದೆ. ತಪ್ಪಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಬಿವಿಪಿ ಎಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ