
ಬೆಂಗಳೂರು(ಸೆ.03): ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗಳಿಗೆ ತೆರಳಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳಿಯರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಮೂಲದ ಕೃಷ್ಣವೇಣಿ (60) ಮತ್ತು ರತ್ನ ಪೆರುಮಾಳ್ (45) ಬಂಧಿತರು. ಆರೋಪಿಗಳು ಏಪ್ರಿಲ್ 23ರಂದು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎದುರಿನ ರಾಜಲಕ್ಷ್ಮಿ ಜುವೆಲರಿ ಅಂಗಡಿಗೆ ಬಂದು ಮಾಲೀಕರ ಗಮನ ಬೇರೆಡೆ ಸೆಳೆದು 142 ಗ್ರಾಂ ತೂಕದ 6 ಜತೆ ಚಿನ್ನದ ಓಲೆ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಜುವೆಲರಿ ಮಾಲೀಕ ಜೋದಾರಾಮ್ ನೀಡಿದ ದೂರಿನ ಮೇರೆಗೆ ತಮಿಳುನಾಡಿನಲ್ಲಿ ಆರೋ ಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ; ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಸೆರೆ
ವೃತ್ತಿಪರ ಕಳ್ಳಿಯರಾಗಿರುವ ಆರೋಪಿಗಳು 10 ವರ್ಷದ ಹಿಂದೆ ಚಿಕ್ಕಪೇಟೆ, ನಂದಿನಿ ಲೇಔಟ್, ಮಲ್ಲೇಶ್ವರ, ಮಾಲೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಜುವೆಲರಿ ಅಂಗಡಿಗಳಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕದ್ದಿದ್ದರು. ಈ ಸಂಬಂಧ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಬಳಿಕ ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದು ತಮ್ಮ ಕಳ್ಳತನ ಚಾಳಿ ಮುಂದುವರೆಸಿದ್ದರು. ಇದೀಗ 10 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾರೆ.
ಗಮನ ಬೇರೆಡೆ ಸೆಳೆದು ಕೈ ಚಳಕ
ಆರೋಪಿಗಳು ಚಿನ್ನಾಭರಣ ಅಂಗಡಿಗೆ ತೆರಳಿ ಹತ್ತಾರು ವಿನ್ಯಾಸದ ಒಡವೆಗಳನ್ನು ತೋರಿಸುವಂತೆ ಕೇಳುತ್ತಿದ್ದರು. ಅಂಗಡಿ ಸಿಬ್ಬಂದಿ ಚಿನ್ನಾಭರಣದ ಟ್ರೇಗಳನ್ನು ಟೇಬಲ್ ಮೇಲೆ ಇರಿಸಿದ ಬಳಿಕ ಒಡವೆಗಳನ್ನು ಆರೋಪಿ ಗಳು ಪರಿಶೀಲಿಸುವಂತೆ ನಾಟಕ ಮಾಡುತ್ತಿದ್ದರು. ಕೆಲ ಸಮಯದ ಬಳಿಕ ಬೇರೆ ವಿನ್ಯಾಸದ ಒಡವೆ ತೋರಿಸುವಂತೆ ಕೇಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನದ ಒಡವೆಗಳನ್ನು ಎಗರಿಸುತ್ತಿದ್ದರು. ಅಸಲಿ ಆಭರಣವಿದ್ದ ಜಾಗಕ್ಕೆ ಕಡಿಮೆ ಗುಣಮಟ್ಟದ ಹಾಗೂ ಕಡಿಮೆ ತೂಕದ ಆಭರಣ ಇರಿಸುತ್ತಿದ್ದರು. ಬಳಿಕ ಈ ಒಡವೆಗಳು ಇಷ್ಟವಾಗಲಿಲ್ಲ ಎಂದು ಹೇಳಿ ಜಾಗ ಖಾಲಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಗರ್ಭಿಣಿ ಪತ್ನಿಯನ್ನು ಹಿಗ್ಗಾಮುಗ್ಗ ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್
ಸಿಕ್ಕಿಬಿದ್ದರೆ ಬೇರೆ ಹೆಸರು !
ಈ ಇಬ್ಬರು ಆರೋಪಿಗಳು ಈ ಹಿಂದೆ ನಗರದಲ್ಲಿ ಜುವೆಲವರಿ ಅಂಗಡಿಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಾಗ ಅಸಲಿ ಹೆಸರು ಹೇಳದೆ ಬೇರೆ ಹೆಸರು ಹೇಳುತ್ತಿದ್ದರು. ಒಂದೊಂದು ಪೊಲೀಸ್ ಠಾಣೆಯಲ್ಲಿ ಒಂದೊಂದು ಹೆಸರು ಹೇಳಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಕಲಾ, ರತ್ನ, ಸುಮಾ, ಮಾಲಾ ಸೇರಿದಂತೆ ಬೇರೆ ಬೇರೆ ಹೆಸರುಗಳನ್ನು ಹೇಳಿರುವುದು ಗೊತ್ತಾಗಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ಸುಳಿವು
ಬನಶಂಕರಿ ಠಾಣಾ ವ್ಯಾಪ್ತಿಯ ಜುವೆಲರಿ ಅಂಗಡಿ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿಗಳ ಕೈಚಳಕ ಸೆರೆಯಾಗಿತ್ತು. ಬಂಧಿತ ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ಹಿಂದಿನ ಜುವೆಲರಿ ಅಂಗಡಿಗಳ ಕಳ್ಳತನ ಪ್ರಕರಣಗಳ ಆರೋಪಿಗಳ ಬೆರಳಚ್ಚುಗೆ ಹೋಲಿಕೆ ಮಾಡಿದಾಗ 10 ವರ್ಷದ ಹಿಂದೆ ಆರೋಪಿಗಳು ನಗರದಲ್ಲಿ ಬಂಧನಕ್ಕೆ ಒಳಗಾಗಿರುವುದು ಇದೇ ವೇಳೆ ಗೊತ್ತಾಗಿದೆ. ಆದರೆ, ಬೆರಳಚ್ಚು ಹೋಲಿಕೆ ಆದರೂ ಹೆಸರುಗಳು ಮಾತ್ರ ಬೇರೆ ಇತ್ತು. ಈ ಸಂಬಂಧ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ