
ಬೆಂಗಳೂರು (ಆ.3) : ಬಾಲ್ಯದ ಸ್ನೇಹಿತನ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಮರಳು ಮಾಡಿ ಹಣ ಹಾಗೂ ಚಿನ್ನಾಭರಣ ದೋಚಿದ್ದ ಕಿಡಿಗೇಡಿ ಉಬರ್ ಕ್ಯಾಬ್ ಚಾಲಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಸರಘಟ್ಟಸಮೀಪದ ತೋಟದಗುಡ್ಡದಹಳ್ಳಿ ನಿವಾಸಿ ಕಿರಣ್ ಕುಮಾರ್(Kiran kumar totadaguddadahalli) ಬಂಧಿತ, ಆರೋಪಿಯಿಂದ 960 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಗೆಳೆಯನ ನೆಪದಲ್ಲಿ ವಂಚನೆ:
ತಮ್ಮ ಕುಟುಂಬದ ಜತೆ ಇಂದಿರಾ ನಗರದಲ್ಲಿ ಸಂತ್ರಸ್ತೆ ನೆಲೆಸಿದ್ದು, ಅವರ ಪತಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. 2022ರ ನವೆಂಬರ್ನಲ್ಲಿ ಕೆಲಸದ ನಿಮಿತ್ತ ಬಾಣಸವಾಡಿಗೆ ತೆರಳಲು ಉಬರ್ ಕ್ಯಾಬನ್ನು ಅವರು ಬುಕ್ ಮಾಡಿದ್ದರು. ಬಾಡಿಗೆಗೆ ಬಂದ ಆರೋಪಿ ಚಾಲಕ ಕಿರಣ್, ಪೂರ್ವನಿಗದಿಯಂತೆ ಬಾಣಸವಾಡಿಗೆ ಸಂತ್ರಸ್ತೆಯನ್ನು ಡ್ರಾಪ್ ಮಾಡಿದ್ದ. ಪ್ರಯಾಣದ ವೇಳೆ ಸುಮನ್ ಹೆಸರಿನ ಬಾಲ್ಯದ ಸ್ನೇಹಿತನ ಜತೆ ಮೊಬೈಲ್ನಲ್ಲಿ ಮಾತನಾಡುತ್ತ ತಮ್ಮ ಬದುಕಿನ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು ಅವರು ಭಾವುಕರಾಗಿದ್ದರು. ಈ ಮಾತುಕತೆ ಆಲಿಸಿದ ಚಾಲಕ ಕಿರಣ್, ಆ ಪ್ರಯಾಣ ಮುಗಿದ ಬಳಿಕ ಮಹಿಳೆಯ ಮೊಬೈಲ್ ನಂಬರನ್ನು ಸೇವ್ ಮಾಡಿಕೊಂಡಿದ್ದ. ಕೆಲ ದಿನಗಳ ಬಳಿಕ ಬಾಲ್ಯದ ಸ್ನೇಹಿತನ ಸುಮನ್ ಹೆಸರಿನಲ್ಲಿ ಸಂತ್ರಸ್ತೆಗೆ ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಿದ ಆರೋಪಿ, ತನ್ನ ಹೊಸ ನಂಬರ್ ಇದು ಎಂದು ಹೇಳಿ ನಂಬಿಸಿದ್ದ. ಹೀಗೆ ಪರಸ್ಪರ ಚಾಟಿಂಗ್ ಮುಂದುವರೆಯಿತು ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿ ವೇಳೆ ಫುಡ್ ಡೆಲಿವರಿ ಬಾಯ್ ಮೊಬೈಲ್ ದೋಚುತ್ತಿದ್ದವರ ಬಂಧನ
ಕೆಲ ದಿನಗಳ ತರುವಾಯ ತನಗೆ ಹಣದ ಅವಶ್ಯಕತೆ ಇದೆ. ಕೆಲ ದಿನಗಳ ಮಟ್ಟಿಗೆ ಸಾಲ ಕೊಡು ಎಂದು ಹೇಳಿದ ಆರೋಪಿ, ಹಂತ ಹಂತವಾಗಿ ಆಕೆಯಿಂದ .22 ಲಕ್ಷ ವಸೂಲಿ ಮಾಡಿದ್ದ. ಹಣ ಇಲ್ಲವೆಂದಾಗ ನಾಜೂಕಿನ ಮಾತಿನಿಂದ ಮರಳು ಮಾಡಿ ಸುಮಾರು 960 ಗ್ರಾಂ ಚಿನ್ನಾಭರಣ ಪಡೆದು ಅಡಮಾನವಿಟ್ಟು ಹಣ ಪಡೆದಿದ್ದ. ಈ ದುಡ್ಡಿನಲ್ಲಿ ಕಿರಣ್ ಮೋಜು ಮಾಡಿದ್ದ. ನಿರಂತರವಾಗಿ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡ ಆಕೆ, ಹಣ ಕೊಡಲು ನಿರಾಕರಿಸಿದ್ದಳು. ಆಗ ಮೋಸ ಕೃತ್ಯವು ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಬ್ಲ್ಯಾಕ್ಮೇಲ್ ಮಾಡಿದ ಕ್ಯಾಬ್ ಚಾಲಕ
ತನ್ನ ಮುಖವಾಡ ಕಳಚಿ ಬಿದ್ದ ಬಳಿಕ ಆರೋಪಿ, ‘ನೀನು ಹಣ ಕೊಡದೆ ಹೋದರೆ ನನ್ನೊಂದಿಗೆ ಚಾಟಿಂಗ್ ಮಾಡಿರುವುದನ್ನು ಕುಟುಂಬದವರಿಗೆ ಹೇಳುತ್ತೇನೆ. ಮಾತುಕತೆಯ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮರ್ಯಾದೆ ಕಳೆಯುತ್ತೇನೆ’ ಎಂದು ಬ್ಲಾಕ್ಮೇಲ್ ಶುರು ಮಾಡಿದ್ದ. ಈ ಬೆದರಿಕೆ ಹಿನ್ನೆಲೆಯಲ್ಲಿ ಹೆದರಿದ ಆಕೆ, ಆರೋಪಿಗೆ ಮತ್ತೆ ಹಣ ಕೊಟ್ಟಿದ್ದಳು. ಕೊನೆಗೆ ಬ್ಲಾಕ್ಮೇಲ್ ಹಿಂಸೆ ತಡೆಯಲಾರದೆ ತನ್ನ ಪತಿ ಬಳಿ ನಡೆದ ಘಟನೆಯನ್ನು ಹೇಳಿ ಆಕೆ ಕಣ್ಣೀರಿಟ್ಟಿದ್ದಳು. ಈ ವಿಚಾರ ತಿಳಿದ ಕೂಡಲೇ ರಾಮಮೂರ್ತಿ ನಗರ ಠಾಣೆಗೆ ತೆರಳಿ ಸಂತ್ರಸ್ತೆ ಪತಿ ದೂರು ನೀಡಿದರು ಎಂದು ಡಿಸಿಪಿ ಡಾ
ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಪ್ರೌಢಶಾಲೆಯಲ್ಲಿ ಓದುವಾಗ ಸುಮನ್ ಹಾಗೂ ಸಂತ್ರಸ್ತೆ ಸಹಪಾಠಿಗಳಾಗಿದ್ದರು. ಆಗ ಸುಮನ್ ಕುಟುಂಬದವರ ಬಗ್ಗೆ ತಿಳಿದುಕೊಂಡಿದ್ದ ಆಕೆ, ಗೆಳೆಯನ ಆರ್ಥಿಕ ಸುಸ್ಥಿರವಾದ ಕುಟುಂಬದವನು. ನನ್ನ ಕಷ್ಟಗಳಿಗೆ ಆತ ಸ್ಪಂದಿಸುತ್ತಾನೆ ಎಂದು ಭಾವಿಸಿ ಮೋಸದ ಬಲೆಗೆ ಬಿದ್ದಿದ್ದಳು. ಕಳೆದ ನವೆಂಬರ್ ಬಳಿಕ ಗೆಳತಿಗೆ ಸುಮನ್ ಸಂಪರ್ಕಕ್ಕೆ ಬಂದಿರಲಿಲ್ಲ. ಹೀಗಾಗಿ ಸುಮನ್ ಹೆಸರು ಬಳಸಿಕೊಂಡು ಕಿರಣ್ ವಂಚನೆ ಮಾಡಲು ಸುಲಭವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಖವಾಡ ಕಳಚಿದ ಮೊಬೈಲ್ ನಂಬರ್
ಸಂತ್ರಸ್ತೆಯಿಂದ ಚಿನ್ನಾಭರಣ ಸ್ವೀಕರಿಸಲು ಖುದ್ದು ಕಿರಣ್ ಬಂದಿದ್ದ. ಆದರೆ ಆ ವೇಳೆ ಗೆಳೆಯ ಸುಮನ್ ಕಳುಹಿಸಿದ್ದಾನೆ ಎಂದು ಹೇಳಿ ಆಕೆಯನ್ನು ಆರೋಪಿ ಯಮಾರಿಸಿದ್ದ. ಇದೇ ನಾಲ್ಕೈದು ಬಾರಿ ಆಭರಣ ಪಡೆಯಲು ಬಂದಾಗ ಆತನ ಮೇಲೆ ಸಂತ್ರಸ್ತೆಗೆ ಅನುಮಾನ ಬಂದಿದೆ. ಆತನ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಉಬರ್ ಕ್ಯಾಬ್ ಚಾಲಕ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರುದ್ಯೋಗಿ ಪತ್ನಿಗೆ ಕಂಪನಿ ದುಡ್ಡಿಂದ 10 ವರ್ಷ ಕಾಲ ಸಂಬಳ: 4 ಕೋಟಿ ರೂ. ವಂಚಿಸಿದ ಖತರ್ನಾಕ್ ಉದ್ಯೋಗಿ!
ವಂಚಿಸಿದ ದುಡ್ಡನ್ನು ಬೆಟ್ಟಿಂಗ್ನಲ್ಲಿ ಕಳೆದ
ಬಾಲ್ಯದ ಹೆಸರಿನಲ್ಲಿ ಗೃಹಿಣಿಗೆ ವಂಚಿಸಿ ಸಂಪಾದಿಸಿದ ಹಣವನ್ನು ಆನ್ಲೈನ್ ಬೆಟ್ಟಿಂಗ್ನಲ್ಲಿ ಆರೋಪಿ ಕಳೆದುಕೊಂಡಿದ್ದ. ಆತ ಅಡಮಾನವಿಟ್ಟಿದ್ದ ಚಿನ್ನಾಭರಣವನ್ನು ಬಿಡಿಸಿ ಸಂತ್ರಸ್ತೆಗೆ ಮರಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ