
ಶಿವಮೊಗ್ಗ(ಡಿ.12): ಪ್ರೇಮಿಗಳ ವಿಚಾರದಲ್ಲಿ ನಡೆದ ಜಗಳ ಇಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ. ಮಂಜುನಾಥ್ (64) ಮತ್ತು ಕಿರಣ್ (26) ಮೃತಪಟ್ಟ ದುರ್ದೈವಿಗಳು.
ಘಟನೆಗೆ ಮೂಲ ಕಾರಣ ಪ್ರೇಮಿಗಳ ನಡುವಿನ ವೈಯಕ್ತಿಕ ವಿಚಾರ. ಎರಡು ದಿನಗಳ ಹಿಂದೆ ನಂದೀಶ್ ಮತ್ತು ಸೃಷ್ಟಿ ಎಂಬ ಯುವಕ-ಯುವತಿ ಓಡಿ ಹೋಗಿದ್ದರು. ಇಂದು ಸಂಜೆ ಅವರು ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ಯುವತಿ ಸೃಷ್ಟಿ, ತಾನು ತನ್ನ ಪ್ರಿಯಕರ ನಂದೀಶ್ನೊಂದಿಗೆ ಹೋಗುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು.
ಈ ಸಂದರ್ಭದಲ್ಲಿ ಯುವತಿ ಸೃಷ್ಟಿಯ ಸಹೋದರ ಹಾಗೂ ಆತನ ಸ್ನೇಹಿತರಾದ ಶಶಿ, ಸಂಡು, ಕೆಂಚ, ಸುರೇಶ್ ಸೇರಿದಂತೆ ಇತರರು ಸೇರಿ ತಕರಾರು ತೆಗೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಅದು ಮಾರಾಮಾರಿಯಾಗಿ ಪರಿವರ್ತನೆಯಾಗಿದೆ.
ಗುಂಪುಗಳ ನಡುವೆ ನಡೆದ ಈ ಜಗಳವನ್ನು ಬಿಡಿಸಲು ಸ್ಥಳೀಯರಾದ ಮಂಜುನಾಥ್ (64) ಮತ್ತು ಕಿರಣ್ (26) ಅವರು ಮಧ್ಯಪ್ರವೇಶಿಸಿದ್ದಾರೆ. ದುಷ್ಕರ್ಮಿಗಳು ಜಗಳ ಬಿಡಿಸಲು ಬಂದ ಈ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಮತ್ತು ಕಿರಣ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ಘಟನೆಯ ನಂತರ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಕೊಲೆಗೆ ಕಾರಣರಾದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ